ಜೆ.ಪಿ.ನಗರದ ನಿವಾಸ ತಲುಪಿದ ಅಂಬರೀಶ್ ಪಾರ್ಥೀವ ಶರೀರ
ಯಾರೂ ಊಹಿಸದ ಕಹಿ ಸುದ್ದಿಯೊಂದು ನಿನ್ನೆ (ನವೆಂಬರ್ 24) ರಾತ್ರಿ ಹೊರಬಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ರೆಬೆಲ್ ಸ್ಟಾರ್ ಅಂಬರೀಶ್ ನಿನ್ನೆ ರಾತ್ರಿ 10:15 ಸುಮಾರಿಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು.
ಮಧ್ಯರಾತ್ರಿ 3.30 ರ ಸುಮಾರಿಗೆ ವಿಕ್ರಂ ಆಸ್ಪತ್ರೆಯಿಂದ ಅಂಬರೀಶ್ ಅವರ ಪಾರ್ಥೀವ ಶರೀರವನ್ನ ಜೆ.ಪಿ.ನಗರದ ನಿವಾಸಕ್ಕೆ ಕರೆತರಲಾಯಿತು. ಅಷ್ಟರಲ್ಲಾಗಲೇ, ಅಭಿಮಾನಿಗಳ ದಂಡು ಅಂಬರೀಶ್ ನಿವಾಸದ ಮುಂದೆ ಜಮಾಯಿಸಿದ್ದರಿಂದ, ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.

ಅಂಬರೀಶ್ ನಿವಾಸದ ಮುಂದೆ ಕುಟುಂಬಸ್ಥರಿಗೆ ಮಾತ್ರ ಅಂತಿಮ ದರ್ಶನದ ಅವಕಾಶ ಕಲ್ಪಿಸಲಾಗಿತ್ತು. ಆದ್ರೆ, ತಮಗೂ ಅಂತಿಮ ದರ್ಶನದ ಅವಕಾಶ ಕೊಡಿ ಅಂತ ಪೊಲೀಸರ ಬಳಿ ಅಭಿಮಾನಿಗಳು ಗೋಗರೆದ ಪರಿಣಾಮ, ಅಭಿಮಾನಿಗಳಿಗೂ ಅಂಬಿ ನಿವಾಸದಲ್ಲೇ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಯಿತು.
ಭಾನುವಾರ ಬೆಳಗ್ಗೆ 8 ಗಂಟೆಯಿಂದ ಬೆಂಗಳೂರಿನ ಕಂಠೀರವ ಸ್ಟೇಡಿಯಮ್ ನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಇಡೀ ದಿನ ಕಂಠೀರವ ಸ್ಟೇಡಿಯಮ್ ನಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆಯಬಹುದು. ಮಂಡ್ಯದಿಂದ ಬರುವ ಅಭಿಮಾನಿಗಳಿಗೆ ಕೆ.ಎಸ್.ಆರ್.ಟಿ.ಸಿ ಕಡೆಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸೋಮವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್ ಸ್ಮಾರಕ ಪಕ್ಕದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂಬರೀಶ್ ಅಂತಿಮ ಸಂಸ್ಕಾರ ನಡೆಯಲಿದೆ.


Click it and Unblock the Notifications











