ಹಿರಿಯಣ್ಣ ಅಂಬಿ ಇನ್ನಿಲ್ಲ: ಕಂಬನಿ ಮಿಡಿದ ಕನ್ನಡ ಚಿತ್ರರಂಗ
Recommended Video

ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿ ಬಿದ್ದಿದೆ. ಸ್ಯಾಂಡಲ್ ವುಡ್ ನ ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರದ ಸೂತ್ರ ನೀಡುತ್ತಿದ್ದ ಅಂಬರೀಶ್ ಇಂದು ನೆನಪು ಮಾತ್ರ.
ಗಾಂಧಿನಗರದ ಜಲೀಲ.. ಮಂಡ್ಯದ ಗಂಡು.. ರೆಬೆಲ್ ಸ್ಟಾರ್ ಅಂತೆಲ್ಲಾ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ಅಂಬರೀಶ್ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅಂಬರೀಶ್ ನಿನ್ನೆ (ನವೆಂಬರ್ 24) ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾದರು.
ಅಂಬರೀಶ್ ವಿಧಿವಶರಾದ ಸುದ್ದಿ ಕೇಳಿ ಇಡೀ ಸ್ಯಾಂಡಲ್ ವುಡ್ ಅಕ್ಷರಶಃ ದಿಗ್ಭ್ರಮೆಗೊಂಡಿದೆ. ಕಹಿ ಸುದ್ದಿ ತಿಳಿಯುತ್ತಿದ್ದಂತೆಯೇ, ನಟ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ರಾಕ್ ಲೈನ್ ವೆಂಕಟೇಶ್, ದ್ವಾರಕೀಶ್ ಸೇರಿದಂತೆ ಹಲವು ನಟ-ನಟಿಯರು ವಿಕ್ರಂ ಆಸ್ಪತ್ರೆಗೆ ಧಾವಿಸಿದರು.
ಅಂಬಿ ನಿಧನಕ್ಕೆ ಕನ್ನಡ ಚಿತ್ರರಂಗದ ತಾರೆಯರು ಸಲ್ಲಿಸಿರುವ ನುಡಿ ನಮನ ಇಲ್ಲಿದೆ. ಓದಿರಿ...
ದರ್ಶನ್ ಕಂಬನಿ
''ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸ್ವೀಡನ್ ನಲ್ಲಿ ನಡೆಯುತ್ತಿದ್ದ 'ಯಜಮಾನ' ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟು ಬೇಗ ಬೆಂಗಳೂರಿಗೆ ವಾಪಸ್ ಆಗುತ್ತಿದ್ದೇವೆ'' ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.

ಕಣ್ಣೀರಿಟ್ಟ ನಟಿ ಶ್ರುತಿ
''ಇಂದು ಕರಾಳ ದಿನ. ಇದನ್ನು ನಂಬಲು ಸಾಧ್ಯವೇ ಆಗುತ್ತಿಲ್ಲ. ಇತ್ತೀಚೆಗಷ್ಟೇ ಅವರನ್ನು ಭೇಟಿಯಾಗಿದ್ದೆ. ನನ್ನ ಮಗಳನ್ನು ಕಂಡರೆ ಅವರಿಗೆ ಬಹಳ ಪ್ರೀತಿ. ನಾವು ಅಂದುಕೊಂಡಂತೆ ಬದುಕುವುದು ಬಹಳ ಕಷ್ಟ. ಇತರರಿಗಾಗಿ ತಮ್ಮ ಗುಣವನ್ನು ಬದಲಾಯಿಸಿಕೊಳ್ಳುವಂಥ ವ್ಯಕ್ತಿ ಅವರಾಗಿರಲಿಲ್ಲ. ಚಿತ್ರರಂಗದ ಏನೇ ಆದರೂ ಅಂಬರೀಶ್ ಅವರ ಬಳಿ ಹೋದರೆ ಸಮಸ್ಯೆ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇತ್ತು. ನಮಗೆ ಕೋರ್ಟ್ ಬೇಕಿರಲಿಲ್ಲ, ಜಡ್ಜ್ ಬೇಕಿರಲಿಲ್ಲ. ನಮ್ಮ ಪಾಲಿಗೆ ಅವರಿದ್ದರು. ಆದರೆ ನಮಗೆ ಈಗ ಶೂನ್ಯ ಆವರಿಸಿದೆ'' - ಶ್ರುತಿ, ನಟಿ
ತುಂಬಾ ದುಃಖವಾಗಿದೆ
''ತುಂಬಾ ದುಃಖವಾಯಿತು. ಕಳೆದ ಗುರುವಾರ ಕರೆ ಮಾಡಿದ್ದೆ. ದೂರವಾಣಿ ಕನೆಕ್ಟ್ ಆಗಲಿಲ್ಲ. ನಾನು 8MM ಬಿಡುಗಡೆಯಲ್ಲಿ ಬಿಸಿಯಾಗಿಬಿಟ್ಟರೆ. ಇಂದು ತಿರುನಲ್ಲಾರ್ ಗೆ ದೇವರಕಾರ್ಯಕ್ಕೆ ಬಂದೆ. ಅಂಬಿ ಸಾರ್ ದೇವರ ಬಳಿಯೇ ಹೋಗಿಬಿಟ್ಟರು.. ರಾಯರಲ್ಲಿ ಲೀನವಾದರು.. ಓಂ ಶಾಂತಿ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಕತ್ತಲೆ ಆವರಿಸಿದೆ
''ನಾನೀಗ ಯು.ಎಸ್ ನಲ್ಲಿದ್ದೇನೆ. ಈಗಷ್ಟೇ ನನಗೆ ಕರೆ ಬಂತು. ಸುದ್ದಿ ಕೇಳಿ ನನಗೆ ಕತ್ತಲೆ ಆವರಿಸಿತು. ನನಗೆ ನಂಬಲು ಸಾಧ್ಯವಾಗಲಿಲ್ಲ. ಇನ್ಮುಂದೆ ನಮಗೆ ಧೈರ್ಯ ಹೇಳುವವರು ಯಾರು.? ಅಂಬರೀಶ್ ಮಾನವತಾ ಮೂರ್ತಿ. ಅವರು ಮಾನವೀಯತೆ ತುಂಬಿರುವ ವ್ಯಕ್ತಿ. ಚಿತ್ರರಂಗದಲ್ಲಿ ಎಲ್ಲದಕ್ಕೂ ಅಂಬರೀಶ್ ಬೇಕಿತ್ತು. ಕಲಾವಿದರ ಸಂಘಕ್ಕೆ ಅಂಬರೀಶ್ ಕಾರಣ. ಅಂಬರೀಶ್ ಇಲ್ಲದೆ ಏನೂ ನಡೆಯುತ್ತಿರಲಿಲ್ಲ. ಅಂಥದ್ರಲ್ಲಿ ಅವರು ಈಗಿಲ್ಲ ಅಂದ್ರೆ.. ನಂಬಲು ಆಗಲ್ಲ. ಬಹಳ ಕಷ್ಟ ಆಗುತ್ತಿದೆ'' - ಹೇಮಾ ಚೌಧರಿ, ಹಿರಿಯ ನಟಿ

ಕಣ್ಣೀರಿಟ್ಟ ಭಾರತಿ
''ಇತ್ತೀಚೆಗಷ್ಟೇ ಅವರು ನಮ್ಮ ಮನೆಗೆ ಬಂದಿದ್ದರು. ಅವರಿಗೆ ಕಿಡ್ನಿ ಡಯಾಲಿಸಿಸ್ ನಡೀತಾ ಇತ್ತು. ಅವರು ಹಾಗೂ ನಮ್ಮ ಮನೆಯವರ (ವಿಷ್ಣುವರ್ಧನ್) ಸ್ನೇಹ ಐತಿಹಾಸಿಕವಾದದ್ದು. ಚಿತ್ರರಂಗದಲ್ಲಿ ಆ ರೀತಿ ನೋಡಲು ಮತ್ತೆ ಸಿಗುತ್ತಾ? ವಿಷ್ಣುವರ್ಧನ್- ಅಂಬರೀಶ್ ಹಾಗೂ ರಾಜೇಂದ್ರ ಸಿಂಗ್ ಬಾಬು ಅವರ ಸ್ನೇಹ ಅಂತ ನೆನಪಿಸಿಕೊಳ್ಳುವ ಹಾಗಿತ್ತು. ಈ ದಿನ ಮಂಡ್ಯದಲ್ಲಿ ಅಷ್ಟೊಂದು ಜನ ತೀರಿಕೊಂಡಿದ್ದಾರೆ. ಈಗ ಇಂಥ ಸುದ್ದಿ ಕೇಳುವಂತಾಗಿದೆ'' - ಭಾರತಿ ವಿಷ್ಣುವರ್ಧನ್, ಹಿರಿಯ ನಟಿ

ಆಘಾತ ಆಯಿತು
''ಟಿವಿಯಲ್ಲಿ ಅಂಬರೀಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ಬರುತ್ತಲೇ ಸ್ವಲ್ಪ ಹೊತ್ತಿಗೆ ತೀರಿಕೊಂಡರು ಎಂಬುದನ್ನು ನೋಡಿ ಆಘಾತವಾಯಿತು. ಹಿರಿಯರು ಇರುವವರೆಗೆ ಆತ ಬಾಯಿ ಬಿಟ್ಟು ಮಾತನಾಡುತ್ತಲೇ ಇರಲಿಲ್ಲ. ಆದರೆ ರಾಜಕುಮಾರ್ ಅವರು ತೀರಿಕೊಂಡ ನಂತರ ವಿಷ್ಣು ಕಡೆ ನೋಡಲು ಆರಂಭಿಸಿದರು. ಆದರೆ ವಿಷ್ಣು ಭಯಸ್ತ. ವಿಷ್ಣು ಯಾವುದೇ ಕಾರ್ಯಕ್ರಮಕ್ಕೆ ಹೋಗಿಬರಬೇಕು ಅಂದರೂ ಅಂಬಿ ಕೋಟೆಯಂತೆ ಇರುತ್ತಿದ್ದರು. ವಿಷ್ಣು ತನಗಿಂತ ಉತ್ತಮ ನಟ ಎಂಬ ಸಂಗತಿ ಅವರಿಗೆ ತಿಳಿದಿತ್ತು'' - ಶಿವರಾಂ, ಹಿರಿಯ ನಟ
ಟ್ವೀಟ್ ಮಾಡಿದ ರಜನಿಕಾಂತ್
''ಅಂಬರೀಶ್ ಅದ್ಭುತ ವ್ಯಕ್ತಿ. ನನ್ನ ಆತ್ಮೀಯ ಸ್ನೇಹಿತ. ಇಂದು ನಿಮ್ಮನ್ನ ಕಳೆದುಕೊಂಡಿದ್ದೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.
ನಿಮ್ಮನ್ನ ಸದಾ ಮಿಸ್ ಮಾಡಿಕೊಳ್ಳುವೆ
''ಮಾಮ.. ನಿಮ್ಮನ್ನು ಸದಾ ಮಿಸ್ ಮಾಡಿಕೊಳ್ಳುವೆ. ರೆಬೆಲ್ ಸ್ಟಾರ್ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ರಕ್ಷಿತಾ ಪ್ರೇಮ್ ಟ್ವೀಟ್ ಮಾಡಿದ್ದಾರೆ.
ದಿಗ್ಭ್ರಮೆ ವ್ಯಕ್ತಪಡಿಸಿದ ಖುಷ್ಬು
''ಆಘಾತಕಾರಿ ಸುದ್ದಿ ಕೇಳಿ ದಿಗ್ಭ್ರಮೆಗೊಂಡಿರುವೆ. ಅಂಬರೀಶ್ ರವರ ಅಕಾಲಿಕ ಮರಣ ನನ್ನ ಹೃದಯವನ್ನು ಛಿದ್ರಗೊಳಿಸಿದೆ. ಪತ್ನಿ ಸುಮಲತಾ ಮತ್ತು ಪುತ್ರ ಅಭಿಶೇಕ್ ಗೆ ದುಃಖ ಭರಿಸುವ ಶಕ್ತಿ ಕೊಡಲಿ'' ಎಂದು ನಟಿ ಖುಷ್ಬು ಟ್ವೀಟಿಸಿದ್ದಾರೆ.
ಮನೋರಂಜನ್ ದುಃಖತಪ್ತ
''ಕಹಿ ಸುದ್ದಿ ಕೇಳಿ ಶಾಕ್ ಆಗಿದೆ. ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ರವಿಚಂದ್ರನ್ ಪುತ್ರ ನಟ ಮನೋರಂಜನ್ ಟ್ವೀಟ್ ಮಾಡಿದ್ದಾರೆ.
ದೇವರನ್ನ ಮಿಸ್ ಮಾಡಿಕೊಳ್ಳುವೆ
''ದೇವರಂಥ ನಿಮ್ಮನ್ನ ನಾವೆಲ್ಲ ಮಿಸ್ ಮಾಡಿಕೊಳ್ಳುತ್ತೇವೆ'' ಎಂದು ನಟ ಧ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ.
ಪಾರುಲ್ ಯಾದವ್ ಟ್ವೀಟ್
''ಅಂಬರೀಶ್ ತೀರಿಕೊಂಡ ಸುದ್ದಿ ಕೇಳಿ ಆಘಾತಗೊಂಡಿರುವೆ. ಕನ್ನಡ ಚಿತ್ರರಂಗಕ್ಕೆ ಇದು ತುಂಬಲಾರದ ನಷ್ಟ'' ಎಂದು ನಟಿ ಪಾರುಲ್ ಯಾದವ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications











