ಅಂಬರೀಶ್-ಸುಮಲತಾ ನಡುವೆ ಪ್ರೀತಿ ಮೂಡಿದ್ಹೇಗೆ.? 'ರೆಬೆಲ್ ಇನ್ ಟ್ರಬಲ್' ಕಥೆ ಇಲ್ಲಿದೆ..
Recommended Video

'ನಮ್ಮೂರ ಹಮ್ಮೀರ' ಅಂಬರೀಶ್ ರವರನ್ನು ಕಳೆದುಕೊಂಡು ಇಡೀ ಕರುನಾಡು ದುಃಖದ ಮಡುವಿನಲ್ಲಿ ಮುಳುಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅಂಬರೀಶ್ ನಿನ್ನೆ (ನವೆಂಬರ್ 24) ರಾತ್ರಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾದರು.
ಅಜಾತಶತ್ರು ಅಂತಲೇ ಗುರುತಿಸಿಕೊಂಡಿದ್ದ ಅಂಬರೀಶ್ ಅಪ್ಪಟ ಸ್ನೇಹಜೀವಿ. ಚಿತ್ರರಂಗದಲ್ಲಿ ಹಲವಾರು ಗೆಳೆಯರನ್ನು ಹೊಂದಿರುವ ಅಂಬರೀಶ್ ಇಂದು ನೆನಪು ಮಾತ್ರ. ಪ್ರೀತಿಯ ಪತ್ನಿ ಸುಮಲತಾ ಮತ್ತು ಏಕೈಕ ಪುತ್ರ ಅಭಿಶೇಕ್ ರನ್ನ ಅಂಬರೀಶ್ ಅಗಲಿದ್ದಾರೆ.
ಅಂಬರೀಶ್ ರವರ ಬದುಕಿನ ಪುಟಗಳನ್ನು ತಿರುವಿ ಹಾಕಿದಾಗ, ಸಖತ್ ಇಂಟ್ರೆಸ್ಟಿಂಗ್ ಅನಿಸೋದು ಅವರ ಪ್ರೇಮ ಕಹಾನಿ. ಸುಮಲತಾ ಮತ್ತು ಅಂಬರೀಶ್ ನಡುವೆ ಪ್ರೀತಿ ಮೂಡಿದ್ದು ಹೇಗೆ ಅಂತ ನಿಮಗೆ ಗೊತ್ತಾ.? 'ರೆಬೆಲ್ ಇನ್ ಟ್ರಬಲ್' ಫ್ಲ್ಯಾಶ್ ಬ್ಯಾಕ್ ಕಥೆ ಇಲ್ಲಿದೆ ಓದಿರಿ...

ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಭೇಟಿ
ಸೂಪರ್ ಜೋಡಿ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ನಟಿ ಸುಮಲತಾ ಅವರು ಮೊಟ್ಟ ಮೊದಲ ಬಾರಿಗೆ ಭೇಟಿಯಾಗಿದ್ದು, ವುಡ್ ಲ್ಯಾಂಡ್ ಹೋಟೆಲ್ ನಲ್ಲಿ. ಯಾವುದೋ ಚಿತ್ರದ ಶೂಟಿಂಗ್ ನಡೆಯುತ್ತಿರುವಾಗ ಅಲ್ಲಿಗೆ ಹೋಗಿದ್ದ ಸುಮಲತಾ ಅವರು ಮೊದಲ ಬಾರಿಗೆ ಅಂಬಿ ಅವರನ್ನು ನೋಡಿದ್ದರು. ಒಬ್ಬರನ್ನೊಬ್ಬರು ನೋಡಿದ್ದರೂ ಅಂದು ಮಾತಾಡಿರಲಿಲ್ಲ. ಆದರೆ ಅವರಿಬ್ಬರನ್ನು ಮತ್ತಷ್ಟು ಹತ್ತಿರವಾಗಿಸಿದ್ದು, 'ಆಹುತಿ' ಸಿನಿಮಾ.

ಕಣ್ಣು-ಕಣ್ಣು ಕಲೆತಾಗ...
ಸುಮಲತಾ ಸೌಂದರ್ಯಕ್ಕೆ ಅಂಬರೀಶ್ ಮಾರು ಹೋಗಿದ್ದರು. ಇನ್ನೂ ಅಂಬರೀಶ್ ಅವರ ನಡವಳಿಕೆ, ಎಲ್ಲರೊಂದಿಗೆ ಬೆರೆಯುವ ಪರಿ ಸುಮಲತಾ ಅವರಿಗೆ ಇಷ್ಟ ಆಗಿತ್ತು.

ಸುಮಲತಾ ಹುಟ್ಟುಹಬ್ಬದ ದಿನ...
ಅದು 'ನ್ಯೂ ಡೆಲ್ಲಿ' ಚಿತ್ರೀಕರಣದ ಸಮಯ. ಮಾಲೆಯಾಳಂ ಚಿತ್ರದ ರೀಮೇಕ್ ಆಗಿದ್ದ 'ನ್ಯೂ ಡೆಲ್ಲಿ'ಯಲ್ಲಿ ಅಂಬರೀಶ್ ಜೊತೆ ಜೋಡಿಯಾಗಿದ್ದವರು ಸುಮಲತಾ. ದೆಹಲಿಯಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಸುಮಲತಾ ಅವರ ಹುಟ್ಟುಹಬ್ಬವಿತ್ತು. ಸ್ಪಾಟ್ ನಲ್ಲೇ ಬರ್ತಡೆ ಪಾರ್ಟಿಯನ್ನ ಸುಮಲತಾ ಅರೇಂಜ್ ಮಾಡಿದ್ದರು. ಹಿಂದಿನ ದಿನ ಅಂಬಿಗೆ ಆಹ್ವಾನ ಕೂಡ ನೀಡಿದ್ದರು. ಆದ್ರೆ, ಅಂದು ಶೂಟಿಂಗ್ ಇದ್ದರೂ, ಅಂಬರೀಶ್ ಅವರ ಶಾಟ್ ಇಲ್ಲದ ಕಾರಣ, ಲೊಕೇಷನ್ ಗೆ ಅಂಬರೀಶ್ ಬಂದಿರಲಿಲ್ಲ. ಬರ್ತೀನಿ ಅಂದು ಅಂಬರೀಶ್ ಕೈ ಕೊಟ್ಟಿದ್ದಕ್ಕೆ ಸುಮಲತಾ ಕಣ್ಣು ಕೆಂಪಾಗಿತ್ತು.

ಮಾತಿಲ್ಲ-ಕಥೆ ಇಲ್ಲ.!
ಇದೇ ಕಾರಣಕ್ಕೆ ಮಾರನೇ ದಿನ ಅಂಬಿ ಶೂಟಿಂಗ್ ಗೆ ಹಾಜರ್ ಆದರೂ, ಅವರನ್ನ ಸುಮಲತಾ ಮಾತನಾಡಿಸಲಿಲ್ಲ. 'ಸಾರಿ' ಅಂತ ಸಾರಿ ಸಾರಿ ಅಂಬಿ ಕೇಳಿದರೂ, ಸುಮಲತಾ ತಿರುಗಿ ನೋಡಲಿಲ್ಲ. 3-4 ದಿನ ಅಂಬಿಯನ್ನ ಸುಮಲತಾ ಅವರು ಅವಾಯ್ಡ್ ಮಾಡಿದರು.

ರೆಬೆಲ್ ಇನ್ ಟ್ರಬಲ್
ಸುಮಲತಾ ಅವರು ಅವಾಯ್ಡ್ ಮಾಡಿದ್ದನ್ನು ನೋಡಿ ಅಂಬಿ ಅವರಿಗೆ ಏನನ್ನಿಸಿತ್ತೋ, ಸಡನ್ನಾಗಿ ಒಂದು ಪ್ಲ್ಯಾನ್ ಮಾಡಿದರು. ನೈಟ್ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಸುಮಲತಾ ಕಾರ್ ನಲ್ಲಿ ಕೂತಿರುವಾಗ ಒಂದು ಗಿಫ್ಟ್ ಪ್ಯಾಕ್ ಮತ್ತು ಅದರ ಜೊತೆ ಒಂದು ಚೀಟಿಯನ್ನ ಬಿಸಾಕಿದರು. ಆ ಚೀಟಿಯಲ್ಲಿ 'ಸಾರಿ', 'ನನ್ನನ್ನ ಕ್ಷಮಿಸು' ಅಂತ ಇಂಗ್ಲೀಷ್, ಕನ್ನಡ, ತೆಲುಗು, ಮಲೆಯಾಳಂನಲ್ಲಿ ಬರೆದು ಕೆಳಗೆ 'ರೆಬೆಲ್ ಇನ್ ಟ್ರಬಲ್' ಅಂತ ಅಂಬಿ ಬರೆದ್ದಿದ್ದರಂತೆ. ಇದನ್ನು ನೋಡಿದ ಸುಮಲತಾ ಅವರ ಜೋರಾಗಿ ನಕ್ಕರಂತೆ.

ಸುಮ ಪ್ರೀತಿಯಲ್ಲಿ ಆಹುತಿ
''ಆಹುತಿ' ಸಿನಿಮಾದಲ್ಲಿ ಸುಮಲತಾ ಅವರನ್ನು ನೋಡಿ ಅವರ ಪ್ರೇಮ ಪಾಶದಲ್ಲಿ ಆಹುತಿಯಾದೆ. ಸುಮಾ ಎಂದರೆ ನನಗೆ ಅಚ್ಚುಮೆಚ್ಚು, ನನ್ನ ಎಲ್ಲಾ ಪ್ಲ್ಯಾನ್ ಮಾಡೋದು ಅವರೇ, ಇಬ್ಬರ ನಡುವೆ ಬಹಳ ಒಳ್ಳೆಯ ಹೊಂದಾಣಿಕೆ ಇದೆ. ಹಾಗಾಗಿ ನಮ್ಮಲ್ಲಿ ಇಲ್ಲಿಯವರೆಗೂ ಯಾವುದೇ ರೀತಿಯ ಭಿನ್ನಾಬಿಪ್ರಾಯ ಬಂದಿಲ್ಲ'' ಎಂದು ಅಂಬರೀಶ್ ಒಮ್ಮೆ ಹೇಳಿದ್ದರು.


Click it and Unblock the Notifications











