ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ನಟ ಚಂದನ್ ಆಚಾರ್
'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿ ಜೊತೆಗೆ ಕಾಣಿಸಿಕೊಂಡ ಹುಡುಗರ ಪೈಕಿ ಚಂದನ್ ಆಚಾರ್ ಕೂಡ ಒಬ್ಬರು. ಚಂದನ್ ಮೊದಲ ಬಾರಿಗೆ ಬಣ್ಣ ಹಚ್ಚಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿ ಅವರಿಗೂ ಒಳ್ಳೆಯ ಹೆಸರು ತಂದು ಕೊಟ್ಟಿತ್ತು. ಇಂದಿಗೂ ಅವರನ್ನು ಇದೇ ಸಿನಿಮಾದಿಂದ ಜನ ಗುರುತಿಸಿತ್ತಾರೆ.
ಈ ಸಿನಿಮಾದ ನಂತರ ಚಂದನ್ ಹೀರೋ ಆಗುವ ಅವಕಾಶ ಬಂತು. 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಸಿನಿಮಾದಲ್ಲಿ ಚಂದನ್ ನಾಯಕನಾಗಿದ್ದರು. ಚಿತ್ರದಲ್ಲಿ ಚಂದನ್ ಹಾಗೂ ತಬಲನಾಣಿ ಎರಡೂ ಪಾತ್ರಗಳಿಗೆ ಅಷ್ಟೇ ಪ್ರಾಮುಖ್ಯತೆ ಇತ್ತು.
ಹೀಗಿರುವಾಗ, ಇದೇ ತಂಡ ಚಂದನ್ ವಿರುದ್ಧ ಆರೋಪ ಮಾಡಿತ್ತು. ನಾಯಕ ನಟ ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲ ಎಂದು ದೂರಿತ್ತು. ಈಗ ಈ ವಿಷಯದ ಬಗ್ಗೆ ಚಂದನ್ ಮಾತನಾಡಿದ್ದಾರೆ. ಮುಂದೆ ಓದಿ...

ಚಿತ್ರತಂಡದ ಆರೋಪ ಏನಾಗಿತ್ತು?
'ಕೆಮಿಸ್ಟ್ರಿ ಆಫ್ ಕರಿಯಪ್ಪ' ಸಿನಿಮಾದಲ್ಲಿ ಚಂದನ್ ಲೀಡ್ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ, ಸಿನಿಮಾ ಬಿಡುಗಡೆಯಾಗುವ ಸಮಯದಲ್ಲಿ ಅವರು ಪ್ರಚಾರಕ್ಕೆ ಬರಲಿಲ್ಲ ಎಂದು ಚಿತ್ರತಂಡ ಆರೋಪ ಮಾಡಿತ್ತು. ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಕಣ್ಮರೆಯಾಗಿದ್ದ ಚಂದನ್ ವಿರುದ್ಧ ಚಿತ್ರತಂಡ ಅಸಮಾಧಾನ ವ್ಯಕ್ತಪಡಿಸಿತ್ತು.

ಕ್ಷಮೆ ಕೇಳಿದ ಚಂದನ್
ಈ ಘಟನೆಯ ಬಗ್ಗೆ ಈಗ ಚಂದನ್ ಅವರೇ ಮಾತನಾಡಿದ್ದಾರೆ. ''ಅಂದಿನ ಪ್ರೆಸ್ ಮೀಟ್ ಗೆ ನಾನು ಬರಲು ಆಗಲಿಲ್ಲ. ಶೂಟಿಂಗ್ ಇರುವ ಕಾರಣ ನಾನು ಭಾಗಿಯಾಗಿಲ್ಲ. ನಾನು ಬರದೆ ಇರಲು ನಿಜವಾದ ಕಾರಣ ಇತ್ತು. ಅದಕ್ಕೆ ನನ್ನ ಕಡೆಯಿಂದ ಕ್ಷಮೆ ಇರಲಿ. ಅದು ಬಿಟ್ಟರೆ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ.'' ಎಂದು ಹೇಳಿದರು.

ಬೇರೆ ಬೇರೆ ತರ ಚಿತ್ರಣವಾಗಿದೆ
''ನಾನು ಪ್ರೆಸ್ ಮೀಟ್ ಗೆ ಬರಲಿಲ್ಲ ಎನ್ನುವುದು ಬೇರೆ ಬೇರೆ ತರ ಚಿತ್ರಣವಾಗಿದೆ. ನಮ್ಮ ನಿರ್ದೇಶಕ, ನಿರ್ಮಾಪಕರು ಭಾವುಕರಾಗಿ ಮಾತನಾಡಿದ್ದರು. ಆದರೆ ಅದು ಬಿಟ್ಟರೆ ನಾನು ಡಿಜಿಟಲ್ ನ್ಯೂಸ್ ಚಾನಲ್ ನಲ್ಲಿ ನಮ್ಮ ಸಿನಿಮಾದ ಬಗ್ಗೆ ಮಾತನಾಡಿದ್ದೇನೆ. ಪ್ರಮೋಷನ್ ನಲ್ಲಿ ಭಾಗಿಯಾಗಿದ್ದೇನೆ.'' ಎಂದು ಚಂದನ್ ತಿಳಿಸಿದ್ದಾರೆ.

25 ದಿನಗಳನ್ನು ಪೂರೈಸಿದೆ
'ಕೆಮಿಸ್ಟ್ರಿ ಆಫ್ ಕರಿಯಪ್ಪ' ಸಿನಿಮಾ 25 ದಿನಗಳನ್ನು ಪೂರ್ಣ ಮಾಡಿದೆ ಈ ಬಗ್ಗೆ ಚಂದನ್ ಸಂತಸ ಹಂಚಿಕೊಂಡಿದ್ದು, ''ಈ ಸಿನಿಮಾದಿಂದ ಮುಂದಿನ ಜರ್ನಿಗೆ ಸಹಾಯ ಆಗಿದೆ. 25 ದಿನಗಳು ತುಂಬಿದ ಗೃಹದಲ್ಲಿ ಸಿನಿಮಾ ಓಡುತ್ತಿದೆ ಎಂದು ಹೇಳಿಕೊಳ್ಳುವುದಕ್ಕೆ ಖುಷಿ ಆಗುತ್ತಿದೆ.'' ಎಂದರು.


Click it and Unblock the Notifications











