ಹಿಂದುತ್ವದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ನಟ ಚೇತನ್ ಅಹಿಂಸಾ ಬಂಧನ: ಆ ಪೋಸ್ಟ್ನಲ್ಲಿ ಏನಿದೆ?
ಹಿಂದುತ್ವದ ಕುರಿತು ಕೆಟ್ಟದಾಗಿ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚೇತನ್ ಅಹಿಂಸಾ ಬಂಧನವಾಗಿದೆ. ನಗರದ ಶೇಷಾದ್ರಿಪುರಂ ಪೊಲೀಸರು ನಟನನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಐಪಿಸಿ ಸೆಕ್ಷನ್ 295A 505B ಅಡಿಯಲ್ಲಿ ನಟನ ವಿರುದ್ಧ ಪ್ರಕರಣ ದಾಖಲಾಗಿದೆ.
ನಟ ಚೇತನ್ ಪೋಸ್ಟ್ ಸಂಬಂಧ ಹಿಂದೂಪರ ಸಂಘಟನೆ ದೂರು ನೀಡಿತ್ತು. ಹಾಗಾಗಿ ಪೊಲೀಸರು ನಟನನ್ನು ಬಂಧಿಸಿರುವುದಾಗಿ ವರದಿ ಆಗಿದೆ. ಸದಾ ತಮ್ಮ ನೇರ ಮಾತುಗಳಿಂದ ನಟ ಚೇತನ್ ಸುದ್ದಿಯಲ್ಲಿ ಇರುತ್ತಾರೆ. ಉರಿಗೌಡ, ನಂಜೇಗೌಡ ವಿವಾದದ ಕುರಿತು ಮಾತನಾಡುತ್ತಾ, ನಿನ್ನೆ(ಮಾರ್ಚ್ 20) ನಟ ಚೇತನ್ ಒಂದು ಪೋಸ್ಟ್ ಮಾಡಿದ್ದರು.

"ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ಭಾರತ ರಾಷ್ಟ್ರದ ಉಗಮದ ಬಗ್ಗೆ ಸಾರ್ವಕರ್ ಹೇಳಿಕೆ, ಬಾಬರಿ ಮಸೀದಿ ರಾಮನ ಜನ್ಮಭೂಮಿ ಅನ್ನೋದು ಈಗ ಉರಿಗೌಡ- ನಂಜೇಗೌಡ ಟಿಪ್ಪುನ ಕೊಂದರು" ಎನ್ನುವುದು ಎಲ್ಲಾ ಸುಳ್ಳು ಎಂದು ಪೋಸ್ಟ್ ಮಾಡಿದ್ದರು. ಈ ಸಂಬಂಧ ಶಿವಕುಮಾರ್ ಎಂಬುವವರು ಚೇತನ್ ವಿರುದ್ಧ ದೂರು ನೀಡಿದ್ದರು.
ಕಳೆದ ವರ್ಷ ನ್ಯಾಯಧೀಶರನ್ನು ನಿಂದಿಸಿ ಟ್ವೀಟ್ ಮಾಡಿದ್ದ ಕಾರಣಕ್ಕೆ ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದರು. ಐಪಿಸಿ ಸೆಕ್ಷನ್ 505 (2), 504 ಅಡಿಯಲ್ಲಿ ಚೇತನ್ ವಿರುದ್ಧ ಪ್ರಕರಣ ದಾಖಲಾಗಿತ್ತು. 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ನಟ ಷರತ್ತುಬದ್ಧ ಜಾಮೀನು ಪಡೆದಿದ್ದರು. ಪ್ರಪಂಚದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ತಮ್ಮದೇ ಶೈಲಿಯಲ್ಲಿ ಸ್ಪಂದಿಸುತ್ತಾ ಬರ್ತಿದ್ದಾರೆ. ಇದೇ ಕಾರಣಕ್ಕೆ ಸಾಕಷ್ಟು ಬಾರಿ ವಿವಾದಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಹಿಂದುತ್ವದ ಕುರಿತಾದ ಪೋಸ್ಟ್ ಕಾರಣಕ್ಕೆ ಚೇತನ್ ಬಂಧನವಾಗಿದೆ. ಶೀಘ್ರದಲ್ಲೇ ಜಾಮೀನು ಸಿಗುವ ಸಾಧ್ಯತೆ ಇದೆ.


Click it and Unblock the Notifications











