ಕಳೆದ ತಿಂಗಳು ಶನಿದೇವರ ಪೂಜೆ, ಈಗ ತಿಮ್ಮಪ್ಪನ ದರ್ಶನ ಪಡೆದ ದಾಸ
ವಿವಾದಗಳಿಂದ ಕಂಗೆಟ್ಟಿದ ನಟ ದರ್ಶನ್ ನೆಮ್ಮದಿಗಾಗಿ ದೇವರ ಮೊರೆ ಹೋಗಿದ್ದಾರೆ. ಪ್ರತಿಷ್ಠಿತ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಡಿ ಬಾಸ್ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ. ಕಳೆದ ತಿಂಗಳಷ್ಟೇ ಕೇರಳದಲ್ಲಿ ಶನಿದೇವರ ದರ್ಶನ ಪಡೆದಿದ್ದ ಚಾಲೆಂಜಿಂಗ್ ಸ್ಟಾರ್ ಈಗ ತಿರುಪತಿಗೆ ಭೇಟಿ ನೀಡಿದ ತಿಮ್ಮಪ್ಪನ ಆಶೀರ್ವಾದ ಪಡೆದುಕೊಂಡಿದ್ದಾರೆ.
Recommended Video
ಮಂಡ್ಯ ಸಂಸದೆ ಸುಮಲತಾ, ಅಭಿಷೇಕ್ ಅಂಬರೀಶ್ ಹಾಗೂ ದರ್ಶನ್ ಅವರು ತಿರುಪತಿಗೆ ಭೇಟಿ ಕೊಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾನುವಾರ ಸಂಜೆ ಸ್ವತಃ ಸುಮಲತಾ ಅವರೇ ತಿರುಪತಿಗೆ ಹೋಗುತ್ತಿರುವುದಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು. ಈ ವೇಳೆ ನಟ ದರ್ಶನ್, ಅಭಿಷೇಕ್ ಜೊತೆ ಸುಮಲತಾ ಇರುವ ಫೋಟೋ ಹಂಚಿಕೊಂಡಿದ್ದರು.
ಸೋಮವಾರ ಬೆಳಗ್ಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಪಡೆದಿರುವ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ನಟ ದರ್ಶನ್ ಮತ್ತು ಅಭಿಷೇಕ್ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ಗಮನ ಸೆಳೆದಿದೆ. ಇದಕ್ಕೂ ಮುಂಚೆ ಆಷಾಢ ಶುಕ್ರವಾರದಂದು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿರುವ ದರ್ಶನ್ ನಾಡದೇವತಗೆ ಪೂಜೆ ಸಲ್ಲಿಸಿ ಬಂದಿದ್ದಾರೆ. ಮುಂದೆ ಓದಿ...

ತಿರುಪತಿಯಲ್ಲಿ ಡಿ ಬಾಸ್-ಅಭಿಷೇಕ್
25 ಕೋಟಿ ಲೋನ್ ವಿವಾದ, ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ವಿವಾದ, ನಿರ್ದೇಶಕ ಇಂದ್ರಜಿತ್ ಮತ್ತು ದರ್ಶನ್ ನಡುವಿನ ವಾಕ್ಸಮರಕ್ಕೆ ಸಂಬಂಧಪಟ್ಟಂತೆ ಸಂಸದೆ ಸುಮಲತಾ ಹಾಗೂ ಅಭಿಷೇಕ್ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಒಮ್ಮೆ ಸುಮಲತಾ ಮಾತನಾಡಿದ್ದರು 25 ಕೋಟಿ ಲೋನ್ ವಿಚಾರದಲ್ಲಿ ವಂಚನೆಯಾಗಿದ್ದರೆ ನ್ಯಾಯ ಸಿಗಬೇಕು ಎಂದಿದ್ದರು. ಈ ಘಟನೆ ಆದ್ಮೇಲೆ ಮೊದಲ ಬಾರಿಗೆ ಸುಮಲತಾ ಹಾಗೂ ಅಭಿಷೇಕ್ ಜೊತೆ ದರ್ಶನ್ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.

ಉಮಾಪತಿಯೂ ತಿರುಪತಿಗೆ ಹೋಗಿದ್ದರು
ವಿಶೇಷ ಅಂದ್ರೆ ಕಳೆದ ತಿಂಗಳಷ್ಟೇ ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ತಿರುಮಲಗೆ ಭೇಟಿ ನೀಡಿದ್ದರು. ದರ್ಶನ್ ಜೊತೆಗಿನ ವಿವಾದ ನಂತರ ದೇವರ ಮೊರೆ ಹೋಗಿದ್ದ ಉಮಾಪತಿ ಮೊದಲು ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿದ್ದರು. ನಂತರ, ತಿರುಪತಿಗೆ ಭೇಟಿ ನೀಡಿದ ದೇವರ ಆಶೀರ್ವಾದ ಪಡೆದುಕೊಂಡಿದ್ದರು.

ಫೆಬ್ರವರಿಯಲ್ಲಿ ತಿರುಪತಿಗೆ ಹೋಗಿದ್ದರು
'ರಾಬರ್ಟ್' ಚಿತ್ರದ ಬಿಡುಗಡೆಗೆ ಮುಂಚೆ ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ತಿರುಪತಿಗೆ ಭೇಟಿ ನೀಡಿದ್ದರು. ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಬೇಕಿತ್ತು. ಅದಕ್ಕೂ ಮುಂಚೆ ಫೆಬ್ರವರಿ ತಿಂಗಳಲ್ಲಿ ಚಾಲೆಂಜಿಂಗ್ ಸ್ಟಾರ್ ತಿರುಪತಿ ಭೇಟಿ ನೀಡಿದ್ದರು. ಈ ವೇಳೆ ಉಮಾಪತಿಯೂ ಜೊತೆಯಲ್ಲಿದ್ದರು.

ಶನಿದೇವಸ್ಥಾನಕ್ಕೆ ಭೇಟಿ ನೀಡಿದ್ದ ದಾಸ
ಅಂದ್ಹಾಗೆ, ಕಳೆದ ತಿಂಗಳು ನಟ ದರ್ಶನ್ ಪಾಂಡಿಚೆರಿಯಲ್ಲಿರುವ ತಿರುನಲ್ಲಾರ್ ದೇವಾಲಯಕ್ಕೆ ಭೇಟಿ ನೀಡಿದ್ದರು. ತಿರುನಲ್ಲಾರ್ನಲ್ಲಿ ಶನಿದೇವರ ಸನ್ನಿಧಿಯಿದ್ದು, ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಶನಿದೇವಸ್ಥಾನಕ್ಕೆ ಹೋಗಿದ ವಿಷಯದ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಸಹಜವಾಗಿ ಚರ್ಚೆಯಾಗಿತ್ತು.

24 ವರ್ಷ ಪೂರೈಸಿದ ದರ್ಶನ್
ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ ಹಿನ್ನೆಲೆ ಆಗಸ್ಟ್ 10 ರಂದು ಸಂಜೆ ಆರು ಗಂಟೆಗೆ ಅಭಿಮಾನಿಗಳ ಫ್ಯಾನ್ಸ್ ಖಾತೆಗಳಲ್ಲಿ ದರ್ಶನ್ ಅವರ ಕಾಮನ್ ಡಿಪಿ ಬಿಡುಗಡೆ ಮಾಡಲಾಗುತ್ತಿದೆ. ಈ ಮೂಲಕ ತಮ್ಮ ನೆಚ್ಚಿನ ನಟನಿಗೆ ಟ್ರಿಬ್ಯೂಟ್ ನೀಡಲಾಗುತ್ತಿದೆ. ಮಂಗಳವಾರ ಸಂಜೆ ಟ್ವಿಟ್ಟರ್ನಲ್ಲಿ ಟ್ರೆಂಡ್ ಸೃಷ್ಟಿಸಲು ದಾಸನ ಅಭಿಮಾನಿಗಳು ಯೋಜಿಸಿದ್ದಾರೆ.


Click it and Unblock the Notifications











