ಫ್ಯಾನ್ಸ್ ಜೊತೆ ಮಧ್ಯರಾತ್ರಿ ಬರ್ತ್ ಡೇ ಆಚರಿಸಿಕೊಂಡ ದರ್ಶನ್
ಚಂದನವನ ಕ್ಷೇತ್ರದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ, ಬಾಕ್ಸಾಫೀಸ್ ಸುಲ್ತಾನ ಅಂತಾನೇ ಖ್ಯಾತಿ ಗಳಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು 39ನೇ ಹುಟ್ಟುಹಬ್ಬದ ಸಂಭ್ರಮ.
ಅಂತೂ ಅಭಿಮಾನಿಗಳ ಕಾಯುವಿಕೆಗೆ ಮಧ್ಯರಾತ್ರಿ 12 ಘಂಟೆಗೆ ಫುಲ್ ಸ್ಟಾಪ್ ಬಿದ್ದಿದೆ. ಹೌದು ಎಲ್ಲರ ಪ್ರೀತಿಯ ದಾಸ ನಟ ದರ್ಶನ್ ಅವರ ಅಭಿಮಾನಿಗಳು ಮಧ್ಯರಾತ್ರಿ 12 ಘಂಟೆಗೆ ದರ್ಶನ್ ಅವರ ಮನೆಯ ಮುಂದೆ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.[ದರ್ಶನ್ ಹುಟ್ಟುಹಬ್ಬಕ್ಕೆ ನಡೆಯುತ್ತಿದೆ ಭರ್ಜರಿ ಸಿದ್ಧತೆ]
ದರ್ಶನ್ ಅವರ ಮನೆಯನ್ನು ಅವರ ಅಭಿಮಾನಿಗಳು ಮದುವೆ ಮನೆಯಂತೆ ಸಿಂಗರಿಸಿದ್ದು, ಮಧ್ಯರಾತ್ರಿಯಿಂದಲೇ ಮನೆಯ ಮುಂದೆ ಅಭಿಮಾನಿ ಬಳಗದವರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿ, ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಅಂದಹಾಗೆ ಈ ಬಾರಿ ದರ್ಶನ್ ಅವರು ತಮ್ಮ ಹುಟ್ಟುಹಬ್ಬಕ್ಕೆ ಯಾವುದೇ ಹೊಸ ಚಿತ್ರ ಸೆಟ್ಟೇರುವುದಿಲ್ಲ ಎಂದು ಮೊದಲೇ ಹೇಳಿಕೊಂಡಿದ್ದರು. ಅದೇ ಮಾದರಿಯಲ್ಲಿ ಇಂದು ತಮ್ಮ ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ.[ದರ್ಶನ್ ಬಗ್ಗೆ ನಟ ಸೃಜನ್ ಮಾಡಿದ ಕಾಮೆಂಟ್ ಏನು?]
ಎಲ್ಲಾ ಅಭಿಮಾನಿಗಳ ಪ್ರೀತಿಯ ದಾಸ, ಎಲ್ಲರ ನೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ಮನೆಯನ್ನು ಸಿಂಗರಿಸಿದ ಅಭಿಮಾನಿಗಳು
ಬಾಕ್ಸಾಪೀಸ್ ಸುಲ್ತಾನ ದರ್ಶನ್ ಅವರ ಎಲ್ಲಾ ಅಭಿಮಾನಿ ಬಳಗದವರು ಅವರ ಮನೆಯನ್ನು ಬಣ್ಣ-ಬಣ್ಣದ ಲೈಟಿಂಗ್ಸ್ ಮೂಲಕ ಸಿಂಗರಿಸಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣನವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಕೋರಿದ್ದಾರೆ. ದರ್ಶನ್ ಅವರ ಮನೆಯ ಮುಂದೆ ಬೃಹತ್ ಕಟೌಟ್ ಗಳನ್ನು ಹಾಕಿ ಬಹಳ ಸಂಭ್ರಮದಿಂದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಮಧ್ಯರಾತ್ರಿ ಜನಜಂಗುಳಿ
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಅವರ ನಿವಾಸದ ಸುತ್ತಮುತ್ತ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ನೆರೆದಿದ್ದು, ಬೆಳಗ್ಗೆ ತನಕವೂ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಹೋಗುತ್ತಿದ್ದರು. ಜನಸಾಗರವನ್ನು ನಿಯಂತ್ರಿಸಲು ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

50 ಕೆ.ಜಿಯ ಕೇಕ್
ದರ್ಶನ್ ಅವರ ಅಭಿಮಾನಿ ಬಳಗದವರು ಮನೆಯ ಸುತ್ತಮುತ್ತ ಸುಮಾರು 300 ಭಿತ್ತಿ ಚಿತ್ರಗಳನ್ನು ಹಾಕಿ ಅಲಂಕರಿಸಿದ್ದಾರೆ. ಮಾತ್ರವಲ್ಲದೇ ಸ್ಪೆಷಲ್ ಆಗಿ ಸುಮಾರು 50 ಕೆ.ಜಿಯ ಕೇಕ್ ಸಿದ್ಧಪಡಿಸಿ ದರ್ಶನ್ ಅವರ ಕೈಯಲ್ಲಿ ಕೇಕ್ ಕಟ್ ಮಾಡಿಸಿದ್ದಾರೆ.

ಶುಭಾಶಯ ಕೋರಿದ ಬಾಸ್ ಹುಡುಗ್ರು
ದರ್ಶನ್ ಅವರ 39ನೇ ಹುಟ್ಟುಹಬ್ಬಕ್ಕೆ ಬೆಂಗಳೂರಿನ ಶ್ರೀನಗರದ ಅಭಿಮಾನಿ ಸಂಘದವರು ಬೃಹತ್ ಫ್ಲೆಕ್ಸ್, ಬ್ಯಾನರ್ ಗಳನ್ನು ಮಾಡಿ ಶುಭಾಶಯಗಳ ಮಳೆಗರೆದಿದ್ದಾರೆ.

ರಕ್ತದಾನ ಶಿಬಿರ
ತಮ್ಮ ನೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ಅಂಗವಾಗಿ 'ದತ್ತನಗರ'ದ ಅಭಿಮಾನಿ ಬಳಗದವರು ಫೆಬ್ರವರಿ 14, ಭಾನುವಾರದಂದು ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದರು.

ಹುಟ್ಟುಹಬ್ಬಕ್ಕೆ ಯಾವುದೇ ಚಿತ್ರ ಸೆಟ್ಟೇರಲಿಲ್ಲ
ಫೆಬ್ರವರಿ 16 ಬಂತೆಂದರೆ ದರ್ಶನ್ ಅವರ ಅಭಿನಯದ ಯಾವುದಾದರು ಒಂದು ಹೊಸ ಸಿನಿಮಾ ಸೆಟ್ಟೇರುವುದು ಸಂಪ್ರದಾಯ ಆಗಿತ್ತು. ಇದೀಗ ಅದು ತಪ್ಪು ಎಂದು ನಟ ದರ್ಶನ್ ಗೆ ಮಾತ್ರವಲ್ಲದೇ ಎಲ್ಲರಿಗೂ ಅನಿಸಿ, ಆ ಸಂಪ್ರದಾಯವನ್ನು ಕೈ ಬಿಡಲಾಗಿದೆ. ಆದ್ದರಿಂದ ಈ ಬಾರಿ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಯಾವುದೇ ಹೊಸ ಸಿನಿಮಾ ಸೆಟ್ಟೇರುತ್ತಿಲ್ಲ.

ಬರ್ತ್ ಡೇ ದಿನ ಕೆಲಸ ಮಾಡಲು ನಿರ್ಧಾರ
ದರ್ಶನ್ ಅವರ ಹುಟ್ಟುಹಬ್ಬದಂದು ಸೆಟ್ಟೇರಿದ ಎಲ್ಲಾ ಚಿತ್ರಗಳು ಸೋತು ಹೋಗಿದ್ದು, 'ಬೃಂದಾವನ', 'ಅಂಬರೀಶ' ಮತ್ತು 'ಐರಾವತ' ಚಿತ್ರಗಳು ದರ್ಶನ್ ಅವರ ಹುಟ್ಟುಹಬ್ಬದಂದೇ ಸೆಟ್ಟೇರಿ ಸೋತಿದ್ದವು. ಆದ್ದರಿಂದ ಈ ಬಾರಿ ಹುಟ್ಟುಹಬ್ಬದ ದಿನ ಕೆಲಸ ಮಾಡಲು ನಿರ್ಧರಿಸಿದ್ದು, 'ಜಗ್ಗುದಾದ' ಶೂಟಿಂಗ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ.

ಮಧ್ಯಾಹ್ನದವರೆಗೆ ಹುಟ್ಟುಹಬ್ಬ ಆಚರಣೆ
ಇಂದು (ಫೆಬ್ರವರಿ 16) ಮಧ್ಯಾಹ್ನದವರೆಗೆ ನಟ ದರ್ಶನ್ ಅವರು ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಮಧ್ಯಾಹ್ನದ ನಂತರ 'ಜಗ್ಗುದಾದ' ಶೂಟಿಂಗ್ ಸೆಟ್ ಗೆ ವಾಪಸ್ ತೆರಳಲಿದ್ದಾರೆ.


Click it and Unblock the Notifications











