ಬಳ್ಳಾರಿ ಜೈಲು ಸಿಬ್ಬಂದಿ ಬಳಿ ಹೊಸ ಕಿರಿಕ್ ಶುರು ಮಾಡಿದ ದರ್ಶನ್!
ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಬಳ್ಳಾರಿ ಜೈಲು ಸೇರಿ 15 ದಿನ ಕಳೆದಿದೆ. ಇತ್ತೀಚೆಗೆ ಪತ್ನಿ ಹಾಗೂ ಸಹೋದರ ದಿನಕರ್ ವಕೀಲರ ಜೊತೆ ಜೈಲಿಗೆ ಭೇಟಿ ನೀಡಿ ಮಾತನಾಡಿ ಬಂದಿದ್ದರು. ಇದೆಲ್ಲದರ ನಡುವೆ ದರ್ಶನ್ ಜೈಲು ಸಿಬ್ಬಂದಿ ಜೊತೆ ಹೊಸ ಕಿರಿಕ್ ಶುರು ಮಾಡಿದ್ದಾರೆ ಎನ್ನಲಾಗ್ತಿದೆ.
ಪತ್ನಿ ಹಾಗೂ ಸಹೋದರನನ್ನು ಭೇಟಿ ಮಾಡಲು ಸೆಲ್ನಿಂದ ಹೊರ ಬಂದಾಗ ದರ್ಶನ್ ವರ್ತನೆ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಮಾಧ್ಯಮಗಳ ಕ್ಯಾಮರಾ ನೋಡಿ ದರ್ಶನ್ ಅಸಭ್ಯವಾಗಿ ಸನ್ನೆ ಮಾಡಿದ್ದ ವೀಡಿಯೋ ವೈರಲ್ ಆಗುತ್ತಿದೆ. ಜೈಲು ಸೇರಿದರೂ ದರ್ಶನ್ ಬದಲಾಗಲಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ದರ್ಶನ್ ಹೊಸ ರಗಳೆ ಶುರು ಮಾಡಿದ್ದಾರೆ ಎಂದು ವರದಿ ಆಗುತ್ತಿದೆ.

ಇನ್ನು ದರ್ಶನ್ ಚಾರ್ಜ್ಶೀಟ್ ಬಗ್ಗೆ ಶಾಕ್ ಆಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ವಕೀಲರ ಜೊತೆಗೂ ಮಾತನಾಡಿದ್ದಾರೆ. ಶೀಘ್ರದಲ್ಲೇ ಜಾಮೀನು ಪಡೆಯಲು ಅರ್ಜಿ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಕೆಲ ದಿನಗಳ ಹಿಂದೆ ದರ್ಶನ್ ಸರ್ಜಿಕಲ್ ಚೇರ್ ಹಾಗೂ ಟಿವಿಯನ್ನು ಕೇಳಿ ಪಡೆದಿದ್ದರು. ಸಾಕಷ್ಟು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಟಾಯ್ಲೆಟ್ ಚೇರ್ ಕೊಡಲಾಗಿತ್ತು.
ದರ್ಶನ್ ಟಿವಿ ಕೇಳಿದಾಗ ಜೈಲಿನಲ್ಲಿದ್ದ ಹಳೇ ಟಿವಿಯನ್ನು ರಿಪೇರಿ ಮಾಡಿ ಕೊಡಲಾಗಿತ್ತು. ನಿಮಯದ ಪ್ರಕಾರ ಹೊರಗಿನಿಂದ ಟಿವಿ ಕೊಡಲು ಅವಕಾಶವಿಲ್ಲ. ಆದರೆ ಜೈಲಿಗೆ ಹೊಸ ಟಿವಿಯನ್ನು ಸರ್ಕಾರ ಪೂರೈಕೆ ಮಾಡಿರಲಿಲ್ಲ. ಹಾಗಾಗಿ ಕೆಟ್ಟು ಹೋಗಿದ್ದ ಟಿವಿಯನ್ನೇ ಸರಿಪಡಿಸಿ ಕೊಡಲಾಗಿತ್ತು. ಇದೀಗ ಟಿವಿ ಚೆನ್ನಾಗಿಲ್ಲ ಹೊಸ ಟಿವಿ ಕೊಡಿ ಎಂದು ಜೈಲು ಸಿಬ್ಬಂದಿ ಬಳಿ ದರ್ಶನ್ ಕಿರಿಕ್ ಮಾಡುತ್ತಿದ್ದಾರೆ ಎಂದು ಹೇಳಲಾಗ್ತಿದೆ.
ಪದೇ ಪದೇ ಟಿವಿ ಸ್ವಿಚ್ ಆಫ್ ಆಗುತ್ತಿದೆ. ಸರಿಯಾಗಿ ದೃಶ್ಯ ಕಾಣುತ್ತಿಲ್ಲ. ಟಿವಿ ರಿಪೇರಿ ಮಾಡಿಸಿಕೊಡಿ ಅಥವಾ ಬೇರೆ ಹೊಸ ಟಿವಿ ಕೊಡಿ ಎಂದು ಜೈಲು ಸಿಬ್ಬಂದಿ ಬಳಿ ದರ್ಶನ್ ಕಿರಿಕಿರಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇದಕ್ಕೂ ಕೋರ್ಟ್ನಲ್ಲಿ ಅರ್ಜಿ ಹಾಕಬೇಕಾ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಜೈಲು ಅಧಿಕಾರಿಗಳು ಬೇರೆ ಟಿವಿ ಇಲ್ಲ ಎಂದು ದರ್ಶನ್ಗೆ ಹೇಳಿರುವುದಾಗಿ ಮಾಹಿತಿ ಲಭ್ಯವಾಗುತ್ತಿದೆ.
ಇನ್ನು ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಕೋರಿ ಪವಿತ್ರಾ ಗೌಡ ಕೆಲ ದಿನಗಳ ಹಿಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈಗ ಆ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಸೆಷನ್ ಕೋರ್ಟ್ಗೆ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ನ್ಯಾಯಾಧೀಶರು ಸೂಚಿಸಿದ್ದಾರೆ. ಹಾಗಾಗಿ ಈ ಹಿಂದೆ ಸಲ್ಲಿಸಿದ್ದ ಅರ್ಜಿ ವಾಪಸ್ ಪಡೆದು ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ನಡೆದು 3 ತಿಂಗಳು ಕಳೆದಿದೆ. ಘಟನೆ ನಡೆದ 3 ದಿನಗಳಲ್ಲಿ ಪೊಲೀಸರು 17 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಬಳಿಕ ಜೂನ್ 22ರಂದು ಎಲ್ಲಾ ಆರೋಪಿಗಳನ್ನು ವಿಚಾರಣಾಧೀನ ಕೈದಿಗಳಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. 20 ದಿನಗಳ ಹಿಂದೆ ಜೈಲಿನಲ್ಲಿ ಆರೋಪಿ ದರ್ಶನ್ಗೆ ರಾಜಾತಿಥ್ಯ ನೀಡಿರುವ ಫೋಟೊ ವೈರಲ್ ಆಗಿತ್ತು.
ರಾಜಾತಿಥ್ಯದ ಫೋಟೊ ವೈರಲ್ ಆಗುತ್ತಿದ್ದಂತೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿತ್ತು. ಈ ಸಂಬಂಧ 3 ಎಫ್ಐಆರ್ ದಾಖಲಾಗಿತ್ತು. ಕೊನೆಗೆ ಕೋರ್ಟ್ ಆದೇಶದಂತೆ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗಿತ್ತು. ಅದರಂತೆ ದರ್ಶನ್ ಬಳ್ಳಾರಿ ಜೈಲಿಗೆ ಹೋಗುವಂತಾಯಿತು.


Click it and Unblock the Notifications











