ನಿಮ್ಮನ್ನು ಪಡೆದ ನಾನೇ ಧನ್ಯ, ಅಭಿಮಾನಿಗಳ ಅಭಿಮಾನ ಕಂಡು ದರ್ಶನ್ ಭಾವುಕ..!
ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಈ ಕಾರಣಕ್ಕಾಗಿಯೇ ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳಲ್ಲಿ ದೇವರನ್ನ ಕಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸೆಲೆಬ್ರಿಟಿ ಪಟ್ಟವನ್ನ ಕಟ್ಟಿದರು. ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳನ್ನ ವಿಐಪಿ ಎಂದು ಕರೆದರು.
ಇನ್ನೂ ಅಭಿಮಾನ ಅಂದರೆ ತಮ್ಮ ನೆಚ್ಚಿನ ನಾಯಕನಟನ ಸಿನಿಮಾ ಬಿಡುಗಡೆಯಾದಾಗ ಥಿಯೇಟರಿನ ಮುಂದೆ ಸ್ಟಾರ್ ಕಟ್ಟುವುದು, ದೊಡ್ಡ ಗಾತ್ರದ ಹಾರ ಹಾಕುವುದು, ಕೆಲವೊಮ್ಮೆ ಹಾಲಿನ ಅಭಿಷೇಕ ಮಾಡುವುದು, ಕಟೌಟು ನಿರ್ಮಿಸುವುದು, ಥಿಯೇಟರಿನ ಒಳಗೆ ನಾಣ್ಯಗಳನ್ನು, ಹೂವನ್ನು ಎರಚುವುದು, ಅವರ ಹುಟ್ಟುಹಬ್ಬವನ್ನು ತಮ್ಮದೇ ಹುಟ್ಟಿದ ದಿನದಂತೆ ಆಚರಿಸುವುದು, ಜೊತೆಗೆ ಜೈಕಾರ ಮೊಳಗಿಸುವುದು ಅಷ್ಟೇ ಅಲ್ಲ. ತಮ್ಮ ಅಭಿಮಾನದ ನಟನ ಸಿನಿಮಾ ಬಿಡುಗಡೆ ಮತ್ತು ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸುತ್ತಲೇ ಜೊತೆ ಜೊತೆಗೆ ಸಮಾಜಸ್ನೇಹಿ, ಪರಿಸರವ್ಯಾಮೋಹಿ ಕೆಲಸಗಳನ್ನು ಮಾಡುವುದು ಕೂಡ ಅಭಿಮಾನವೇ. ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಈ ಅಭಿಮಾನಕ್ಕೆ ತಲೆ ಬಾಗಿದ್ದಾರೆ. ನಿಮ್ಮನ್ನು ಪಡೆದ ನಾನೇ ಧನ್ಯ ಎಂದು ಹೇಳಿದ್ದಾರೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ದರ್ಶನ್ ಈ ಬಾರಿ ತಮ್ಮ ಬರ್ತ್ಡೇಯನ್ನು ಅಭಿಮಾನಿಗಳ ಜೊತೆ ಆಚರಿಸಿಕೊಂಡಿಲ್ಲ. ಹಾಗಂಥ ಅಭಿಮಾನಿಗಳು ಸುಮ್ಮನೆ ಕೂಡ ಕೂರಲಿಲ್ಲ. ಪ್ರತಿ ವರ್ಷ ದರ್ಶನ್ ಅವರ ಅಭಿಮಾನಿಗಳನ್ನ ಒಗ್ಗೂಡಿಸಿ, ಸಾಮಾಜಿಕ ಕಾರ್ಯಗಳು, ಜನಪರ ಕೆಲಸಗಳನ್ನು ಮಾಡುತ್ತಲೇ ಬಂದಿರುವ ಡಿ ಕಂಪನಿ ಈ ವರ್ಷ ಕೂಡ ತಮ್ಮ ನೆಚ್ಚಿನ ನಟ ಹುಟ್ಟುಹಬ್ಬಕ್ಕೆ ಅನೇಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿತ್ತು. ಸಮಾಜಮುಖಿ ಕೆಲಸಗಳನ್ನು ಮಾಡಿತು. ಇನ್ನು, ದರ್ಶನ್ ಜೈಲು ಪಾಲಾದಾಗ ಆ ಶ್ರೀರಾಮನಿಗೆ ಶಬರಿ ಕಾದಂತೆ ಕಾಯುತ್ತಾ ಕುಂತಿದ್ದವರು ಇದೇ ಅಭಿಮಾನಿಗಳು. ಯಾರೇನೇ ಹೇಳಿದರೂ ಇವರ ಅಭಿಮಾನ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಅಭಿಮಾನಿಗಳ ಈ ಅಭಿಮಾನ ಕಂಡು ಈಗ ದರ್ಶನ್ ಹೃದಯ ತುಂಬಿ ಬಂದಿದೆ. ಹೀಗಾಗಿಯೇ ಬಹಿರಂಗವಾದ ಪತ್ರವನ್ನು ಅಭಿಮಾನಿಗಳಿಗಾಗಿ ಬರೆದಿದ್ದಾರೆ.
ದರ್ಶನ್ ಬರೆದ ಪತ್ರದಲ್ಲೇನಿದೆ ?
ಪ್ರೀತಿಯ ಸೆಲೆಬ್ರಿಟಿಸ್ ಗಳೇ
ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ.
ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ. ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಈ ಕೆಲಸಗಳು ಅನೇಕರಿಗೆ ದಾರಿದೀಪವಾಗಲಿ.
ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ
ನಿಮ್ಮ ದಾಸ ದರ್ಶನ್
ಹೀಗೆ ದರ್ಶನ್ ತಮ್ಮ ಮನದ ಮಾತುಗಳಿಗೆ ಅಕ್ಷರದ ರೂಪವನ್ನು ನೀಡಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ಜೈ ಎಂದಿದ್ದಾರೆ. ದರ್ಶನ್ ಅವರ ಈ ಬರಹವನ್ನು ಅವರ ಅಭಿಮಾನಿಗಳು ಸದ್ಯ ಹೆಮ್ಮೆಯಿಂದ ಶೇರ್ ಮಾಡುತ್ತಿದ್ದಾರೆ. ನಿಮ್ಮ ಈ ಗುಣಕ್ಕೆ ನಾವು ಅಭಿಮಾನಿ ಎನ್ನುತ್ತಿದ್ದಾರೆ. ನಮ್ಮಲ್ಲಿಯೂ ಕೂಡ ನಿಮ್ಮನ್ನು ನೋಡುವ ಹಂಬಲ ಮತ್ತು ಕಾತುರ ಇದೆ ಎನ್ನುತ್ತಿದ್ದಾರೆ. ನೀವು ಬೇಗ ಗುಣಮುಖರಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











