ಗಟ್ಟಿಮೇಳ.. ಗಟ್ಟಿಮೇಳ.. ಪ್ರೇರಣಾ ಕೊರಳಿಗೆ ಧ್ರುವ ಸರ್ಜಾ ಮಾಂಗಲ್ಯಧಾರಣೆ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಆಂಜಿನೇಯನ ಅಪ್ಪಟ ಭಕ್ತ ಧ್ರುವ ಸರ್ಜಾ ವೈವಾಹಿಕ ಬದುಕು ಆರಂಭಿಸಿದ್ದಾರೆ. 15 ವರ್ಷಗಳಿಂದ ಪ್ರೀತಿ ಮಾಡುತ್ತಿರುವ ಪ್ರೇರಣಾ ಶಂಕರ್ ರವರ ಕೈಹಿಡಿದಿದ್ದಾರೆ ಧ್ರುವ ಸರ್ಜಾ.
ಇಂದು ಬೆಳಗ್ಗೆ 7.15 ರಿಂದ 7.45 ರವರೆಗೆ ಇದ್ದ ಶುಭ ವೃಶ್ಚಿಕ ಲಗ್ನದಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಹಸೆ ಮಣೆ ಏರಿದರು. 7.45 ರ ಸುಮಾರಿಗೆ ಪ್ರೇರಣಾ ಶಂಕರ್ ಕೊರಳಿಗೆ ಧ್ರುವ ಸರ್ಜಾ ಮಾಂಗಲ್ಯಧಾರಣೆ ಮಾಡಿದರು. ಆ ಮೂಲಕ ಇಬ್ಬರ ಸುದೀರ್ಘ ಪ್ರೇಮಕ್ಕೆ ಅಧಿಕೃತ ಮುದ್ರೆ ಬಿದ್ದಂತಾಯಿತು.
ಬೆಂಗಳೂರಿನ ಜೆ.ಪಿ.ನಗರದಲ್ಲಿ ಇರುವ ಸಂಸ್ಕೃತಿ ಬೃಂದಾವನ ಕನ್ಷೆನ್ಸನ್ ಹಾಲ್ ನಲ್ಲಿ ಧ್ರುವ ಸರ್ಜಾ-ಪ್ರೇರಣಾ ಶಂಕರ್ ಮದುವೆ ಅದ್ಧೂರಿಯಾಗಿ ನಡೆಯಿತು. ಮುಹೂರ್ತ ಸಮಾರಂಭಕ್ಕೆ ಕ್ರೀಮ್ ಮತ್ತು ಕೇಸರಿ ಬಣ್ಣದ ರೇಶ್ಮೆ ಸೀರೆಯಲ್ಲಿ ವಧು ಪ್ರೇರಣಾ ಶಂಕರ್ ಮಿಂಚಿದರೆ, ವರ ಧ್ರುವ ಸರ್ಜಾ ಬಿಳಿ ಬಣ್ಣದ ರೇಶ್ಮೆ ಪಂಚೆ-ಶರ್ಟ್ ಧರಿಸಿದ್ದರು.

ವರ ಪೂಜೆ, ಕಾಶಿ ಯಾತ್ರೆ ಮುಗಿಸಿದ ಬಳಿಕ ಮದುವೆ ಮಂಟಪಕ್ಕೆ ವರ ಧ್ರುವ ಸರ್ಜಾ ಆಗಮಿಸಿದರೆ, ಗೌರಿ ಪೂಜೆ ನೆರವೇರಿಸಿ ಪ್ರೇರಣಾ ಶಂಕರ್ ಹಸೆಮಣೆ ಮೇಲೆ ಕೂತರು.
ಕುಟುಂಬಸ್ಥರು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಮದುವೆ ಸಾಂಪ್ರದಾಯಿಕವಾಗಿ ನಡೆಯಿತು. ಇಂದು ಸಂಜೆ 7.30 ರಿಂದ ಆರತಕ್ಷತೆ ನೆರವೇರಲಿದೆ. ನಾಳೆ ಅಭಿಮಾನಿಗಳಿಗೆ ವಿಶೇಷ ಔತಣಕೂಟ ಆಯೋಜಿಸಲಾಗಿದೆ.
ಅಂದ್ಹಾಗೆ, ಶಂಕರ್ ಮತ್ತು ಸರಿತಾ ದಂಪತಿಯ ಪುತ್ರಿ ಪ್ರೇರಣಾ. ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಪ್ರೇರಣಾ ಶಂಕರ್ ಕೆಲಸ ಮಾಡುತ್ತಿದ್ದಾರೆ. 15 ವರ್ಷಗಳಿಂದ ಪ್ರೇರಣಾ ಮತ್ತು ಧ್ರುವ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ. ಇಷ್ಟುದಿನ ಪ್ರೇಮಿಗಳಾಗಿದ್ದ ಧ್ರುವ-ಪ್ರೇರಣಾ ಇಂದು ದಂಪತಿಗಳಾಗಿದ್ದಾರೆ.


Click it and Unblock the Notifications











