"ಶಾಲೆಗೆ ಈ ದಿನ ರಜಾ" ಎಂದು ಹಾಡಿ ಕುಣಿದಿದ್ದ ನಿತಿನ್ ಗೋಪಿ ಹೃದಯಾಘಾತದಿಂದ ನಿಧನ
ಸ್ಯಾಂಡಲ್ವುಡ್ಗೆ ಮತ್ತೊಂದು ಆಘಾತ ಎದುರಾಗಿದೆ. ನಟ, ನಿರ್ದೇಶಕ ನಿತಿನ್ ಗೋಪಿ(39) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಬಾಲನಟನಾಗಿ ಇವರು ಕನ್ನಡ ಸಿನಿರಸಿಕರಿಗೆ ಹೆಚ್ಚು ಪರಿಚಿತರಾಗಿದ್ದರು. 'ಹಲೋ ಡ್ಯಾಡಿ' ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮಗನಾಗಿ ನಿತಿನ್ ಕಾಣಿಸಿಕೊಂಡಿದ್ದರು. "ಶಾಲೆಗೆ ಈ ದಿನ ರಜಾ" ಹಾಡಿನ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಮಕ್ಕಳು ಇವತ್ತಿಗೂ ಈ ಹಾಡು ಗುನುಗುತ್ತಾರೆ.
ಖ್ಯಾತ ಕೊಳಲು ವಾದಕ ಗೋಪಿ ಅವರ ಮಗನಾದ ನಿತಿನ್ ಅವರಿಗೆ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಹೃದಯಾಘಾತವಾಗಿತ್ತು. ಇಟ್ಟಮಡುವಿನ ಅಪಾರ್ಟ್ಮೆಂಟ್ನಲ್ಲಿ ಪೋಷಕರ ಜೊತೆ ವಾಸವಾಗಿದ್ದ ನಿತಿನ್ ಅವರಿಗೆ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಗಿತ್ತಾದರೂ ಮಾರ್ಗ ಮಧ್ಯದಲ್ಲೇ ತೀವ್ರ ಹೃದಯಾಘಾತದಿಂದ ಕೊನೆಯಿಸಿರೆಳೆದಿದ್ದಾರೆ.

'ಕೆರಳಿದ ಕೇಸರಿ', 'ಮುತ್ತಿನಂಥ ಹೆಂಡತಿ', 'ನಿಶಬ್ಧ', 'ಚಿರಬಾಂದವ್ಯ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಿತಿನ್ ಬಾಲನಟನಾಗಿ ನಟಿಸಿದ್ದರು. ಬಾಲಾಜಿ ಟೆಲಿಫಿಲ್ಮ್ಸ್ ಹಾಗೂ ಶ್ರುತಿ ನಾಯ್ಡು ಅವರ ಕೆಲ ಧಾರಾವಾಹಿಗಳಲ್ಲೂ ಕೆಲಸ ಮಾಡಿದ್ದರು. ಮುಂಬೈನಲ್ಲಿ ಚಿತ್ರೀಕರಣಗೊಂಡ 'ಹರ ಹರ ಮಹದೇವ' ಧಾರಾವಾಹಿಯ ಹಲವು ಸಂಚಿಕೆಗಳನ್ನು ನಿತಿನ್ ನಿರ್ದೇಶನ ಮಾಡಿದ್ದರು. ತಮಿಳು ಧಾರಾವಾಹಿಗೂ ಕೂಡ ಆಕ್ಷನ್ ಕಟ್ ಹೇಳಿದ್ದರು. ಹೊಸ ಧಾರಾವಾಹಿಯ ನಿರ್ದೇಶನಕ್ಕೆ ಸಿದ್ಧತೆ ನಡೆಸಿದ್ದದ್ದರು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು.

39 ವರ್ಷ ವಯಸ್ಸಾಗಿದ್ದ ನಿತಿನ್ ಅವರಿಗೆ ಮದುವೆ ಕೂಡ ಆಗಿರಲಿಲ್ಲ. ತಂದೆ ತಾಯಿಯ ಪೋಷಣೆಯಲ್ಲಿ ಜೀವನ ಸಾಗಿಸುತ್ತಿದ್ದರು. ಜೀವನದಲ್ಲಿ ದೊಡ್ಡದಾಗಿ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡಿದ್ದ ನಿತಿನ್ ಅರ್ಧಕ್ಕೆ ಎದ್ದು ಹೊರಟುಬಿಟ್ಟಿದ್ದಾರೆ. ಕನ್ನಡ ಕಿರುತೆರೆಯ ನಟ, ನಟಿಯರು, ತಂತ್ರಜ್ಞರು ನಿತಿನ್ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.


Click it and Unblock the Notifications











