ಅಭಿಮಾನಿಯ ಅಂತಿಮ ಇಚ್ಛೆ ಪೂರ್ಣಗೊಳಿಸಿದ ವಿಜಿ
ಸ್ಯಾಂಡಲ್ ವುಡ್ ನಲ್ಲಿ ಕರಿಯ ಅಂತ ಫೇಮಸ್ ಆಗಿರೋ 'ದುನಿಯಾ' ವಿಜಯ್ ಯಾರಿಗೆ ಗೊತ್ತಿಲ್ಲ ಹೇಳಿ, ಸಾಮಾನ್ಯವಾಗಿ ಅವರು ಒಬ್ಬ ಹೀರೋ ಅಂತ ಎಲ್ಲರೂ ಅಂದುಕೊಂಡಿರುತ್ತಾರೆ.
ಇನ್ನು 'ದುನಿಯಾ' ವಿಜಯ್ ಒಬ್ಬ ಕೊಡುಗೈ ದಾನಿ ಹಾಗೂ ಸಹೃದಯಿ ಅಂತ ಕೆಲವರಿಗೆ ತಿಳಿದಿರಲೂಬಹುದು.
ಅಂದಹಾಗೆ 'ದುನಿಯಾ' ವಿಜಿ ನಟನೆಯ ಜೊತೆಗೆ ಚಾರಿಟಿ ಟ್ರಸ್ಟ್ ಕೂಡ ನಡೆಸುತ್ತಿದ್ದಾರೆ. ತುಂಬಾ ವರ್ಷಗಳಿಂದ ಈ ಕೆಲಸವನ್ನು ಮಾಡಿಕೊಂಡು ಬರುತ್ತಿರುವ ವಿಜಿ ಅವರು ಇಲ್ಲಿಯವರೆಗೂ ಸಹಾಯದ ವಿಚಾರದಲ್ಲಿ ಯಾವುದೇ ರೀತಿಯ ಪಬ್ಲಿಸಿಟಿ ತೆಗೆದುಕೊಂಡಿಲ್ಲ ಎನ್ನುವುದಕ್ಕೆ ಅವರ ಸರಳ ವ್ಯಕ್ತಿತ್ವವೇ ಉತ್ತಮ ನಿದರ್ಶನ.
ದುನಿಯಾ ವಿಜಯ್ ಅವರು ಕ್ಯಾನ್ಸರ್ ಪೀಡಿತ ತಮ್ಮ ಕಟ್ಟಾ ಅಭಿಮಾನಿಯೊಬ್ಬರನ್ನು ಸಂಧಿಸಿ ಆತನ ಕೊನೆ ಆಸೆಯನ್ನು ಪೂರ್ಣಗೊಳಿಸುವ ಮೂಲಕ ಒಳ್ಳೆ ರೀತಿಯಲ್ಲಿ ಸುದ್ದಿಯಾಗಿದ್ದಾರೆ.
ಉತ್ತರ ಕರ್ನಾಟಕದ ಆಂಟನಿ ರಾಜ್ ಎಂಬಾತ ದುನಿಯಾ ವಿಜಿ ಅವರ ಪಕ್ಕಾ ಅಭಿಮಾನಿಯಾಗಿದ್ದು, ವಿಜಯ್ ಅವರ 'ದುನಿಯಾ' ಚಿತ್ರದಿಂದ ಹಿಡಿದು ಇಲ್ಲಿಯವರೆಗೆ ನಟಿಸಿದ ಎಲ್ಲಾ ಸಿನಿಮಾವನ್ನು ಚಾಚೂ ತಪ್ಪದೇ ನೋಡಿರುವ ಈತ ಕಳೆದ ಒಂದೂವರೆ ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾನೆ.
ಆದ್ದರಿಂದ ವಿಜಯ್ ಅಭಿಮಾನಿಯಾದ ಆಂಟನಿ ರಾಜ್ ಗೆ ದುನಿಯಾ ವಿಜಿಯವರನ್ನು ಒಂದು ಭಾರಿ ಭೇಟಿ ಮಾಡಬೇಕೆನ್ನುವ ಆಸೆ ಇತ್ತಂತೆ. ಇದನ್ನು ಅರಿತ ಖಾಸಗಿ ಚಾನಲ್ ಒಂದು ಕಾರ್ಯಕ್ರಮವೊಂದರಲ್ಲಿ ಇಬ್ಬರು ಭೇಟಿಯಾಗುವ ಅವಕಾಶ ಮಾಡಿಕೊಟ್ಟಿದೆ.
ಇದೀಗ ವಿಜಯ್ ಅವರನ್ನು ನೋಡಿ ಮಾತಾಡಿಸಿದ ಖುಷಿಯಲ್ಲಿರುವ ಆಂಟನಿ ರಾಜ್ ಅವರಿಗೆ ಆಗಸ್ಟ್ 28 ರಂದು ತೆರೆ ಕಾಣುತ್ತಿರುವ ವಿಜಯ್ 'ಆರ್ ಎಕ್ಸ್ ಸೂರಿ' ಚಿತ್ರ ನೋಡುವ ಹಂಬಲವಿದೆಯಂತೆ.
ಈಗಾಗಲೇ ಆಂಟನಿ ರಾಜ್ ಅವರ ಆರೋಗ್ಯ ತುಂಬಾ ಕ್ರಿಟಿಕಲ್ ಆಗಿದ್ದು, ದುನಿಯಾ ವಿಜಿಯ 'ಆರ್ ಎಕ್ಸ್ ಸೂರಿ' ಚಿತ್ರವನ್ನು ಅವರು ನೋಡುವಂತಾಗಲಿ ಎಂದು ನಾವು ಈ ಸಂದರ್ಭದಲ್ಲಿ ಆಶಿಸೋಣ.


Click it and Unblock the Notifications












