ವಿಜಯ್ ದುನಿಯಾದಲ್ಲಿ ಸ್ನೇಹ, ಪ್ರೀತಿ ಶಕ್ತಿ ಮತ್ತು ಭಕ್ತಿ..!
ವರ್ಷಕ್ಕೆ ಇನ್ನೂರಕ್ಕೂ ಅಧಿಕ ಸಿನಿಮಾಗಳು ಬಿಡುಗಡೆಯಾಗುವಾಗ ಹೊಸಬರ ಒಂದು ಸಿನಿಮಾ ಸುಪರ್ ಹಿಟ್ ಆದರೆ ವಿಶೇಷ ಏನಿಲ್ಲ. ಆದರೆ ಇಂದಿನ ಕೆಲವು ನಟರು ಅದೊಂದೇ ಚಿತ್ರಕ್ಕೆ ನಂಬರ್ ಒನ್ ಸ್ಟಾರ್ ಆದೆವೆಂಬ ಭ್ರಮೆಗೆ ಬಿದ್ದು ವೃತ್ತಿ ಬದುಕನ್ನೇ ಹಾಳು ಮಾಡಿಕೊಳ್ಳುತ್ತಾರೆ.
ಆದರೆ, ಬಂದ ದಾರಿಯನ್ನು ಕೊನೆಯತನಕವೂ ಮರೆಯದಂಥ ಡಾ.ರಾಜ್ ಮೆರೆದ ನಾಡು ನಮ್ಮದು. ಆ ನಿಟ್ಟಿನಲ್ಲಿ ದಶಕಗಳಿಂದ ತಾರೆಯಾಗಿರುವ ದುನಿಯಾ ವಿಜಿ ಕೂಡ ಇದ್ದಾರೆ ಎಂದರೆ ಅಚ್ಚರಿ ಬೇಕಾಗಿಲ್ಲ.
ಒಮ್ಮೆ ತಾರೆಯಾದವರು ತಾವು ಮತ್ತೆ ಆ ಸ್ಥಾನದಿಂದ ಕೆಳಗಿಳಿಯಬಾರದು ಎನ್ನುವ ಕಾರಣಕ್ಕೆ ಹಳೆಯ ಸ್ನೇಹವನ್ನೇ ಮರೆಯುತ್ತಾರೆ. ಹಿಂದೆ ಜೊತೆಗಿದ್ದವರನ್ನು ಸೇರಿಕೊಂಡರೆ ಮತ್ತೆ ಎಲ್ಲಿ ತಮ್ಮ ಇಂದಿನ ಸ್ಥಾನಮಾನಕ್ಕೆ ತೊಂದರೆಯಾದೀತು ಎಂದುಕೊಳ್ಳುತ್ತಾರೆ. ಆದರೆ ದುನಿಯಾ ವಿಜಯ್ ಮಾತ್ರ ಹಾಗಲ್ಲ.

ಇವರದು ಸರಳ ದುನಿಯಾ
ದುನಿಯಾ ವಿಜಯ್ ತಮ್ಮ ಸ್ನೇಹ, ಪ್ರೀತಿ, ದ್ವೇಷ ಯಾವುದನ್ನು ಕೂಡ ಅಡಗಿಸಲು ಪ್ರಯತ್ನಿಸಿದವರಲ್ಲ. ಆದರೆ, ತಾರೆಗಳು ಎಂದ ಮೇಲೆ ಹೀಗೆಯೇ ಇರಬೇಕು ಎಂದು ಸ್ಥಾನ ಕಲ್ಪಿಸಿಕೊಂಡವರಿಗೆ ಇದನ್ನೆಲ್ಲ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ಅವರು ಮಾತ್ರ ತಮ್ಮಷ್ಟಕ್ಕೆ ತಾವು ತಮ್ಮ ನಿಲುವುಗಳಿಗೆ ಬದ್ಧರಾಗಿದ್ದು ಬಾಳುತ್ತಿದ್ದಾರೆ ಅದಕ್ಕೊಂದು ಉದಾಹರಣೆ ಅವರ ಜಿಮ್ ರೂಮ್.!

ದುನಿಯಾ ಎಂಬ ಮಹಾ ಸಿನಿಮಾ
'ದುನಿಯಾ' ಚಿತ್ರದ ಮೂಲಕ ನಿರ್ದೇಶಕ ಸೂರಿ ತೋರಿಸಿದ್ದು ವಿಜಯ್ ಎಂಬ ಸ್ಟಾರ್ ನನ್ನು ಅಲ್ಲ. ವಿಜಯ್ ಎಂಬ ಕಲಾವಿದನನ್ನು. ಆದರೆ ಹಳ್ಳಿಗುಗ್ಗುವಿನ ಹಾಗೆ ಇದ್ದ ಆ ಪಾತ್ರವನ್ನು ಸ್ಟಾರ್ ಮಾಡಿದ ಕೀರ್ತಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಸಲ್ಲುತ್ತದೆ. ಇದೀಗ ದಶಕಗಳಿಂದ ಕನ್ನಡದ ಸ್ಟಾರ್ ನಟರ ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡಿರುವ ನಟನಾಗಿ ದುನಿಯಾ ವಿಜಯ್ ಕೂಡ ಇದ್ದಾರೆ. ಅವರ ಪ್ರತಿ ಚಿತ್ರ ಸೆಟ್ಟೇರುವಾಗಲೂ ಚಂದನವನದಲ್ಲಿ ಒಂದು ದೊಡ್ಡ ಮಟ್ಟದ ನಿರೀಕ್ಷೆ ಇದ್ದೇ ಇರುತ್ತದೆ. ಇಷ್ಟೆಲ್ಲ ಆಗಿದ್ದರೂ ತಮ್ಮ ದುನಿಯಾದ ಬಗ್ಗೆ ಇಂದಿಗೂ ಮರೆಯದವರು ವಿಜಯ್.

ಜಿಮ್ ನಲ್ಲಿ ಇರುವ ಚಿತ್ರ
ದುನಿಯಾ ವಿಜಯ್ ತಮ್ಮ ದುನಿಯಾ ಚಿತ್ರದಲ್ಲಿದ್ದ ತಮ್ಮ ಹಳ್ಳಿ ಗಮಾರನ ಆಳೆತ್ತರದ ಚಿತ್ರವನ್ನು ಹಾಗೇ ಫ್ರೇಮ್ ಹಾಕಿಸಿ, ತಾವು ನಿತ್ಯ ಜಿಮ್ ಮಾಡುವ ಕೋಣೆಯೊಳಗೆ ಇರಿಸಿಕೊಂಡಿದ್ದಾರೆ. ಇಷ್ಟು ವರ್ಷಗಳಲ್ಲಿ ಅವರ ಮೈ ಕಟ್ಟು ದುಪ್ಪಟ್ಟಾಗಿರಬಹುದು. ಆದರೆ ಮನದೊಳಗೆ ಮೊದಲ ಚಿತ್ರದ ತೊದಲು ಅವಕಾಶವನ್ನೇ ನೆನಪಿಸಿಕೊಂಡಿರುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ.

ಆಂಜನೇಯನ ಅಂತರಂಗ..!
ಕನ್ನಡ ಚಿತ್ರರಂಗದಲ್ಲಿ ಆಂಜನೇಯನ ಭಕ್ತರ ಪಟ್ಟಿ ಮಾಡಿದರೆ ಅರ್ಜುನ್ ಸರ್ಜರಿಂದ ಆರಂಭಗೊಂಡು ಹಲವಾರು ಕಲಾವಿದರ ಹೆಸರುಗಳು ಕೇಳಿ ಬರುತ್ತವೆ. ಬಹುಶಃ ಗ್ರಾಮೀಣ ಗರಡಿಯ ದೇಹದಂಡನೆಯನ್ನು ಅರಿತ ಗುರುಗಳ ಸಹವಾಸವೇ ಈ ಬಾಡಿಬಿಲ್ಡಿಂಗ್ ತೋರಿಸುವ ನಾಯಕರಲ್ಲಿ ಆಂಜನೇಯನ ಭಕ್ತಿ ಮೂಡಿಸಿರಬಹುದು. ಆ ನಿಟ್ಟಿನಲ್ಲಿ ದುನಿಯಾ ವಿಜಯ್ ಅವರ ನಿವಾಸದ ಮೇಲ್ಗಡೆ ಇರುವ ಜಿಮ್ ನಲ್ಲಿ ಆಂಜನೇಯನ ಚಿತ್ರವೂ ಇದೆ. ಆದರೆ ಅದು ಇತ್ತೀಚೆಗೆ ಜನಪ್ರಿಯಗೊಂಡಿರುವ ಕೆಂಪುಗಣ್ಣಿನ ಆಂಜನೇಯ ಅಲ್ಲ! ಊರೆಲ್ಲ ಅದೇ ಹನುಮಂತನ ಚಿತ್ರ ಹರಿದಾಡುತ್ತಿದ್ದರೂ ದುನಿಯಾ ವಿಜಯ್ ಮನೆಯಲ್ಲಿ ಮಾತ್ರ ಹಳೆಯ ಮಾದರಿಯ ಸಂಜೀವಿನ ಪರ್ವತ ಎತ್ತಿ ಹಾರುವ ಆಂಜನೇಯನೇ ಇದ್ದಾನೆ.

ಹೃದಯಸ್ಪರ್ಶಿ ಮಾತು
ಆಂಜನೇಯನ ಚಿತ್ರ ಅದೇಕೆ ಹೀಗೆ ಎಂದು ಅವರಲ್ಲೇ ಪ್ರಶ್ನಿಸಿದಾಗ ವಿಜಿ ನೀಡಿದ ಉತ್ತರ ಅಷ್ಟೇ ಹೃದಯಸ್ಪರ್ಶಿ ಆಗಿತ್ತು. "ನಾನು ಆರಂಭದಿಂದಲೇ ಚಿತ್ರಗಳಲ್ಲಿ ನೋಡಿಕೊಂಡು ಬಂದಿರುವುದು ಸೌಮ್ಯ ಮುಖದ ಆಂಜನೇಯನನ್ನು. ಆತ ಹೃದಯ ತೆರೆದು ನಿಂತಿದ್ದರೂ ಮುಖದಲ್ಲಿ ಭಕ್ತಿಯನ್ನಷ್ಟೇ ಕಂಡಿದ್ದೇವೆ. ಶ್ರೀರಾಮ ಸೀತೆಯರನ್ನು ಹೃದಯದಲ್ಲಿರಿಸಿರುವ ಹನುಮಂತ ಖಂಡಿತವಾಗಿ ಉಗ್ರರೂಪಿ ಎಂದು ಕಲ್ಪಿಸುವುದೇ ಕಷ್ಟ. ಹಾಗಾಗಿ ನನಗೆ ಆ ಚಿತ್ರ ಆಪ್ತವಾಗುವುದಿಲ್ಲ. ಓರ್ವ ಕಲಾವಿದನಾಗಿ ಆ ಚಿತ್ರರಚನಾಕಾರನ ಪ್ರಯೋಗವನ್ನು ಪ್ರಶಂಸಿಸಬಲ್ಲೆ. ಆದರೆ ಆಂಜನೇಯನ ಭಕ್ತನಾಗಿ ನನಗೆ ಭಕ್ತಿ ತುಂಬಿದ ವಿನಮ್ರ ಆಂಜನೇಯನೇ ಇಷ್ಟ" ಎಂದಿದ್ದಾರೆ ವಿಜಯ್.


Click it and Unblock the Notifications











