ಸಾಕಾಯ್ತು ಸೆರೆ'ವಾಸ'; ಹೈಕೋರ್ಟ್ಗೆ ನಟ ದರ್ಶನ್ ರಿಟ್ ಅರ್ಜಿ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಜನ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜುಲೈ 18ರವರೆಗೆ ನ್ಯಾಯಾಂಗ ಬಂಧನ ಮುಂದುವರೆಯಲಿದೆ. ಕೇಂದ್ರ ಕಾರಾಗೃಹದಲ್ಲಿ ವಿಚಾರಧೀನ ಕೈದಿಯಾಗಿ ದರ್ಶನ್ ಈಗಾಗಲೇ 18 ದಿನ ಕಳೆದಿದ್ದಾರೆ.
ನಟ ದರ್ಶನ್ ಜೈಲು ವಾಸಕ್ಕೆ ಬೇಸತ್ತಿದ್ದಾರೆ. ಜೈಲಿನಲ್ಲಿ ಖೈದಿಗಳಿಗೆ ನೀಡುವ ಊಟ ಸೇರದೇ, ನಿದ್ದೆ ಬಾರದೇ ತೂಕ ಕಳೆದುಕೊಂಡಿದ್ದಾರೆ. ಇನ್ನು ಯೋಚಿಸಿ ಪ್ರಯೋಜನವಿಲ್ಲ ಎಂದು ಮನೆ ಊಟ, ಹಾಸಿಗೆ ಹಾಗೂ ಓದಲು ಪುಸ್ತಕ ನೀಡುವಂತೆ ವಕೀಲರ ಮೂಲಕ ದರ್ಶನ್ ಹೈಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ರಿಟ್ ಅರ್ಜಿ ಸಲ್ಲಿಕೆಯಾಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ನಟ ದರ್ಶನ್ನನ್ನು ವಶಕ್ಕೆ ಪಡೆದು ತಿಂಗಳಾಗುತ್ತಾ ಬಂತು. ಹೊರಗಡೆ ಐಷಾರಾಮಿ ಜೀವನ ನಡೆಸುತ್ತಿದ್ದ ದರ್ಶನ್ ಇದೀಗ 4 ಗೋಡೆಗಳ ನಡುವೆ ಕಾಲ ಕಳೆಯುವಂತಾಗಿದೆ. ಬಯಸಿದ್ದೆಲ್ಲಾ ತಿನ್ನುತ್ತ, ಕುಡಿಯುತ್ತಾ, ಬೇಕಾದ ಕಡೆ ಸುತ್ತಾಡುತ್ತಾ, ವರ್ಕೌಟ್ ಮಾಡುತ್ತಾ ಆರಾಮಾಗಿದ್ದ ದರ್ಶನ್ ಈಗ ಜೈಲು ಹಕ್ಕಿ ಆಗಿದ್ದಾರೆ. ಇತರೆ ಖೈದಿಗಳಿಗೆ ಕೊಡುವಂತಹ ಊಟವನ್ನೇ ದರ್ಶನ್ ಸೇವಿಸುವಂತಾಗಿದೆ. ಮತ್ತೊಂದು ಕಡೆ ತಮ್ಮ ಇಂದಿನ ಸ್ಥಿತಿಗೆ ಬೇಸತ್ತು ಕುಗ್ಗಿ ಚಿಂತೆಗೆ ಬಿದ್ದಿದ್ದಾರೆ.
ಜೈಲಿನಲ್ಲಿ ನಟ ದರ್ಶನ್ಗೆ ಮನೆ ಊಟ ಮಾಡಲು ಅನುಮತಿ ನೀಡಬೇಕು, ಹಾಸಿಗೆ ನೀಡಬೇಕು, ಪುಸ್ತಕ ಓದಲು ಅವಕಾಶ ನೀಡಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ. ಈ ಸಂಬಂಧ ಇಂದು(ಜುಲೈ 9) ರಿಟ್ ಅರ್ಜಿ ಸಲ್ಲಿಕೆಯಾಗಿದ್ದು ಶೀಘ್ರದಲ್ಲೇ ಅರ್ಜಿಯ ವಿಚಾರಣೆ ನಡೆಯಲಿದೆ.
ಜೈಲಿನ ಊಟ ನಟ ದರ್ಶನ್ಗೆ ಜೀರ್ಣವಾಗುತ್ತಿಲ್ಲ. ಅಲ್ಲಿನ ಊಟ ತಿಂದು ಅವರಿಗೆ ವಾಂತಿ, ಭೇದಿ ಆಗುತ್ತಿದೆ ಎಂದು ಖುದ್ದು ಜೈಲಿನ ವೈದ್ಯರು ವರದಿ ನೀಡಿದ್ದಾರೆ. ಅದನ್ನು ಆಧರಿಸಿ ಅವರ ಆರೋಗ್ಯದ ದೃಷ್ಟಿಯಿಂದ ಮನೆ ಊಟಕ್ಕೆ ಅನುಮತಿ ಕೊಡಿ ಎಂದು ಅರ್ಜಿಯಲ್ಲಿ ದರ್ಶನ್ ಪರ ವಕೀಲರು ಆಗ್ರಹಿಸಿದ್ದಾರೆ. ಈ ಸಂಬಂಧ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.
ಈ ಹಿಂದೆ ನಟ ದರ್ಶನ್ 'ಕ್ರಾಂತಿ' ಸಿನಿಮಾ ಪ್ರಚಾರದ ವೇಳೆ ವಿಶೇಷ ವೀಡಿಯೋ ಹಂಚಿಕೊಂಡಿದ್ದರು. ಅದರಲ್ಲಿ ತಮ್ಮ ದಿನಚರಿ, ವರ್ಕೌಟ್ ರೊಟೀನ್, ಡಯೆಟ್ ಎಲ್ಲದರ ಬಗ್ಗೆ ಮಾತನಾಡಿದ್ದರು. ಸಿಗರೇಟ್ ಸೇದುವ ಅಭ್ಯಾಸದ ಬಗ್ಗೆಯೂ ಹೇಳಿಕೊಂಡಿದ್ದರು. ಆ ರೀತಿ ಜೀವನ ಸಾಗಿಸುತ್ತಿದ್ದವರು ಈಗ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ. ಮತ್ತೊಂದು ಕಡೆ ಅವರಿಗೆ ಬೇಲ್ ಕೊಡಿಸಲು ಪತ್ನಿ ವಿಜಯಲಕ್ಷ್ಮಿ ಓಡಾಡುತ್ತಿದ್ದಾರೆ.
ಬೇಗ ದರ್ಶನ್ ಸಂಕಷ್ಟದಿಂದ ಹೊರಬರಲಿ, ಜೈಲಿನಿಂದ ಬಿಡುಗಡೆ ಆಗಲಿ ಎಂದು ಅಭಿಮಾನಿಗಳು ಹಾಗೂ ಆಪ್ತರು ಪ್ರಾರ್ಥಿಸುತ್ತಿದ್ದಾರೆ. ಇತ್ತೀಚೆಗೆ ವಿಜಯಲಕ್ಷಿ ದರ್ಶನ್ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಅಭಿಮಾನಿಗಳು ಕೂಡ ದೇವಸ್ಥಾನಗಳಲ್ಲಿ ಪೂಜೆ ಮಾಡಿ ಬೇಡಿಕೊಳ್ಳುತ್ತಿದ್ದಾರೆ. ಆದರೆ ಸದ್ಯಕ್ಕೆ ಜಾಮೀನು ಸಿಗುವುದು ಕೂಡ ಕಷ್ಟ ಎನ್ನಲಾಗುತ್ತಿದೆ.


Click it and Unblock the Notifications











