ಮಂಡ್ಯದ ಗಂಡು, ಕರುನಾಡ ಕರ್ಣ, ಸ್ಯಾಂಡಲ್ ವುಡ್ ನ ಜಲೀಲ ಅಂಬರೀಶ್ ಇನ್ನಿಲ್ಲ.!
Recommended Video

ಯಾರೂ ನಿರೀಕ್ಷೆ ಮಾಡದ ಆಘಾತಕಾರಿ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ಸ್ಯಾಂಡಲ್ ವುಡ್ ಸಿನಿ ಪ್ರಿಯರು ಅರಗಿಸಿಕೊಳ್ಳಲು ಆಗದ ಕಹಿ ಸುದ್ದಿ ಬರಸಿಡಿಲಿನಂತೆ ಬಡಿದಿದೆ.
ಮಂಡ್ಯದ ಗಂಡು.. ಕರುನಾಡ ಕರ್ಣ.. ಸ್ಯಾಂಡಲ್ ವುಡ್ ನ ಜಲೀಲ ಅಂಬರೀಶ್ (66) ಇಹಲೋಕ ತ್ಯಜಿಸಿದ್ದಾರೆ. ಇಂದು ಸಂಜೆ ವೇಳೆಗೆ ಉಸಿರಾಟದ ಸಮಸ್ಯೆಯಿಂದ ಬಳಲಿದ ನಟ ಅಂಬರೀಶ್ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಅಂಬರೀಶ್ ನಿಧನರಾಗಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಶ್ವಾಸಕೋಶದ ಸೋಂಕಿನಿಂದ ಬಳಲಿದ್ದ ಅಂಬರೀಶ್ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಜೊತೆಗೆ ಸಿಂಗಾಪುರಕ್ಕೂ ತೆರಳಿ ಮೌಂಟ್ ಎಲಿಜಬತ್ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿದ್ದರು. ಬಳಿಕ ಫಿಟ್ ಅಂಡ್ ಫೈನ್ ಆಗಿದ್ದ ಅಂಬರೀಶ್ ಸಿನಿಮಾ ಚಿತ್ರೀಕರಣಗಳಲ್ಲಿ ಭಾಗವಹಿಸಿದ್ದರು.

ಅಂಬಿ ನಿಂಗ್ ವಯಸ್ಸಾಯ್ತೋ
ಪೂರ್ಣ ಪ್ರಮಾಣದ ನಾಯಕನಾಗಿ ಅಂಬರೀಶ್ ಅಭಿನಯಿಸಿದ್ದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಇತ್ತೀಚೆಗಷ್ಟೇ ತೆರೆ ಕಂಡಿತ್ತು. ಈ ಚಿತ್ರದ ಬಿಡುಗಡೆ ವೇಳೆಯೂ ಅಂಬರೀಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಎಲ್ ಪಂದ್ಯಾವಳಿ ನಡೆಯುವ ಸಂದರ್ಭದಲ್ಲಿ ಅಂಬರೀಶ್ ಕುಸಿದು ಬಿದ್ದಿದ್ದರು.

ಚಿತ್ರರಂಗದ ದಿಗ್ಗಜ
ಆರೋಗ್ಯ ಸಮಸ್ಯೆ ಇದ್ದರೂ, ಚಿತ್ರರಂಗದ ಸಮಸ್ಯೆಗಳಿಗೆ ಅಂಬರೀಶ್ ಸದಾ ಸ್ಪಂದಿಸುತ್ತಿದ್ದರು. ಇತ್ತೀಚೆಗಷ್ಟೇ ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ನಡುವಿನ ವಿವಾದ ಬಗೆಹರಿಸಲು ಅಂಬರೀಶ್ ಮುಂದಾಗಿದ್ದರು.

ಇಂದು ಬೇಸರಗೊಂಡಿದ್ದ ಅಂಬಿ
ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ಇಂದು ಸಂಭವಿಸಿದ ಬಸ್ ಅಪಘಾತದ ಬಗ್ಗೆ ಕೆಲವೇ ಕೆಲವು ಗಂಟೆಗಳ ಹಿಂದೆಯಷ್ಟೇ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೇ, ತಮಗೆ ಆರೋಗ್ಯ ಸರಿಯಿಲ್ಲದ ಕಾರಣ, ಘಟನೆ ಸಂಭವಿಸಿದ ಸ್ಥಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಆದ್ರೀಗ, ದುರಂತ ಅಂದ್ರೆ ಅಂಬರೀಶ್ ರವರೇ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ಪಿಟೀಲು ಚೌಡಯ್ಯ ಮೊಮ್ಮಗ
1952 ಮೇ 29 ರಂದು ಮಂಡ್ಯ ಜಿಲ್ಲೆಯ ದೊಡ್ಡ ಅರಸಿನಕೆರೆಯಲ್ಲಿ ಜನಿಸಿದ ಅಂಬರೀಶ್ ನಿಜನಾಮ ಮಳವಳ್ಳಿ ಹುಚ್ಚೇಗೌಡ ಅಮರನಾಥ್. ಹುಚ್ಚೇಗೌಡ ಮತ್ತು ಪದ್ಮಮ್ಮ ದಂಪತಿಯ ಆರನೇ ಪುತ್ರ ಅಮರನಾಥ್. ಖ್ಯಾತ ಪಿಟೀಲು ವಾದಕ ಪಿಟೀಲು ಚೌಡಯ್ಯ ರವರ ಮೊಮ್ಮಗ ಈ ಅಮರನಾಥ್.

ಪುಟ್ಟಣ್ಣ ಪರಮ ಶಿಷ್ಯ
ಪುಟ್ಟಣ್ಣ ಕಣಗಾಲ್ ರವರ ಪರಮ ಶಿಷ್ಯರಾಗಿದ್ದ ಅಂಬರೀಶ್ 'ನಾಗರಹಾವು' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ಖಳನಾಯಕ, ನಾಯಕ, ಪೋಷಕ ನಟ ಸೇರಿದಂತೆ ಹಲವು ಪಾತ್ರಗಳಿಗೆ ಜೀವ ತುಂಬಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಂಬರೀಶ್ ಅಭಿನಯಿಸಿದ್ದಾರೆ.

ರಾಜಕೀಯದಲ್ಲಿ ಅಂಬಿ
ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ, ಅಂಬರೀಶ್ ರಾಜಕೀಯಕ್ಕೆ ಧುಮುಕಿದರು. ಲೋಕಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ, ಕರ್ನಾಟಕ ವಸತಿ ಸಚಿವರಾಗಿ ಅಂಬರೀಶ್ ಕಾರ್ಯ ನಿರ್ವಹಿಸಿದ್ದಾರೆ.

ಮಗನ ಚಿತ್ರೀಕರಣ ನಡೆಯುತ್ತಿತ್ತು
ಅಪ್ಪನ ಹಾಗೆ ಪುತ್ರ ಅಭಿಶೇಕ್ ಕೂಡ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ. ಮಗನ ಚಿತ್ರವನ್ನ ಕಣ್ತುಂಬಿಕೊಳ್ಳುವ ಮುನ್ನವೇ ಅಂಬರೀಶ್ ವಿಧಿವಶರಾಗಿದ್ದಾರೆ.


Click it and Unblock the Notifications











