ಕನ್ನಡದಲ್ಲಿ 'ಚೌಕೀದಾರ್' ಚಿತ್ರ : 55ರ ವಯಸ್ಕನ ಪಾತ್ರದಲ್ಲಿ ಗಣೇಶ್!
ಗಣೇಶ್ ಅದೇ ಅದೇ ರೀತಿಯ ಪಾತ್ರಗಳನ್ನು ಮಾಡ್ತಿದ್ದಾರೆ ಅಂತ ನಿಮಗೆ ಬೇಸರ ಆಗಿರಬಹುದು. ಆದರೆ, ಸ್ಪಲ್ಪ ದಿನ ಕಾದರೆ ನೀವು ಗಣೇಶ್ ರನ್ನು ಒಂದು ಸಂಪೂರ್ಣ ವಿಭಿನ್ನ ಪಾತ್ರದಲ್ಲಿ ನೋಡಬಹುದು.
ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ 'ರಥಾವರ' ಹಾಗೂ 'ತಾರಕಾಸುರ' ಸಿನಿಮಾಗಳ ಬಳಿಕ ಮತ್ತೊಂದು ಹೊಸ ಚಿತ್ರದ ತಯಾರಿಯಲ್ಲಿ ಇದ್ದಾರೆ. ಆದರೆ, ಕ್ಲಾಸಿ ಹೀರೋ ಗಣೇಶ್ ಹಾಗೂ ರಗಡ್ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಕಾಂಬಿನೇಶನ್ ಎಂದಾಗಲೇ ಎಲ್ಲರಿಗೂ ಅಚ್ಚರಿ ಆಗುತ್ತಿದೆ.
ಮತ್ತೊಂದು ವಿಶೇಷ ಏನೆಂದರೆ, ಈ ಚಿತ್ರದ ಟೈಟಲ್ 'ಚೌಕೀದಾರ್'. ಪ್ರಧಾನಿ ನರೇಂದ್ರ ಮೋದಿ ಶುರು ಮಾಡಿದ 'ಚೌಕೀದಾರ್' ಅಭಿಮಾನ ದೇಶದ ತುಂಬ ಹರಡಿತ್ತು. ಈಗ ಅದೇ ಹೆಸರಿನಲ್ಲಿ ಸಿನಿಮಾ ಬರುತ್ತಿದೆ. ಅದು ಕನ್ನಡದಲ್ಲಿ.
ಅಂದಹಾಗೆ, ತಮ್ಮ ಈ ಸಿನಿಮಾದ ಬಗ್ಗೆ ಅನೇಕ ವಿಷಯಗಳನ್ನು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಹಂಚಿಕೊಂಡಿದ್ದಾರೆ. ಆ ವಿವರ ಹೀಗಿವೆ...

'ಚೌಕೀದಾರ್' ಟೈಟಲ್ ನಲ್ಲಿ ಹೊಸ ಚಿತ್ರ
'ಚೌಕೀದಾರ್' (ಕಾವಲುಗಾರ ಅಥವಾ ರಕ್ಷಕ) ಎಂಬ ಟೈಟಲ್ ಅನ್ನು ಎರಡು ತಿಂಗಳ ಹಿಂದೆಯೇ ರಿಜಿಸ್ಟರ್ ಮಾಡಿಸಲಾಗಿದೆ. ಸಿನಿಮಾದ ಕಥೆಗೆ ಈ ಟೈಟಲ್ ತುಂಬ ಸೂಟ್ ಆಗುವ ಕಾರಣ ಈ ಶೀರ್ಷಿಕೆ ಇಡಲಾಗಿದೆ. ಈ ಹೆಸರು ಕೇಳಿದ ತಕ್ಷಣ ರಾಜಕೀಯದ ಕೆಲವು ಅಂಶಗಳು ಸಿನಿಮಾದಲ್ಲಿ ಇರುತ್ತದೆಯಾ? ಎನ್ನುವ ಪ್ರಶ್ನೆ ಮೂಡುತ್ತದೆ. ಇದಕ್ಕೆ ನಿರ್ದೇಶಕರು 'ಹೌದು' ಎಂಬ ಉತ್ತರ ನೀಡಿದ್ದಾರೆ.

ಗಣೇಶ್ ಆಯ್ಕೆ ಯಾಕೆ?
ಈ ಚಿತ್ರಕ್ಕೆ ಗಣೇಶ್ ಆಯ್ಕೆ ಏಕೆ ಎನ್ನುವ ಕುತೂಹಲ ಕೆಲವರಿಗೆ ಇರಬಹುದು. ಚಂದ್ರಶೇಖರ್ ಬಂಡಿಯಪ್ಪ ಈ ಹಿಂದೆ ಗಣೇಶ್ ಅವರ 'ಚೆಲುವಿನ ಚಿತ್ತಾರ' ಹಾಗೂ 'ಶೈಲೂ' ಚಿತ್ರಗಳಿಗೆ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಎರಡು ವರ್ಷದಿಂದ ಗಣೀಗೆ ಒಂದು ಚಿತ್ರ ಮಾಡಬೇಕು ಎನ್ನುವ ಪ್ಲಾನ್ ಇತ್ತು. ಹೀಗಾಗಿ, ಗಣೇಶ್ ರನ್ನು ಬೇರೆಯದ್ದೆ ರೀತಿ ತೋರಿಸುವ ಪ್ರಯತ್ನದಲ್ಲಿ ಈ ಚಿತ್ರ ಶುರುವಾಗಿದೆ.

55ರ ವಯಸ್ಕನ ಪಾತ್ರದಲ್ಲಿ ಗಣೇಶ್
ಸಿನಿಮಾದ ಸೆಕೆಂಡ್ ಹಾಫ್ ನಲ್ಲಿ ಗಣೇಶ್ 55ರ ವಯಸ್ಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗಣೇಶ್ ರಿಗೆ ತುಂಬ ಪ್ಲಸ್ ಪಾಯಿಂಟ್ ಗಳು ಇವೆ. ಅದನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಎನ್ನುವ ಬಂಡಿಯಪ್ಪ, ಹೊಸತನ ಬೇಕು ಅಂದರೆ, ರಿಸ್ಕ್ ತೆಗೆದುಕೊಳ್ಳಬೇಕು ಎಂದರು. ಹೀಗಾಗಿ ಈ ಚಿತ್ರದಲ್ಲಿ ಗಣೇಶ್ ಇಮೇಜ್ ಬದಲು ಮಾಡಿ ಅಭಿಮಾನಿಗಳಿಗೆ ದೊಡ್ಡ ಅಚ್ಚರಿ ನೀಡಲಿದ್ದಾರೆ.

ಸಂಸ್ಕೃತಿ, ಆಚರಣೆಗಳ ಬಗ್ಗೆ ಒಲವು
ಭಾರತ ಸಂಸ್ಕೃತಿ, ದೇಶದ ಆಚರಣೆಗಳ ಬಗ್ಗೆ ಚಂದ್ರಶೇಖರ್ ಬಂಡಿಯಪ್ಪರಿಗೆ ಒಲವಿದೆ. ಅದನ್ನು ತಮ್ಮ ಪ್ರತಿ ಚಿತ್ರದಲ್ಲಿಯೂ ತೋರಸಲು ಪ್ರಯತ್ನ ಮಾಡುತ್ತಾರೆ. ಈ ಚಿತ್ರದಲ್ಲಿಯೂ ತಮ್ಮ ಮೇಕಿಂಗ್ ಸ್ಟೈಲ್ ಜೊತೆಗೆ ಒಂದು ವಿಷಯ ಹೇಳಲು ಪ್ರಯತ್ನ ಮಾಡಿದ್ದಾರಂತೆ. ತುಂಬ ಯೋಚನೆ ಮಾಡಿ ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರಂತೆ.

ಚಿತ್ರದ ವಿಷಯ ಏನು?
ಸಾಮಾಜಿಕ ಜಾಲತಾಣಗಳಲ್ಲಿ ಯಾರು ಏನು ಬೇಕಾದರೂ ಆಗಬಹುದು, ಒಂದೇ ದಿನದಲ್ಲಿ ಒಬ್ಬ ವ್ಯಕ್ತಿ ಹೀರೋ ಆದ್ರೆ, ಮತ್ತೊಬ್ಬ ವ್ಯಕ್ತಿ ಜೀರೋ ಆಗಬಹುದು. ಈ ವಿಷಯದ ಮೇಲೆ ಚಿತ್ರದ ಕಥೆ ಇದೆಯಂತೆ. ಬಾಂಬೆ ಮೂಲದ ನಿರ್ಮಾಪಕರು ಚಿತ್ರಕ್ಕೆ ಹಣ ಹಾಕಲಿದ್ದಾರೆ. ಇದು ಅವರ ಮೊದಲ ಕನ್ನಡ ಚಿತ್ರ.

ಆಗಸ್ಟ್ ಗೆ ಮುಹೂರ್ತ ಆಗಬಹುದು
ಚಿತ್ರದ ಮಾತುಕತೆ ಇನ್ನು ಬಾಕಿ ಇದ್ದೂ, ಆಗಸ್ಟ್ ವೇಳೆಗೆ ಚಿತ್ರದ ಮುಹೂರ್ತ ಆಗಬಹುದು. ಗಣೇಶ್ ರಿಗೆ ಬೇರೆ ರೀತಿಯ ಒಂದು ಸಿನಿಮಾ ಮಾಡಬೇಕು ಎನ್ನುವ ಆಸೆಯಿಂದ ಈ ಪ್ರಾಜೆಕ್ಟ್ ಚಂದ್ರಶೇಖರ್ ಬಂಡಿಯಪ್ಪ ಶುರು ಮಾಡಿದ್ದಾರೆ. ಈ ಬಾರಿ ಫ್ಯಾಮಿಲಿ ಆಡಿಯನ್ಸ್ ಕಡೆ ಹೆಚ್ಚು ಗಮನ ನೀಡುತ್ತಿದ್ದಾರಂತೆ. ''ಜನ ಸಿನಿಮಾ ನೋಡುತ್ತಾರೆ.. ನಾವು ಒಳ್ಳೆಯ ಸಿನಿಮಾ ಮಾಡಬೇಕು ಅಷ್ಟೇ'' ಎನ್ನುತ್ತಲೇ ತಮ್ಮ ಮಾತು ಮುಗಿಸಿದರು ಬಂಡಿಯಪ್ಪ.


Click it and Unblock the Notifications











