ಸ್ವಾಭಿಮಾನ, ಅವಕಾಶಗಳ ಕೊರತೆ, ಮದುವೆ, ಆರೋಗ್ಯ ಸಮಸ್ಯೆ; ಗಿರಿ ದಿನೇಶ್ ಬಗ್ಗೆ ಆಪ್ತರ ಮಾತು
ಕನ್ನಡ ಚಿತ್ರರಂಗದ ಖ್ಯಾನ ನಟ ದಿ. ದಿನೇಶ್ ಪುತ್ರ ಗಿರಿ ದಿನೇಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗಿರಿ ಕೂಡ ಕೆಲ ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಮುಖ್ಯವಾಗಿ 'ನವಗ್ರಹ' ಚಿತ್ರದ ಶೆಟ್ಟಿ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು. ಅವಕಾಶಗಳ ಕೊರತೆ, ಆರೋಗ್ಯ ಸಮಸ್ಯೆ ಅವರನ್ನು ಬಾಧಿಸುತ್ತಿತ್ತು.
ಗಿರಿ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಿದೆ. ಕೆಲವೇ ಆಪ್ತರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಕನ್ನಡ ಮತ್ತೊಬ್ಬ ಖ್ಯಾತ ಖಳನಟ ದಿ. ಸುಂದರ್ ಕೃಷ್ಣ ಅರಸ್ ಪುತ್ರ ನಾಗೇಂದ್ರ ಕೂಡ ಸ್ನೇಹಿತ ಪಾರ್ಥೀವ ಶರೀರದ ಅಂತಿಮ ದರ್ಶನ್ ಪಡೆದರು. ತಂದೆ ದಿನೇಶ್ ಅವರು ಕೂಡ ಹೃದಯಾಘಾತದಿಂದ 1990ರಲ್ಲಿ ಕೊನೆಯುಸಿರೆಳೆದಿದ್ದರು. ಆಗ ಅವರಿಗೆ 53 ವರ್ಷ ಆಗಿತ್ತು. ಇದೀಗ ಗಿರಿ ಕೂಡ 45 ವರ್ಷಕ್ಕೆ ಹೃದಯಾಘಾತದಿಂದ ಇಹಲೋಹ ತ್ಯಜಿಸಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾಗಲೇ ದಿನೇಶ್ ನಿಧನರಾಗಿದ್ದರು. ಬಳಿಕ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. 5 ಜನ ಮಕ್ಕಳಲ್ಲಿ ಗಿರಿ ಕೊನೆಯವರು. ಬಳಿಕ ಕುಟುಂಬದ ಯಾರು ಕೂಡ ಚಿತ್ರರಂಗದಲ್ಲಿ ಅಷ್ಟಾಗಿ ಗುರ್ತಿಸಿಕೊಳ್ಳಲಿಲ್ಲ. 'ನವಗ್ರಹ' ಚಿತ್ರದ ಮೂಲಕ ಗಿರಿ ಪ್ರೇಕ್ಷಕರ ಮುಂದೆ ಬಂದಿದ್ದರು. ಚಿತ್ರದಲ್ಲಿ ಶೆಟ್ಟಿ ಪಾತ್ರದಲ್ಲಿ ನಟಿಸಿ ತಮ್ಮ ಕಾಮೆಡಿ ಟೈಮಿಂಗ್ನಿಂದ ಮೋಡಿ ಮಾಡಿದ್ದರು.
ಆ ಬಳಿಕ ಕೂಡ ಹೆಚ್ಚು ಅವಕಾಶಗಳು ಸಿಕ್ಕಿರಲಿಲ್ಲ. 'ಬಾರೆ ನನ್ನ ಮುದ್ದಿನ ರಾಣಿ' ಚಿತ್ರದಲ್ಲಿ ಗಿರಿ ಬಾಲನಟನಾಗಿ ನಟಿಸಿದ್ದರು. 'ವಜ್ರ' ಹಾಗೂ 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ' ಸೇರಿ ಎರಡ್ಮೂರು ಸಿನಿಮಾಗಳಲ್ಲಿ ಹಾಸ್ಯನಟನಾಗಿ ನಟಿಸಿದ್ದರು. ತಂದೆ -ತಾಯಿ ಅಗಲಿಕೆ ಬಳಿಕ ಚಿಕ್ಕಮ್ಮ ತಾಯಿ ರೀತಿ ಮಕ್ಕಳನ್ನು ಸಾಕಿದ್ದರು. ಗಿರಿ ಅವರ ಮನೆಯಲ್ಲೇ ಇದ್ದರು. ನಿನ್ನೆ(ಫೆಬ್ರವರಿ 7) ಮನೆಯಲ್ಲಿ ಕುಸಿದು ಬಿದ್ದಿದ್ದ ಗಿರಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ನಟ ಗಿರಿ ಚಿಕ್ಕಮ್ಮ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. "ಮುಖ ತೊಳೆಯಲು ಬಚ್ಚಲು ಮನೆ ಬಳಿಕ ಬಂದ ಕುಸಿದು ಬಿದ್ದ. ಕೊಂಚ ಬಾಯಿಯಿಂದ ರಕ್ತಬಂತು. ಎಷ್ಟು ಹೊತ್ತಾದರೂ ಏಳಲಿಲ್ಲ. ಬಳಿಕ ವೈದ್ಯರು ಕರೆಸಿದಾಗ ಜೀವ ಹೋಗಿದೆ ಎಂದು ಗೊತ್ತಾಯಿತು. ಹೃದಯಾಘಾತದಿಂದ ಸಾವು ಸಂಭವಿಸಿದೆ. ನಾಲ್ಕೈದು ತಿಂಗಳಿಂದ ಶುಗರ್ ಇತ್ತು. ಚಿಕಿತ್ಸೆ ಕೊಡಿಸುತ್ತಿದ್ದೆವು" ಎಂದು ತಿಳಿಸಿದ್ದಾರೆ.
"ಸಿನಿಮಾ ಅವಕಾಶಗಳ ಬಗ್ಗೆ ನಮಗೆ ಗೊತ್ತಿಲ್ಲ. ಕೆಲವೊಮ್ಮೆ ಬರುತ್ತದೆ, ಕೆಲವೊಮ್ಮೆ ಬರಲ್ಲ. ಅವನು ಹೆಚ್ಚು ಮಾತನಾಡುತ್ತಿರಲಿಲ್ಲ, ಬಹಳ ಸೌಮ್ಯ ಸ್ವಭಾವದವನು. ಇದ್ದಕ್ಕಿದಂತೆ ದೇಹದ ತೂಕ ಕಮ್ಮಿ ಆಗಿತ್ತು. ಪರೀಕ್ಷೆ ಮಾಡಿಸಿದಾಗ ಶುಗರ್ ಇರುವುದು ಗೊತ್ತಾಗಿತ್ತು. ಅದಕ್ಕೆ ಮಾತ್ರೆ ಕೊಡುತ್ತಿದ್ದೆವು" ಎಂದು ಚಿಕ್ಕಮ್ಮ ಗಿರಿ ಬಗ್ಗೆ ಹೇಳಿದ್ದಾರೆ.
ಗಿರಿ ಸಹೋದರಿ ಮಾತನಾಡಿ "ಅಪ್ಪ ಅಮ್ಮ ತೀರಿಕೊಂಡ ಬಳಿಕ ನಮ್ಮ ಚಿಕ್ಕಮ್ಮ ನಮ್ಮನ್ನು ಸಾಕಿದ್ದು. ಅವರ ಜೊತೆಗೆ ಗಿರಿ ಇದ್ದ. ನಮ್ಮ ಸಹೋದರ, ಸಹೋದರಿಯರಲ್ಲಿ ಗಿರಿ ಕೊನೆಯವನು. ಅವನು ಮದುವೆ ಆಗಲಿಲ್ಲ. ಅದಕ್ಕೆ ರೀಸನ್ ಅಂತ ಇಲ್ಲ, ಆ ಸಮಯದಲ್ಲಿ ಆಗಲಿಲ್ಲ ಅಷ್ಟೇ. ಚಿತ್ರರಂಗದಿಂದ ಯಾವುದೇ ಸಮಸ್ಯೆ ಇಲ್ಲ. ಗಿರಿ ಸ್ವತಃ ನಟನೆಯತ್ತ ಆಸಕ್ತಿ ತೋರಿಸಲಿಲ್ಲ. ಇನ್ನುಳಿದಂತೆ ಚಿತ್ರರಂಗದಿಂದ ಬೆಂಬಲ ಇದೆ" ಎಂದಿದ್ದಾರೆ.
ಸ್ನೇಹಿತ, ನಟ ನಾಗೇಂದ್ರ ಅರಸ್ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿ ಗಿರಿ ದಿನೇಶ್ ಬಗ್ಗೆ ಮಾತನಾಡಿದ್ದಾರೆ. "ನಮ್ಮ ಜೊತೆ 'ನವಗ್ರಹ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದೆವು. ಆ ಬಳಿಕ ನಾವು ಒಂದಷ್ಟು ಕಡೆ ರೆಫರ್ ಮಾಡಿದ್ದೆವು. ಆ ಬಳಿಕ ಏನಾಯ್ತು ಗೊತ್ತಿಲ್ಲ. ಎರಡು ತಿಂಗಳ ಹಿಂದೆ ಭೇಟಿ ಮಾಡಿದ್ದೆ. 'ನವಗ್ರಹ' ರೀ-ರಿಲೀಸ್ ವೇಳೆ ಪ್ರಚಾರಕ್ಕೆ ಕರೆದಾಗ ಬರೋಕೆ ಸಾಧ್ಯವಿಲ್ಲ, ಹುಷಾರಿಲ್ಲ, ಟೈಫಾಯ್ಡ್ ಬಂದಿತ್ತು ಎಂದು ಹೇಳಿದ್ದ" ಎಂದು ನೆನಪಿಸಿಕೊಂಡಿದ್ದಾರೆ.
"ಮದುವೆ ಬಗ್ಗೆ ಕೇಳಿದರೆ ಈಗ ಮದುವೆನಾ? ಯಾರು ಹೆಣ್ಣು ಕೊಡ್ತಾರೆ ಎನ್ನುತ್ತಿದ್ದ. ಅದು ಬಿಟ್ಟು ನಾವು ಹೆಚ್ಚು ಕೇಳಲು ಹೋಗುತ್ತಿರಲಿಲ್ಲ. ಬಹಳ ಸ್ವಾಭಿಮಾನಿ ಆಗಿದ್ದ ಗಿರಿ ಯಾರ ಬಳಿಯೂ ಹೋಗಿ ಅವಕಾಶ ಕೇಳುತ್ತಿರಲಿಲ್ಲ. ನಮ್ಮ ಹತ್ತಿರ ಕೂಡ ಬಂದು ಮಾತನಾಡಲು ಹಿಂಜರಿಯುತ್ತಿದ್ದರು" ಎಂದು ನಾಗೇಂದ್ರ ಅರಸ್ ತಿಳಿಸಿದ್ದಾರೆ.


Click it and Unblock the Notifications











