ವ್ಯಕ್ತಿ ಮೇಲೆ ಜಗ್ಗೇಶ್ ಹಲ್ಲೆ ಆರೋಪ: ಘಟನೆ ತಿರುಚಲಾಗಿದೆ ಎಂದ ನಟ
ಕನ್ನಡ ನಟ, ನವರಸ ನಾಯಕ ಜಗ್ಗೇಶ್ ಮಲ್ಲೇಶ್ವರಂನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಪಟ್ಟಂತೆ ಜಗ್ಗೇಶ್ ಮತ್ತು ಮಾದೇಗೌಡ ಎಂಬ ವ್ಯಕ್ತಿಯ ನಡುವೆ ತಳ್ಳಾಟ ನಡೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ವಿಡಿಯೋಗೆ ಸಂಬಂಧಪಟ್ಟಂತೆ ನಟ ಜಗ್ಗೇಶ್ ಅವರ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ನಡೆದ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ''ನನ್ನ ಬಗ್ಗೆ ಮಾಧ್ಯಮಕ್ಕೆ ತಪ್ಪು ಸಂದೇಶದ ವೀಡಿಯೋ ನೀಡಿ, ನಡೆದ ಘಟನೆ ಬಗ್ಗೆ ಪರಿಶೀಲನೆ ಮಾಡಿದೆ ನನಗೆ ದಕ್ಕೆ ತರಲಾಗುತ್ತಿದೆ. ಮಹನೀಯನಿಗೆ ಸೈಬರ್ ಕ್ರೈಂಗೆ ದೂರು ನೀಡಿ ಕಾನೂನಾತ್ಮಕವಾಗಿ ಉತ್ತರಿಸುವೆ. ಮನಸಿಗೆ ಬಹಳ ನೋವಾಯಿತು. ತಪ್ಪು ಮಾಡಿದವನಿಗೆ ತಿದ್ದುವ ಯತ್ನಕ್ಕೆ ಇಂಥ ತಿರುವ ಬೇಸರವಾಯಿತು'' ಎಂದಿದ್ದಾರೆ.
ಜೊತೆಗೆ ವಿಡಿಯೋ ಮಾಡಿರುವ ಜಗ್ಗೇಶ್ ಅವರು ಕಳೆದ ರಾತ್ರಿ ನಡೆದ ಘಟನೆಯ ಬಗ್ಗೆ ಪೂರ್ತಿ ವಿವರ ನೀಡಿದ್ದಾರೆ. ''ಒಂದೂವರೆ ತಿಂಗಳಿನಿಂದ ವ್ಯಕ್ತಿಯೊಬ್ಬ ಕಾರ್ಪೊರೇಟರ್ ಮಂಜುನಾಥ್ ಅವರ ಹೆಸರು ಹೇಳಿಕೊಂಡು ನನ್ನ ಸಂಬಂಧಿಕನ ಬಳಿ ರೋಲ್ ಕಾಲ್ ಮಾಡಲು ಪ್ರಯತ್ನ ಮಾಡುತ್ತಿದ್ದ. ಇದರ ಬಗ್ಗೆ ಎರಡ್ಮೂರು ಸರಿ ನನ್ನ ಗಮನಕ್ಕೆ ತಂದರು. ಈ ಬಗ್ಗೆ ನಾನು ಕಾರ್ಪೊರೇಟರ್ ಗೂ ತಿಳಿಸಿದ್ದೆ. ನಿನ್ನೆ ರಾತ್ರಿ ಕೆಲವರು ನನ್ನ ಸಂಬಂಧಿಕನ ಬಳಿ ಬಂದು ದೌರ್ಜನ್ಯ ಮಾಡಿದ್ದಾರೆ. ನನಗೆ ಫೋನ್ ಮಾಡಿ ಹೇಳಿದರು. ತದನಂತರ ನಾನು ಮತ್ತು ಕಾರ್ಪೊರೇಟರ್ ಸ್ಥಳಕ್ಕೆ ಹೋದ್ವಿ. ಆಗ ಅಲ್ಲಿ ಇದ್ದ ವ್ಯಕ್ತಿ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟ. ಆಗ ಅವನ್ನನ ಹಿಡಿಯುವ ವೇಳೆ ಸ್ವಲ್ಪ ತಳ್ಳಾಟ ಆಯಿತು''

''ನಂತರ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಹೋಗಿ, ಪೊಲೀಸರ ಸಮ್ಮುಖದಲ್ಲಿ ಮಾತುಕತೆ ಆಯಿತು. ಅವರು ಹೋದರು. ನಾವು ಬಂದ್ವಿ. ಇದನ್ನ ಯಾರೋ ದಾರಿಹೋಕ ವಿಡಿಯೋ ಮಾಡಿ ಈಗ ತಿರುವು ನೀಡಿದ್ದಾನೆ. ಇದು ಉದ್ದೇಶಪೂರ್ವಕವಾಗಿ ನನ್ನನ್ನು ತೇಜೋವಧೆ ಮಾಡುವ ಪ್ರಯತ್ನ. ಈ ಬಗ್ಗೆ ನಾನು ಸೈಬರ್ ಕ್ರಂ ಪೊಲೀಸರಿಗೆ ದೂರು ನೀಡುತ್ತೇನೆ'' ಎಂದಿದ್ದಾರೆ.
ಮತ್ತೊಂದೆಡೆ ಹಲ್ಲೆಗೊಳಗಾದ ರವಿಕುಮಾರ್ ''ಜಗ್ಗೇಶ್ ಅವರು ಪಾನಮತ್ತರಾಗಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಚೇರ್ ಗಳನ್ನ ರಸ್ತೆಯಲ್ಲಿ ಇಟ್ಟಿದ್ದರು. ಓಡಾಡಲು ಕಷ್ಟವಾಗುತ್ತಿದೆ ಎಂದು ನಾನು ವಿಚಾರಣೆ ಮಾಡಿದೆ ಅಷ್ಟೇ. ಅಷ್ಟಕ್ಕೆ ಜಗ್ಗೇಶ್ ಅವರಿಗೆ ಫೋನ್ ಮಾಡಿ ಕರೆಸಿದರು. ಅವರು ಬರುತ್ತಿದ್ದಂತೆ ನನ್ನ ಮೇಲೆ ಹಲ್ಲೆ ಮಾಡಿದರು. ನಂತರ ಪೊಲೀಸ್ ಠಾಣೆಗೆ ಹೋದಾಗಲು ಅವರು ಮಾತನಾಡದೆ ಹೋದರು'' ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.


Click it and Unblock the Notifications











