ಸಿನಿಮಾ ಸೇರಲು ಮದ್ರಾಸಿಗೆ ಹೋಗಿ ಭಿಕ್ಷುಕನಂತೆ ಅಲೆಡಾಡಿದ್ದ ಜಗ್ಗೇಶ್ ಕಥೆ ಇಲ್ಲಿದೆ.!
ವರನಟ ಡಾ.ರಾಜ್ ಕುಮಾರ್ ರಿಂದ ಸ್ಫೂರ್ತಿ ಪಡೆದು ನಟನಾಗಬೇಕು ಎಂಬ ಆಸೆ ಹೊತ್ತು ಬಣ್ಣದ ಲೋಕವನ್ನ ಅರಸಿ ಬಂದವರು ನವರಸ ನಾಯಕ ಜಗ್ಗೇಶ್. ಹೀರೋ ಆಗಬೇಕು ಎಂಬ ಕನಸು ಹೊತ್ತಿದ್ದ ಜಗ್ಗೇಶ್ ಗೆ ಮೊದ ಮೊದಲು ಸಿಕ್ಕಿದ್ದು ಸಣ್ಣ-ಪುಟ್ಟ ಪಾತ್ರಗಳು. 'ಇಬ್ಬನಿ ಕರಗಿತು', 'ರಣಧೀರ', 'ಸಾಂಗ್ಲಿಯಾನಾ', 'ರಣರಂಗ' ಮುಂತಾದ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದ್ದ ಜಗ್ಗೇಶ್ ಗೆ ದೊಡ್ಡ ಬ್ರೇಕ್ ಸಿಕ್ಕಿದ್ದು 'ಭಂಡ ನನ್ನ ಗಂಡ' ಚಿತ್ರದ ಮೂಲಕ.
1992 ರಲ್ಲಿ ತೆರೆಕಂಡ 'ಭಂಡ ನನ್ನ ಗಂಡ' ಸಿನಿಮಾ ಸೂಪರ್ ಹಿಟ್ ಆಯ್ತು. ಅಲ್ಲಿಂದ ಗಾಂಧಿನಗರದಲ್ಲಿ ಜಗ್ಗೇಶ್ ಹವಾ ಜೋರಾಯಿತು. 38 ವರ್ಷಗಳ ತಮ್ಮ ಸಿನಿ ಜರ್ನಿಯಲ್ಲಿ 'ತರ್ಲೆ ನನ್ಮಗ', 'ಸರ್ವರ್ ಸೋಮಣ್ಣ' ಸೇರಿದಂತೆ ಕನ್ನಡ ಚಿತ್ರರಂಗಕ್ಕೆ ಜಗ್ಗೇಶ್ ನೀಡಿದ ಹಿಟ್ ಸಿನಿಮಾಗಳು ಒಂದೆರಡಲ್ಲ.
ಇಂದು ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ರಾಜಕಾರಣಿಯಾಗಿ ಜಗ್ಗೇಶ್ ಜನಪ್ರಿಯತೆ ಪಡೆದಿದ್ದಾರೆ. ಆದರೆ ಇದೇ ಜಗ್ಗೇಶ್ 38 ವರ್ಷಗಳ ಹಿಂದೆ ಅನುಭವಿಸಿದ ಯಾತನೆ, ಕಷ್ಟ ಅಷ್ಟಿಷ್ಟಲ್ಲ. ಚಿತ್ರ ಪ್ರಪಂಚಕ್ಕೆ ಕಾಲಿಟ್ಟು 38 ವರ್ಷಗಳು ತುಂಬಿದ ಈ ಸುಸಂದರ್ಭದಲ್ಲಿ ತಮ್ಮ ಹಳೆಯ ನೆನಪುಗಳನ್ನು ಜಗ್ಗೇಶ್ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿರಿ...

38 ವರ್ಷಗಳು ತುಂಬಿತು.!
ನವೆಂಬರ್ 17 ಕ್ಕೆ ಸರಿಯಾಗಿ ಕನ್ನಡ ಚಿತ್ರರಂಗಕ್ಕೆ ನಟ ಜಗ್ಗೇಶ್ ಕಾಲಿಟ್ಟು 38 ವರ್ಷಗಳು ತುಂಬಿತು. ಈ ಸಂದರ್ಭದಲ್ಲಿ ನಟ ಜಗ್ಗೇಶ್ ಫ್ಲ್ಯಾಶ್ ಬ್ಯಾಕ್ ಗೆ ಜಾರಿದ್ದಾರೆ. ನವೆಂಬರ್ 17, 1980 ರಲ್ಲಿ ಮಾಯಸಂದ್ರದ ಪುಟ್ಟ ಹಳ್ಳಿ ಆನಡಗು ಗ್ರಾಮದ ನಂಜೇಗೌಡರ ಮೊಮ್ಮಗ ಶಿವಲಿಂಗೇಗೌಡ.. ತಮ್ಮ ಮಗ ಈಶ್ವರ್ ಗೌಡ ಓರ್ವ ಬಿ.ಇ ಪದವಿಧರರಾಗಬೇಕು ಅಂತ ಬಯಸಿದ್ದರು. ಆದರೆ ವಿಧಿಲಿಖಿತವೇ ಬೇರೆ ಆಗಿತ್ತು.

ಭಿಕ್ಷುಕನಂತೆ ಓಡಾಡಿದ್ದ ಜಗ್ಗೇಶ್
ಡಾ.ರಾಜ್ ಕುಮಾರ್ ರಂತೆ ಸಿನಿಮಾ ನಟನಾಗಬೇಕು ಎಂದು ಆಸೆ ಹುಟ್ಟಿಸಿದ ತಾತನ ಮಾತು ನಂಬಿ ಬಿ.ಎಸ್.ಸಿ ಬಿಟ್ಟು ಅಂದು ಮದ್ರಾಸಿಗೆ ಓಡಿ ಹೋಗಿದ್ದರಂತೆ ಜಗ್ಗೇಶ್. ಮದ್ರಾಸಿನಲ್ಲಿ ಅವಕಾಶಗಳು ಸಿಗದೆ 1988 ರವರೆಗೂ ಜಗ್ಗೇಶ್ ಭಿಕ್ಷುಕನಂತೆ ಓಡಾಡಿದ್ದಾರೆ. ''ಮರಿ.. ನಿಂಗೆ ಮೇಕಪ್ ಹಾಕಿದ್ರೂ ಕಣ್ಣಿಗೆ ಕಾಣಿಸೋಲ್ಲ.. ಹೋಗಿ ಬಾ ಕಂದ'' ಅಂತ ಅಲ್ಲಿ ಎಷ್ಟೋ ಜನ ಹಂಗಿಸಿದ್ದರಂತೆ.

ಹರಸಿದ ತಾಯಿ
ಎಲ್ಲರೂ ಹಂಗಿಸುತ್ತಿದ್ದಾರೆ ಅಂತ ತಾಯಿ ಬಳಿ ಜಗ್ಗೇಶ್ ಕಣ್ಣೀರಿಟ್ಟಾಗ, ''ಮಂತ್ರಾಲಯಕ್ಕೆ ಹೋಗಿ ಬಾ. ಅಲ್ಲಿ ಗುರು ಇದ್ದಾರೆ. ಇಡೀ ಪ್ರಪಂಚ ತಿರುಗಿ ನೋಡಬೇಕು. ಹಾಗೆ ಬೆಳೆಸ್ತಾನೆ'' ಎಂದು ಕೈಗೆ 500 ರೂಪಾಯಿಯನ್ನಿಟ್ಟು ತಾಯಿ ಕಳುಹಿಸಿಕೊಟ್ಟರಂತೆ. ಇಂದು ಅದೇ ಹಳ್ಳಿ ಹುಡುಗ ಜಗ್ಗೇಶ್ ಆಗಿ ಬೆಳೆದು ನಿಂತಿದ್ದಾನೆ. ''ಮಾಯಾಪ್ರಪಂಚಕ್ಕೆ ಕಾಲಿಟ್ಟು 38 ವರ್ಷವಾಯಿತು. ನಟ, ನಿರ್ಮಾಪಕ, ನಿರ್ದೇಶಕ, ವಿತರಕ, ಶಾಸಕ, ತಂದೆ, ಗಂಡ, ತಾತನಾಗಿ 60 ಭಾಗ ಆಯುಷ್ಯ ಸವೆಸಿರುವೆ'' ಎಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಜಗ್ಗೇಶ್ ಖುಷಿಯಿಂದ ಬರೆದುಕೊಂಡಿದ್ದಾರೆ.

ಇನ್ನೇನು ಬೇಕು ಈ ಬಡವ ರಾಸ್ಕಲ್ ಗೆ.?
''ಜನ್ಮ ಕೊಟ್ಟ ತಂದೆ-ತಾಯಿ ಗೌರವಿಸಿದ ಮನುಷ್ಯರಿಗೆ ಸೋಲಿಲ್ಲಾ ಬದುಕಲ್ಲಿ. ಕೋಟಿ ಶತ್ರು ಅಡ್ಡ ಬಂದರೂ, ಅವರ ಹಿಮ್ಮೆಟ್ಟಿಸಿ ಹಿಮಾಲಯ ಏರಬಲ್ಲರು ನಿರಾಯಾಸವಾಗಿ. 38 ವರ್ಷವಾದರು ಇನ್ನು ಪ್ರೀತಿಸಿ ಹರಸುತ್ತಿದೆ ಕಲಾರಂಗ ಹಾಗೂ ಕಲಾಭಿಮಾನಿಗಳು. ಇನ್ನೇನು ಬೇಕು ಈ ಬಡವ ರಾಸ್ಕಲ್ ಗೆ. ಜಗ ಗೆದ್ದ ಮೇಲೆ ಜಗದೊಡೆಯನಿಗೆ ಧನ್ಯವಾದ ಅರ್ಪಿಸಿ ಬದುಕುತ್ತಿದ್ದಾನೆ. ನಡೆಯುವವರೆಗು ನಡೆಯಲಿ ನಾಣ್ಯ ನಾರಾಯಣ ಕೃಪೆಯಿಂದ. ಎನ್ನುತ್ತ ನಿಮ್ಮ ಪ್ರೀತಿ ಬಯಸಿ ಕಾಯಕಕ್ಕೆ ಮರಳುವೆ'' ಎಂದು ಸಾಮಾಜಿಕ ಜಾಲತಾಣದಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ.
{ಚಿತ್ರಕೃಪೆ: ಜಗ್ಗೇಶ್ ಇನ್ಸ್ಟಾಗ್ರಾಮ್}


Click it and Unblock the Notifications











