ತುಮಕೂರು ಲೋಕಸಭೆ ಕ್ಷೇತ್ರದಿಂದ ಜಗ್ಗೇಶ್ ಸ್ಪರ್ಧೆ
ಹದಿನಾರನೇ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಭರದ ಸಿದ್ಧತೆಗಳು ನಡೆಯುತ್ತಿವೆ. 2014ರಲ್ಲಿ ನಡೆಯಲಿರುವ ಈ ಮಹಾ ಮತ ಸಮರಕ್ಕೆ ಭಾರತ ಸಜ್ಜಾಗುತ್ತಿದೆ. ಹಲವಾರು ಬಣ್ಣದ ತಾರೆಗಳು ಚುನಾವಣೆಗೆ ಬಣ್ಣಬಣ್ಣದ ಕನಸುಗಳನ್ನು ಕಾಣುತ್ತಿದ್ದಾರೆ.
ನವರಸ ನಾಯಕ ಜಗ್ಗೇಶ್ ಅವರು ಬರಲಿರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಈಗಾಗಲೆ ಹೇಳಿಕೊಂಡಿದ್ದಾರೆ. ಅಷ್ಟರೊಳಗೆ ತಮ್ಮ ಕೈಯಲ್ಲಿರುವ ಪ್ರಾಜೆಕ್ಟ್ ಗಳನ್ನು ಮುಗಿಸಿಕೊಳ್ಳುವ ತರಾತುರಿಯಲ್ಲೂ ಅವರಿದ್ದಾರೆ.

ತುರುವೆಕೆರೆ ಕ್ಷೇತ್ರದಲ್ಲಿ ಜಗ್ಗೇಶ್ ಅವರಿಗೆ ಭಾರಿ ಬೆಂಬಲವಿದೆ. ಅದೇ ರೀತಿ ತುಮಕೂರು ಲೋಕಸಭೆ ಕ್ಷೇತ್ರದ ಗುಬ್ಬಿ, ಕೊರಟಗೆರೆ ಹಾಗೂ ಮಧುಗಿರಿಯಲ್ಲೂ ಜಗ್ಗೇಶ್ ರ ಬೆಂಬಲಕ್ಕೆ ಜನ ಇದ್ದೇ ಇದ್ದಾರೆ. ಈ ಲೆಕ್ಕಾಚಾರದಲ್ಲೇ ಜಗ್ಗೇಶ್ ಮುಂದಿನ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವುದು. [ಕಗ್ಗಂಟಾಗಿರುವ ರಮ್ಯಾ 'ನೀರ್ ದೋಸೆ']
ಈಗಾಗಲೆ ಕಾಂಗ್ರೆಸ್ ಸಂಸದೆ ರಮ್ಯಾ ಜೊತೆಗಿನ ಜಗ್ಗೇಶ್ ಮುಸುಕಿನ ಗುದ್ದಾಟ 'ನೀರ್ ದೋಸೆ' ಸಮಯದಲ್ಲಿ ಹೊರಬಿದ್ದಿದೆ. ಈಗ ರಮ್ಯಾ ಚಿತ್ರದಲ್ಲಿ ಅಭಿನಯಿಸುವುದಾಗಿ ಹೇಳುವ ಮೂಲಕ ಇಬ್ಬರ ನಡುವಿನ ವಾಗ್ವಾದಕ್ಕೆ ತಾತ್ಕಾಲಿಕವಾಗಿ ತೆರೆಬಿದ್ದಿದೆ. ಬೂದಿಮುಚ್ಚಿದ ಕೆಂಡದಂತಿರುವ ಇಬ್ಬರ ನಡುವಿನ ವಾದವಿವಾದಗಳು ಚುನಾವಣೆ ಸಮಯಕ್ಕೆ ಮತ್ತೆ ಇನ್ನೊಂದು ರೂಪದಲ್ಲಿ ಸ್ಫೋಟವಾಗುತ್ತದೋ ಏನೋ. (ಏಜೆನ್ಸೀಸ್)


Click it and Unblock the Notifications











