ನಾನು, ನನ್ನದು, ನನ್ನ ಹಣ, ನನ್ನ ಮನೆ, ನನ್ನ ಹೆಂಡತಿ, ಎಂಬ ಕಥೆ ಏನಾಗಿರುತ್ತದೆಯೋ ದೇವರೆ ಬಲ್ಲ-ಜಗ್ಗೇಶ್..!
ವಿಶ್ವದ ಅತೀ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿದೆ. ಸನಾತನ ಧರ್ಮದ ಪ್ರಕಾರ ಈ ಕುಂಭ ಸ್ನಾನ ಬಹಳ ಪವಿತ್ರವಾದದ್ದು. ಗಂಗಾ, ಯಮುನಾ, ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದರೆ ಪಾಪನಾಶವಾಗುತ್ತೆ, ಮೋಕ್ಷ ಸಿಗುತ್ತೆ ಎನ್ನುವ ನಂಬಿಕೆ ಅನೇಕರದ್ದು.
ಇದಕ್ಕೆ ಪೂರಕವಾಗಿ ಇಲ್ಲಿಯವರೆಗೆ ಕೋಟ್ಯಂತರ ಜನ ಮಹಾಕುಂಭ ಮೇಳಕ್ಕೆ ತೆರಳಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಕೇವಲ ಜನ ಸಾಮಾನ್ಯರು ಮಾತ್ರವಲ್ಲ ಬಾಲಿವುಡ್ದಿಂದ ಹಿಡಿದು ಸ್ಯಾಂಡಲ್ವುಡ್ವರೆಗೆ ಅನೇಕರು ಮಹಾಕುಂಭ ಮೇಳಕ್ಕೆ ತೆರಳಿ ಈ ಅಧ್ಯಾತ್ಮ ವಿಸ್ಮಯವನ್ನು ಕಣ್ತುಂಬಿಕೊಂಡಿದ್ದಾರೆ. ಸಂಗಮದಲ್ಲಿ ಮಿಂದೆದ್ದಿದ್ದಾರೆ. ಇದಕ್ಕೆ ನವರಸನಾಯಕ ಜಗ್ಗೇಶ್ ಸದ್ಯದ ಉದಾಹರಣೆ. ಹೌದು, ನವರಸನಾಯಕ ಜಗ್ಗೇಶ್ ಪ್ರಯಾಗ್ ರಾಜ್ಗೆ ತೆರಳಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ತಮ್ಮ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ಧಾರೆ. ದೇವರ ಕೃಪೆಯಿಲ್ಲದೇ ನಮ್ಮ ಬದುಕಿನ ಆಟ ಯಾವುದು ನಡೆಯಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ ನವರಸನಾಯಕ ಜಗ್ಗೇಶ್ ಕುಂಭ ಮೇಳದ ಕುರಿತು ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.

ಮುಂದಿನ ಮಹಾಕುಂಭ 2170 ಇಸವಿಯಲ್ಲಿ..!
ಕಳೆದ ಬಾರಿ 1880 ರಲ್ಲಿ ನಡೆದದ್ದು ಈ ಮಹಾಕುಂಭಮೇಳ. ನನ್ನ ತಾತನ ಜನನ ಆದದ್ದು 1896 ಅಂದರೆ ನಮ್ಮ ತಾತ ಹುಟ್ಟುವ 16ವರ್ಷದ ಹಿಂದೆ..! ನಮ್ಮ ತಾತನಿಂದ ನನ್ನ ಮೊಮ್ಮಗ ಅರ್ಜುನ 5ನೆ ತಲೆಮಾರಿಗೆ ಬಂದಿದೆ..!ಮುಂದಿನ ಬಾರಿ ಈ ಮಹಾಕುಂಭ ಬರೋದು 2170 ಇಸವಿಯಲ್ಲಿ! ಅಂದರೆ ನಮ್ಮ ಮುಂದಿನ 5ತಲೆಮಾರಿನ ಬದುಕು ಇಲ್ಲವಾಗಿರುತ್ತದೆ!
ನಾನು, ನನ್ನದು, ನನ್ನಹಣ, ನನ್ನಮನೆ, ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ ಪರಿವಾರ, ಎನ್ನುವ ಕಥೆ ಏನಾಗಿರುತ್ತದೆಯೋ ದೇವರೆ ಬಲ್ಲ! ಕಡೆಯ ಪಕ್ಷ ನಮ್ಮ ಚಿತ್ರಪಟವು ಗೋಡೆಯಿಂದ ಮರೆಯಾಗಿ ಅಟ್ಟಸೇರುತ್ತೆ ಇಲ್ಲ ಕಸದ ಜೊತೆ ಲೀನ!
ನಾವು ದುಡಿದದ್ದು ಮುಂದಿನವರು ಉಳಿಸಿಕೊಂಡಿದ್ದರೆ ಅಲ್ಪಸ್ವಲ್ಪ ಹರಟೆಯಲ್ಲಿ ನಮ್ಮ ಹೆಸರು ಬಂದುಹೋಗಬಹುದು! ಆದರೆ ಯಾರು ಹೋದರು ಒಬ್ಬರು ನೆನಪಲ್ಲಿ ಉಳಿದೆ ಇರುತ್ತಾರೆ ಅವರೆ ಶಾರದಾಸುತರು ಅಂದರೆ ಗಾಯಕರು ನಟರು ನಟಿಯರು ಸಂಗೀತ ವಿದ್ವಾಂಸರು ಹಾಗು ಲೇಖಕರು.
ಅಲ್ಲಿಗೆ ಯಾವ ಪುರುಷಾರ್ಥಕ್ಕೆ ಮನುಷ್ಯರು ನಾವು ನಾವೇ, ನಮ್ಮದೆ, ನಂದೆ, ನಾನಿಲ್ಲದೆ, ಎಂಬ ಅಜ್ಞಾನ ಬೇರೂರಿದೆ ಒಳಗೆ! ಈ ಮಹಾಕುಂಭಕ್ಕೆ ಆಧ್ಯಾತ್ಮಿಕ ಸಾಧನೆಗೆ ಹೋದವರಿಗೆ ನಾನು ಮೇಲೆ ಹೇಳಿದ್ದ ಎಲ್ಲಾ ಮಾತುಗಳು ಮಾನಸದಲ್ಲಿ ಮಜ್ಜನವಾಗಿ ನಾನು ದೇಹವಲ್ಲಾ ಮುಂದೆ ಮಣ್ಣು ಎಂಬ ಅರಿವು ಮನದ ಆಳಕ್ಕೆ ಹೋಗಿ ಮನನವಾಗಿ ಮೌನವಾಗಿ ಅಹಂಕಾರ ಅಡಗಿ ಶಾಂತವಾಗುತ್ತದೆ ಮನಸ್ಸು!
ನಾನು ಹೋದೆ ನೋಡಿದೆ ಬಂದೆ ಎನ್ನುವವರಿಗೆ ಅವರ ಬದುಕಿನ ಮತ್ತೊಂದು ಪ್ರವಾಸ ಅನ್ನಿಸುತ್ತದೆ..! ನಾನು ಭಾವುಕನಾದೆ ನನ್ನ ವಂಶದ ಎಲ್ಲಾ ಹಿರಿಯರ ನೆನೆದೆ ಮುಂದಿನ ಪೀಳಿಗೆಯ ಮಕ್ಕಳಿಗೆ ಶುಭಕೋರಿದೆ! ನನಗನ್ನಿಸಿದ್ದು ದೇವರ ಕೃಪೆಯಿಲ್ಲದೆ ನಮ್ಮ ಬದುಕಿನ ಆಟ ಯಾವುದು ನಡೆಯದು! ಇನ್ನು ಸಮಯವಿದೆ ಹೋಗುವವರು ಹೋಗಿಬನ್ನಿ ಮತ್ತೆ ನೋಡಲಾಗದು ಈ ಮಹಾಕುಂಭ. ಸರ್ವೇಜನಾಃಸುಖಿನೋಭವಂತು.
ಹೀಗೆ ಜಗ್ಗೇಶ್ ಮಹಾಕುಂಭ ಮೇಳದ ಬಗ್ಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಈ ಮಹಾಕುಂಭ ಮೇಳದ ಪ್ರವಾಸದ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.


Click it and Unblock the Notifications











