ಶೇಷಾದ್ರಿ ವಿರುದ್ಧ 'ನವರಸ ನಾಯಕ'ನ ಟ್ವಿಟ್ಟರ್ ಪ್ರಹಾರ
'ಖಳ ನಟ'ರಿಗೆ ಪ್ರತ್ಯೇಕ ಪ್ರಶಸ್ತಿ ನೀಡಬಾರದು ಅಂತ 'ರಾಜ್ಯ' ಮತ್ತು 'ರಾಷ್ಟ್ರ ಪ್ರಶಸ್ತಿ' ಪುರಸ್ಕೃತ ನಿರ್ದೇಶಕ ಪಿ.ಶೇಷಾದ್ರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಇತ್ತೀಚೆಗೆಷ್ಟೇ ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದ ಅವ್ಯವಸ್ಥೆ ಬಗ್ಗೆ ಕಿಡಿಕಾರಿರುವ ಶೇಷಾದ್ರಿ, ಇದೇ ಸಮಾರಂಭದಲ್ಲಿ ಸರ್ಕಾರದ ಮುಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಲ್ಲಿಸಿದ 'ಉತ್ತಮ ವಿಲನ್' ಪ್ರಶಸ್ತಿ ಪ್ರಸ್ತಾವನೆಗೆ ಅಡ್ಡಗಾಲು ಹಾಕಿದ್ದಾರೆ. [ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಹಾಕಿದ ಪಿ.ಶೇಷಾದ್ರಿ]

ಆ ಮಾಹಿತಿ ಜಗಜ್ಜಾಹೀರಾದಾಗಿನಿಂದಲೂ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ವಾದ ವಾಗ್ವಾದ ಜೋರಾಗಿ ನಡೆಯುತ್ತಿದೆ. ಅದಕ್ಕೀಗ ದನಿ ಸೇರಿಸಿರುವ ನವರಸ ನಾಯಕ ಜಗ್ಗೇಶ್ ಕೊಂಚ ಏರುದನಿಯಲ್ಲೇ ನಿರ್ದೇಶಕ ಪಿ.ಶೇಷಾದ್ರಿ ಅವರಿಗೆ ಟಾಂಗ್ ನೀಡಿದ್ದಾರೆ.
''ನಿರ್ದೇಶಕ ಪಿ.ಶೇಷಾದ್ರಿ ಖಳನಟರಿಗೆ ಪ್ರಶಸ್ತಿ ಬೇಡ ಅಂತ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇವರಿಗೆ ಮಾತ್ರ ಪ್ರಶಸ್ತಿ ಬೇಕು, ಬೇರೆಯವರಿಗೆ ಬೇಡ್ವಾ..?'' ಅಂತ ಜಗ್ಗೇಶ್ ಟ್ವಿಟ್ಟರ್ ನಲ್ಲಿ ತಮ್ಮ ಅಭಿಮಾನಿಗಳ ಮುಂದೆ ಪ್ರಶ್ನೆ ಇಟ್ಟಿದ್ದಾರೆ.
''ನಿಮಗೆ ಮಾತ್ರ ರೆಡ್ ಕಾರ್ಪೆಟ್. ಬೇರೆಯವರಿಗೆ ಬೇಡ್ವಾ? ದರ್ಶನ್ ಮಾಡಿಸಿದ್ದು ಅಂತ ಅವರ ಹೆಸರಿಟ್ಟುಕೊಂಡು ಮತ್ತೊಂದು ಬಿಟ್ಟಿ ಪ್ರಚಾರ ಬೇಕಾ ನಿಮ್ಮಂಥವರಿಗೆ. ಈ ನ್ಯೂ ಸೆನ್ಸ್ ನಿಲ್ಲಿಸಿ'' ಅಂತ ಜಗ್ಗೇಶ್ ಕಿಡಿಕಾರಿದ್ದಾರೆ.
ಆ ಮೂಲಕ ಖಳನಟರ ಪರ ನಿಂತಿರುವ ಜಗ್ಗೇಶ್, ದರ್ಶನ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಶೇಷಾದ್ರಿ ಮುನ್ನುಡಿ ಬರೆದಿರುವ ಈ ವಿವಾದಕ್ಕೆ ಕನ್ನಡ ಚಿತ್ರರಂಗದ ಕಡೆಯಿಂದ ಮೊದಲಿಗೆ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಇನ್ನೆಷ್ಟು ಜನ ಜೈಕಾರ ಹಾಕುತ್ತಾರೋ ನೋಡಬೇಕು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











