ಅಂಕಲ್ ಲೋಕನಾಥ್ ನಿಧನಕ್ಕೆ ಕಂಬನಿ ಮಿಡಿದ ಕನ್ನಡ ತಾರೆಯರು
ರೆಬೆಲ್ ಸ್ಟಾರ್ ಅಂಬರೀಶ್ ಮರೆಯಾದ ಕಹಿ ನೆನಪು ಮಾಸುವ ಮುನ್ನವೇ ಹಿರಿಯ ನಟ, ಅಂಕಲ್ ಲೋಕನಾಥ್ ಸಾವಿನ ಸುದ್ದಿ ಕನ್ನಡ ಚಿತ್ರರಂಗಕ್ಕೆ ಬರಸಿಡಿಲಿನಂತೆ ಬಡಿದಿದೆ.
89 ವರ್ಷ ವಯಸ್ಸಿನ ಲೋಕನಾಥ್ ಇಂದು ಬೆಳಗ್ಗೆ ಕೊನೆಯುಸಿರೆಳೆದರು. ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ವೇಳೆಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
1000ಕ್ಕೂ ಹೆಚ್ಚು ನಾಟಕಗಳು 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಲೋಕನಾಥ್ ಇಂದು ಕೇವಲ ನೆನಪು ಮಾತ್ರ. 'ಗೆಜ್ಜೆಪೂಜೆ', 'ನಾಗರಹಾವು', 'ಭೂತಯ್ಯನ ಮಗ ಅಯ್ಯು', 'ಬಂಗಾರದ ಪಂಜರ', 'ಮಿಂಚಿನ ಓಟ' ಸೇರಿದಂತೆ ಹಲವು ಚಿತ್ರಗಳಲ್ಲಿ ಹಲವು ಪಾತ್ರಗಳಿಗೆ ಲೋಕನಾಥ್ ಜೀವ ತುಂಬಿದ್ದರು. ಲೋಕನಾಥ್ ನಿಧನಕ್ಕೆ ಸ್ಯಾಂಡಲ್ ವುಡ್ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ. ಮುಂದೆ ಓದಿರಿ...
ಮರೆಯಲು ಸಾಧ್ಯವಿಲ್ಲ
''ಹಿರಿಯ ನಟ ಲೋಕನಾಥ್ ಅಭಿನಯಿಸಿದ ಬಂಗಾರದ ಮನುಷ್ಯ, ಬಂಗಾರದ ಪಂಜರ ಚಿತ್ರಗಳನ್ನು ಮರೆಯಲು ಸಾಧ್ಯವಿಲ್ಲ. ಅವರ ಉತ್ತಮ ಚಿತ್ರಗಳು ಸದಾ ನೆನಪಿನಲ್ಲಿ ಇರುತ್ತವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಕಂಬನಿ ಮಿಡಿದ ದರ್ಶನ್
''ಕನ್ನಡ ಚಿತ್ರರಂಗಕ್ಕಾಗಿ 5 ದಶಕಗಳಿಂದ ದುಡಿದ ಹಿರಿಯ ನಟರಾದ ಉಪ್ಪಿನಕಾಯಿ ಲೋಕನಾಥ್ ಅಂಕಲ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತೆಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಅವರೊಡನೆ ನನಗೂ ಸಹ ಹೆಲ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೆಂದು ಭಾವಿಸುತ್ತೇನೆ'' ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮಾಡಿದ ಜಗ್ಗೇಶ್
''35 ವರ್ಷದಿಂದ ವೈಯುಕ್ತಿಕವಾಗಿ ಬಲ್ಲೆ ಈ ಶಿಸ್ತಿನ ಕಲಾಬಂಧುವನ್ನ. ಅಂಬರೀಶ್ ಅವರ ಸ್ಮರಣಾರ್ಥ ಸಂದರ್ಭದಲ್ಲಿ ನನ್ನ ಪಕ್ಕ ಕೂತು ಆತ್ಮೀಯವಾಗಿ ಮಾತಾಡಿಸಿದ್ದರು. ಪೂರ್ಣ ಆಯುಷ್ಯ ಶ್ರೇಷ್ಠವಾಗಿ ಬದುಕಿ ನಿರ್ಗಮಿಸಿದ ಶ್ರೇಷ್ಠ ಮನುಜ. ಅವರಲ್ಲಿ ತಂದೆ, ತಾತ, ಬಂಧು ಕಾಣುತ್ತಿದ್ದೆ. ಅಲ್ಲಿತ್ತು ಅವರ ಮನೆ. ಬಂದಿದ್ದರು ಸುಮ್ಮನೆ. ಹೋದರು ಮತ್ತೆ ಅವರ ಮನೆಗೆ. ಓಂ ಶಾಂತಿ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮಾಡಿದ ಸುದೀಪ್
ಅಂಕಲ್ ಲೋಕನಾಥ್ ರವರ ಸಾವಿನ ಸುದ್ದಿ ಕೇಳಿ ಕಿಚ್ಚ ಸುದೀಪ್ ಕೂಡ ಟ್ವಿಟ್ಟರ್ ಮೂಲಕ ಕಂಬನಿ ಮಿಡಿದಿದ್ದಾರೆ. ಲೋಕನಾಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ ಸುದೀಪ್.


Click it and Unblock the Notifications











