ಅಪ್ಪು ಅಭಿನಯದ 'ಯುವರತ್ನ' ಚಿತ್ರದ ಕಥೆ ಬಹಿರಂಗ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಯುವರತ್ನ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೆ 60 ರಿಂದ 65 ರಷ್ಟು ಚಿತ್ರೀಕರಣ ಮಾಡಿ ಮುಗಿಸಿದೆ ಚಿತ್ರತಂಡ. ಬೆಂಗಳೂರು, ಮೈಸೂರು ಮತ್ತು ಧಾರವಾಡ ಸೇರಿದಂತೆ ಅನೇಕ ಕಡೆ ಚಿತ್ರದ ಚಿತ್ರೀಕರಣ ಮಾಡುತ್ತಿದೆ ಚಿತ್ರತಂಡ.
ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಕಾಲೇಜು ವಿದ್ಯಾರ್ಥಿಯಾಗಿ ಮಿಂಚಿದ್ದಾರೆ. ಅನೇಕ ವರ್ಷಗಳ ಬಳಿಕ ಅಪ್ಪು ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಚಿತ್ರದಲ್ಲಿ ದೊಡ್ಡ ದೊಡ್ಡ ಕಲಾವಿದರು ಬಣ್ಣ ಹಚ್ಚಿದ್ದಾರೆ. ಯುವರತ್ನನನ್ನು ನೋಡಲು ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಇದರ ನಡುವೆ ಈಗ ಚಿತ್ರದ ಕತೆ ಬಹಿರಂಗವಾಗಿದೆ.

ಶಿಕ್ಷಣ ಮಾಫಿಯ ವಿರುದ್ಧ ಪುನೀತ್ ಹೋರಾಟ
ಯುವರತ್ನ ಸಿನಿಮಾದಲ್ಲಿ ಶಿಕ್ಷಣ ಮಾಫಿಯಾದ ಬಗ್ಗೆ ಹೇಳಲಾಗಿದೆಯಂತೆ. ಇಂದಿನ ಶಿಕ್ಷಣ ಪದ್ದತಿ ಹೇಗೆ ಹದಕೆಡುತ್ತಿದೆ. ಶಿಕ್ಷಣ ವ್ಯವಸ್ಥೆ ದೊಡ್ಡ ದೊಡ್ಡವರ ಬಳಿ ಸಿಲುಕಿಕೊಂಡು ಹೇಗೆ ಹಾಳಾಗುತ್ತಿದೆ, ಉನ್ನತ ಶಿಕ್ಷಣ ಸಾಮಾನ್ಯ ಜನರಿಗೆ ಕೈಗೆಟುಕದ ಸ್ಥಿತಿಯಲ್ಲಿದೆ. ಇದರ ವಿರುದ್ಧ ಚಿತ್ರದ ನಾಯಕ ಅಂದ್ರೆ ಪವರ್ ಸ್ಟಾರ್ ಹೋರಾಡುವ ಕಥೆ ಯುವರತ್ನ ಚಿತ್ರದಲ್ಲಿ ಇದೆಯಂತೆ.

ರಾಜಕುಮಾರ ಚಿತ್ರದಲ್ಲಿ ಮೆಡಿಕಲ್ ಮಾಫಿಯಾ
ಈ ಮೊದಲು ಅಂದ್ರೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಕಾಂಬಿನೇಷನ್ ನಲ್ಲಿ ಬಂದ ಸೂಪರ್ ಹಿಟ್ ರಾಜಕುಮಾರ ಚಿತ್ರದಲ್ಲಿ ಮೆಡಿಕಲ್ ಮಾಫಿಯಾದ ಬಗ್ಗೆ ಹೇಳಲಾಗಿತ್ತು. ಫ್ಯಾಮಿಲಿ ಕಥೆಯ ಜೊತೆಗೆ ರಾಜಕುಮಾರ ಚಿತ್ರದಲ್ಲಿ ಮೆಡಿಕಲ್ ಮಾಫಿಯಾ ಜಗತ್ತನ್ನು ಪ್ರೇಕ್ಷಕರ ಮುಂದೆ ಅನಾವರಣ ಮಾಡಿದ್ದರು ಸಂತೋಷ್.

ದಸರಾಗೆ ಯುವರತ್ನ ಟೀಸರ್
ಯುವರತ್ನ ಸಿನಿಮಾ ಸೆಟ್ಟೇರಿದಾಗಿನಿಂದಲು ಚಿತ್ರದಿಂದ ಯಾವುದೆ ಅಪ್ ಡೇಟ್ ಸಿಕ್ಕಿರಲಿಲ್ಲ. ಫಸ್ಟ್ ಲುಕ್ ಬಿಟ್ಟರೆ ಚಿತ್ರದಿಂದ ಟೀಸರ್ ಕೂಡ ರಿಲೀಸ್ ಆಗಿಲ್ಲ. ಹಾಗಾಗಿ ಅಭಿಮಾನಿಗಳು ಯುವರತ್ನ ಚಿತ್ರದ ಟೀಸರ್ ಯಾವಾಗ ಎಂದು ಚಿತ್ರತಂಡವನ್ನು ಪೀಡಿಸುತ್ತಿದ್ದರು. ಹಾಗಾಗಿ ಚಿತ್ರದ ಟೀಸರ್ ರಿಲೀಸ್ ಮಾಡಲು ಯುವರತ್ನ ಟೀಂ ಪ್ಲಾನ್ ಮಾಡಿದ್ದು, ಟೀಸರ್ ದಸರಾಗೆ ರಿಲೀಸ್ ಆಗುತ್ತಿದೆ.

ಡಿಸೆಂಬರ್ ಗೆ ಚಿತ್ರ ರಿಲೀಸ್?
ಯುವರತ್ನ ಸಿನಿಮಾ ದಸರಾಗೆ ತೆರೆಗೆ ಬರುತ್ತೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ರಿಲೀಸ್ ಡೇಟ್ ಅನ್ನು ಅಭಿಮಾನಿಗಳೆ ಅನೌನ್ಸ್ ಮಾಡಿದ್ದನ್ನು ನೋಡಿ ಚಿತ್ರತಂಡ ಶಾಕ್ ಆಗಿತ್ತು. ನಂತರ ಸಿನಿಮಾ ರಿಲೀಸ್ ಡೇಟ್ ಅನ್ನು ಚಿತ್ರರತಂಡವೆ ಅನೌನ್ಸ್ ಮಾಡುತ್ತೆ, ಇಂತಹ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಸ್ಪಷ್ಟನೆ ನೀಡಿದ್ರು. ಸದ್ಯ ಯುವರತ್ನ ಟೀಸರ್ ರಿಲೀಸ್ ಟ್ರೆಂಡ್ ಆಗಿದ್ದು ಅಭಿಮಾನಿಗಳು ಟೀಸರ್ ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.


Click it and Unblock the Notifications











