'ಅನ್ನ ಕಿತ್ತುತಿನ್ನೋ ರಣಹದ್ದು ಬಂದರೂ ನಗುವಿನಲ್ಲಿ ನೋಡುವ ಬಂಗಾರದ ಹೃದಯ': ರಕ್ಷಿತ್ ಬಗ್ಗೆ ಜಗ್ಗೇಶ್ ಮಾತು
ನವರಸನಾಯಕ ಜಗ್ಗೇಶ್ ಚಿತ್ರರಂಗದ ಎಲ್ಲರ ಜೊತೆಯೂ ಉತ್ತಮ ಸ್ನೇಹ, ಬಾಂಧವ್ಯದಿಂದ ಇದ್ದಾರೆ. ಯುವ ನಟರ ಬೆನ್ನುತಟ್ಟುವ ಜಗ್ಗೇಶ್ ಆಗಾಗ ಒಂದಿಷ್ಟು ಸಲಹೆಗಳನ್ನು ನೀಡುತ್ತಿರುತ್ತಾರೆ. ಇತ್ತೀಚಿಗೆ ಜಗ್ಗೇಶ್ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಭೇಟಿಯಾಗಿದ್ದಾರೆ.
ಅಂದ್ಹಾಗೆ ಇಬ್ಬರ ಭೇಟಿ ಅನಿರೀಕ್ಷಿತವೇನಲ್ಲ. ನಟ ರಕ್ಷಿತ್ ಇತ್ತೀಚಿಗೆ ಜಗ್ಗೇಶ್ ಮನೆಗೆ ಭೇಟಿ ನೀಡಿದ್ದಾರೆ. ದಿಢೀರನೆ ರಕ್ಷಿತ್ ಮನೆಗೆ ಬಂದಿರುವುದನ್ನು ನೋಡಿ ಜಗ್ಗೇಶ್ ಫುಲ್ ಖುಷ್ ಆಗಿದ್ದಾರೆ. ಜಗ್ಗೇಶ್ ರಕ್ಷಿತ್ ಶೆಟ್ಟಿಯನ್ನು ಹಿರಿಯ ಮಗನಂತೆ ಪ್ರೀತಿಸುತ್ತಾರೆ. ಬಹುದಿನಗಳ ನಂತರ ಹಿರಿಯ ಮಗ ಮನೆಗೆ ಬಂದ ಸಂತಸವನ್ನು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜೊತೆಗೆ ರಕ್ಷಿತ್ ಅನ್ನು ಹಾಡಿಹೊಗಳಿದ್ದಾರೆ ಜಗ್ಗೇಶ್. ನಟ ರಕ್ಷಿತ್, ಜಗ್ಗೇಶ್ ಪತ್ನಿ ಮತ್ತು ಮಗನ ಜೊತೆ ಇರುವ ಫೋಟೋವನ್ನು ಶೇರ್ ಮಾಡಿ ಸಿಂಪಲ್ ಸ್ಟಾರ್ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದು ಹೀಗೆ.

"ರಕ್ಷಿತ್ ಶೆಟ್ಟಿ ಹಾಗೆ ಸುಮ್ಮನೆ ಮನೆಗೆ ಬಂದಾಗ. ಯಾಕೋಗೊತ್ತಿಲ್ಲ ಇವನನ್ನು ನೋಡಿದರೆ ನನ್ನ ಹಿರಿಯ ಮಗನಂತೆ ಪ್ರೀತಿಸುತ್ತೆ ಮನ. ಬಹಳ ಮುಗ್ಧ. ತನ್ನ ಅನ್ನಕಿತ್ತುತಿನ್ನೋ ರಣಹದ್ದು ಪಕ್ಕಕ್ಕೆ ಬಂದರು ಮುಗುಳು ನಗೆಯಿಂದ ರಣಹದ್ದುವನ್ನು ಮಗುವಿನ ನಗುವಿನಲ್ಲಿ ನೋಡುವ ಅಪ್ಪಟ ಬಂಗಾರದ ಹೃದಯ. ನನ್ನ ಪ್ರಕಾರ ಇವನ ಗುಣಕ್ಕೆ ನೂರ್ಕಾಲ ಉಳಿಯುವ ಹೃದಯವಂತ" ಎಂದು ಬರೆದುಕೊಂಡಿದ್ದಾರೆ.
ರಕ್ಷಿತ್ ಮತ್ತು ಜಗ್ಗೇಶ್ ಇಬ್ಬರು ಈಗಾಗಲೆ ಒಂದು ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 2015ರಲ್ಲಿ ರಿಲೀಸ್ ಆದ ವಾಸ್ತು ಪ್ರಕಾರ ಸಿನಿಮಾದಲ್ಲಿ ಜಗ್ಗಶ್ ಜೊತೆ ರಕ್ಷಿತ್ ತೆರೆಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ. ಆ ಸಿನಿಮಾ ನಂತರವು ಇಬ್ಬರ ಸ್ನೇಹ ಸಂಬಂಧ ಹಾಗೆ ಮುಂದು ವರೆದುಕೊಂಡು ಬಂದಿದೆ.
ರಕ್ಷಿತ್ ಶೆಟ್ಟಿ ಸದ್ಯ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಸಕ್ಸಸ್ ನ ಖುಷಿಯಲ್ಲಿ ಇದ್ದಾರೆ. ಚಿತ್ರ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ನಲ್ಲೂ ರಿಲೀಸ್ ಆಗಿದೆ. ಇನ್ನು ಹಿಂದಿ ವರ್ಷನ್ ರಿಲೀಸ್ ಗೆ ಚಿತ್ರತಂಡ ಎದುರು ನೋಡುತ್ತಿದೆ. ಅಂದ್ಹಾಗೆ ರಕ್ಷಿತ್ ದಿಢೀರ್ ನವರಸನಾಯಕನ ಭೇಟಿ ಕೊಟ್ಟಿದ್ದಾರೆ ಅಂದರೆ ರಕ್ಷಿತ್ ಮುಂದಿನ ಸಿನಿಮಾದಲ್ಲಿ ಜಗ್ಗೇಶ್ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಅಭಿಮಾನಿಗಳ ಕುತೂಹಲ.


Click it and Unblock the Notifications











