ಪಂಚಭೂತಗಳಲ್ಲಿ ಲೀನರಾದ 'ಮಂಡ್ಯದ ಗಂಡು' ಅಮರ್ ನಾಥ್
Recommended Video

ಮಂಡ್ಯದ ಗಂಡು, ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯ ಸಂಸ್ಕಾರ ಇಂದು ಸಂಜೆ (5.57ಕ್ಕೆ) ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಜರುಗಿತು. ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳನ್ನ ಪೂರೈಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.
ಅಂಬರೀಶ್ ಮಗ ಅಭಿಷೇಕ್, ತಮ್ಮ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆಯನ್ನ ಪೂರ್ಣಗೊಳಿಸಿದರು. ಈ ಮೂಲಕ ಅಂಬರೀಶ್ ಪಂಚಭೂತಗಳಲ್ಲಿ ಲೀನರಾದರು.
ದರ್ಶನ್, ಯಶ್, ಶಿವರಾಜ್ ಕುಮಾರ್, ಅರ್ಜುನ್ ಸರ್ಜಾ, ದೊಡ್ಡಣ್ಣ, ಜಯಮಾಲ, ಗಾಯಕ ವಿಜಯ ಪ್ರಕಾಶ್, ಸಾಧು ಕೋಕಿಲಾ, ಜಯಪ್ರದ, ಧ್ರುವ ಸರ್ಜಾ, ಪುನೀತ್ ರಾಜ್ ಕುಮಾರ್, ಜಗ್ಗೇಶ್, ಶ್ರೀನಾಥ್, ದುನಿಯಾ ವಿಜಿ, ಜೈ ಜಗದೀಶ್, ಅಜಯ್ ರಾವ್, ಗುರುಕಿರಣ್, ರಂಗಾಯಣ ರಘು, ಆದಿತ್ಯ, ಪ್ರೇಮ್, ಜೋಗಿ ಪ್ರೇಮ್, ಅನಿರುದ್ಧ್ ಸೇರಿ ಇಡೀ ತಾರಾಬಳಗವೇ ಅಂಬಿ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್, ಸಚಿವೆ ಜಯಮಾಲ, ಕೆಜೆ ಜಾರ್ಜ್, ಶಾಸಕ ಮುನಿರತ್ನ, ಡಿ ಕೆ ಶಿವಕುಮಾರ್, ಎಚ್ ಡಿ ರೇವಣ್ಣ ಸೇರಿದಂತೆ ಹಲವು ರಾಜಕೀಯ ಗಣ್ಯರು ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಶನಿವಾರ (ನವೆಂಬರ್ 24) ರಾತ್ರಿ ಅಂಬರೀಶ್ ಅವರು ಹೃದಯಾಘಾತದಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ನಂತರ ಜೆಪಿ ನಗರದ ನಿವಾಸ ಮತ್ತು ಚಾಮರಾಜಪೇಟೆಯಲ್ಲಿರುವ ಕಲಾವಿದ ಭವನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಭಾನುವಾರ ಬೆಳಿಗ್ಗೆಯಿಂದ ಸಂಜೆಯಿಂದವರೆಗೂ ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು.

ನಂತರ ಭಾನುವಾರ ಸಂಜೆ ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂಗೆ ಸೇನಾ ಹೆಲಿಕಾಫ್ಟರ್ ಮೂಲಕ ಅಂಬಿ ಪಾರ್ಥಿವ ಶರೀರ ರವಾನಿಸಿ ಅಲ್ಲಿಯೂ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಇಂದು ಬೆಳಿಗ್ಗೆ ಮಂಡ್ಯದಿಂದ ಬೆಂಗಳೂರಿಗೆ ವಾಪಸ್ ತಂದು, ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟುಡಿಯೋವರೆಗೂ ಮೆರವಣಿಗೆ ಮೂಲಕ ಅಂತಿಮ ಯಾತ್ರೆ ಮಾಡಲಾಯಿತು.


Click it and Unblock the Notifications











