ಸಂತೋಷ್ ಥಿಯೇಟರ್ ನಲ್ಲಿ ತಲೆ ತಿರುಗಿ ಬಿದ್ದ ನಟ ಸಂಚಾರಿ ವಿಜಯ್
ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿರುವ ಸಂತೋಷ್ ಥಿಯೇಟರ್ ನಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ತಲೆ ತಿರುಗಿ ಬಿದ್ದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಆಗಿನ್ನೂ ಮಧ್ಯಾಹ್ನ 1 ಗಂಟೆ ಸಮಯ. ಇಂದು ರಿಲೀಸ್ ಆಗಿದ್ದ 'ಪಾದರಸ' ಸಿನಿಮಾವನ್ನ ಆಗಷ್ಟೇ ಕಣ್ತುಂಬಿಕೊಂಡು ನಟ ಸಂಚಾರಿ ವಿಜಯ್ ಹೊರಗೆ ಬಂದರು.
ಮೆಟ್ಟಿಲು ಇಳಿದು ಬರುತ್ತಿದ್ದಂತೆಯೇ, ಸಂಚಾರಿ ವಿಜಯ್ ಗೆ ಅದೇನಾಯ್ತೋ ಏನೋ... ಇದ್ದಕ್ಕಿದ್ದಂತೆ ಕೆಳಗೆ ಬಿದ್ದುಬಿಟ್ಟರು. ಅಕ್ಕ-ಪಕ್ಕದಲ್ಲಿದ್ದವರು ಗಾಬರಿ ಆದರು. ತಕ್ಷಣ ಅವರನ್ನ ಏಳಿಸಿ, ಸ್ವಲ್ಪ ನೀರು ಕುಡಿಸಿದ್ಮೇಲೆ ಸಂಚಾರಿ ವಿಜಯ್ ಚೇತರಿಸಿಕೊಂಡರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಚಾರಿ ವಿಜಯ್, ''ತುಂಬಾ ಪ್ರೆಶರ್ ಇತ್ತು. ನನಗೆ ಈ ಸಿನಿಮಾದ ಮೇಲೆ ಬಹಳ ನಿರೀಕ್ಷೆ ಇತ್ತು. ಒಂದು ವಾರದಿಂದ ಪ್ರೆಶರ್ ನಲ್ಲಿ ವರ್ಕ್ ಮಾಡಿದ್ವಿ. ರಾತ್ರಿ ಊಟ ಮಾಡಿರಲಿಲ್ಲ. ಸರಿಯಾಗಿ ನಿದ್ದೆ ಆಗಿರಲಿಲ್ಲ. ಇಂದು ಬೆಳಗ್ಗೆ ತಿಂಡಿ ಕೂಡ ತಿಂದಿರಲಿಲ್ಲ. ಹೀಗಾಗಿ ತಲೆ ತಿರುಗಿ ಬಂತು'' ಎಂದರು.

''ನನಗೆ ಯಾವತ್ತೂ ಈ ರೀತಿ ಆಗಿರಲಿಲ್ಲ. ಇವತ್ತು ಯಾಕೋ ಹೀಗಾಯ್ತು. ಸಿನಿಮಾ ಬಿಡುಗಡೆ ಟೈಮ್ ನಲ್ಲಿ ಪ್ರೆಶರ್ ಇದ್ದೇ ಇರುತ್ತೆ. ಆ ಟೈಮ್ ನಲ್ಲಿ ತಿಂಡಿ ಕೂಡ ಸೇರಲ್ಲ. ರೆಸ್ಪಾನ್ಸ್ ನೋಡಿ ನನಗೆ ಖುಷಿ ಆಗಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಚೆನ್ನಾಗಿ ಪ್ರತಿಕ್ರಿಯೆ ಲಭಿಸಿದೆ'' ಅಂತ ಹೇಳಿದರು ಸಂಚಾರಿ ವಿಜಯ್.
ಸಂಚಾರಿ ವಿಜಯ್ ಅಭಿನಯದ 'ಪಾದರಸ' ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. 'ಪಾದರಸ' ಚಿತ್ರಕ್ಕೆ ಉತ್ತಮ ಓಪನ್ನಿಂಗ್ ಸಿಕ್ಕಿದೆ.


Click it and Unblock the Notifications











