ಕನ್ನಡದ ಹಿರಿಯ ನಟ ಸಿದ್ದರಾಜ್ ಕಲ್ಯಾಣ್ಕರ್ ವಿಧಿವಶ
ಖ್ಯಾತ ಹಿರಿಯ ನಟ ಸಿದ್ದರಾಜ್ ಕಲ್ಯಾಣ್ಕರ್ ನಿಧನರಾಗಿದ್ದಾರೆ. 60 ವರ್ಷ ವಯಸ್ಸಿನ ಸಿದ್ದರಾಜ್ ಅವರಿಗೆ ನಿನ್ನೆ ( ಸೆಪ್ಟಂಬರ್ 7) ರಾತ್ರಿ ಹೃದಯಾಘಾತವಾಗಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆ ಹುಬ್ಬಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Recommended Video
ನಿನ್ನೆಯಷ್ಟೆ 60ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸಿದ್ದ ಸಿದ್ದರಾಜ್ ಇಂದು ನೆನಪು ಮಾತ್ರ. ಮೂಲತಹ ಹುಬ್ಬಳ್ಳಿಯವರಾದ ಸಿದ್ದರಾಜ್ ನಾಟಕಗಳಿಂದ ಪ್ರಸಿದ್ಧಿ ಪಡೆದಿದ್ದರು. ಬಳಿಕ ಕಿರುತೆರೆ ಮತ್ತು ಬೆಳ್ಳಿ ಪರದೆ ಮೇಲೆ ಮಿಂಚಿದ್ದಾರೆ. ಪೋಷಕ ಪಾತ್ರಗಳ ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಯಾರೆ ನೀ ಅಭಿಮಾನಿ, ಭೂಮಿ ಗೀತಾ, ಹೃದಯ ಹೃದಯ, ಬುದ್ಧಿವಂತ, ಸೂಪರ್ ಸಿನಿಮಾ ಸೇರಿದ್ದಂತೆ ಸುಮಾರು 75ಕ್ಕು ಹೆಚ್ಚು ಸಿನಿಮಾಗಳಲ್ಲಿ ಮತ್ತು 50ಕ್ಕು ಹೆಚ್ಚು ಧಾರಾವಾಹಿಗಳಲ್ಲಿ ಸಿದ್ದರಾಜ್ ಅಭಿನಯಿಸಿದ್ದಾರೆ.

ಸಿದ್ದರಾಜ್ ನಿಧನಕ್ಕೆ ಕಿರುತೆರೆ ಮತ್ತು ಸ್ಯಾಂಡಲ್ ವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ. ನಿನ್ನೆ ಹುಟ್ಟಿದ ಹಬ್ಬ ಆಚರಿಸಿಕೊಂಡವನು ಇಂದು ಇಲ್ಲ ಎನ್ನುವ ಸುದ್ದಿ ಕೇಳಿ ಆಘಾತವಾಗಿದೆ ಎಂದು ನಿರ್ದೇಶಕ ಬಿ.ಸುರೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
"ನಿನ್ನೆ ಹುಟ್ಟಿದ ಹಬ್ಬ ಆಚರಿಸಿಕೊಂಡವನು, ಸಿದ್ದರಾಜ್ ಕಲ್ಯಾಣ್ಕರ್ ನಿನ್ನೆ ನನ್ನ ಜೊತೆಗೆ ಕೆಲಕಾಲ ಮಾತಾಡಿ ಸಂಭ್ರಮಿಸಿದವನು. ನಿನ್ನೆಯೂ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದವನು. ನಿನ್ನೆ ರಾತ್ರಿ ನಮ್ಮೆಲ್ಲರನ್ನೂ ಅಗಲಿದ ಎಂದರೆ ನಂಬಲಾಗುತ್ತಿಲ್ಲ. ನನ್ನ ನಿರ್ದೇಶನದ ಮೊದಲ ಧಾರಾವಾಹಿ "ಹೊಸಹೆಜ್ಜೆ" (೧೯೯೩) ಮೂಲಕ ಕಿರುತೆರೆಗೆ ಬಂದವನು ಸಿದ್ದರಾಜ. ಆತನನ್ನು "ಅಥೆನ್ಸಿನ ಅರ್ಥವಂತ" ನಾಟಕದಲ್ಲಿ ನೋಡಿಯೇ ನನ್ನ ಧಾರಾವಾಹಿಗೆ ಆಹ್ವಾನಿಸಿದ್ದೆ. ಅಲ್ಲಿಂದಾಚೆಗೆ ನನ್ನ ಸಂಸ್ಥೆಯ ಎಲ್ಲಾ ಧಾರಾವಾಹಿಗಳಲ್ಲಿ ಸಿದ್ದರಾಜ್ ಅಭಿನಯಿಸಿದ್ದ. ಮೂರು ದಶಕಗಳ ಗೆಳೆತನ. ತಟ್ಟನೆ ಮುಗಿಯಿತೆಂದರೆ ಸಂಕಟವಾಗುತ್ತದೆ." ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











