ಮೊನ್ನೆ ಮಾಡಿದ್ದ ಟ್ವೀಟ್ ಬಗ್ಗೆ ಸುದೀಪ್ ಪ್ರತಿಕ್ರಿಯೆ ಹೀಗಿತ್ತು
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇತ್ತೀಚಿಗೆ ಮಾಡಿರುವ ಒಂದು ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸುದೀಪ್ ಟ್ವೀಟ್ ಮಾಡುತ್ತಿದ್ದಂತೆ ಯಾರಿಗೆ ಟಾಂಗ್ ಕೊಟ್ಟಿರ ಬಹುದು ಎನ್ನುವ ಕುತೂಹಲ ಗಾಂಧಿನಗರದಲ್ಲಿ ಶುರುವಾಗಿದೆ.
ಸಾಮಾನ್ಯವಾಗಿ ಸುದೀಪ್ ಟ್ವಿಟ್ಟರ್ ನಲ್ಲಿ ಸಿನಿಮಾ ವಿಚಾರಗಳನ್ನು ಮತ್ತು ಅಭಿಮಾನಿಗಳ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುವ ಕಿಚ್ಚ ಯಾವತ್ತು ಅಷ್ಟು ಖಾರವಾಗಿ ಟ್ವೀಟ್ ಮಾಡಿರಲ್ಲಿಲ್ಲ. ಹಾಗಾಗಿಯೆ ಕಿಚ್ಚನ ಟ್ವೀಟ್ ಎಲ್ಲರಿಗೂ ಭಾರಿ ಅಚ್ಚರಿ ಉಂಟುಮಾಡಿತ್ತು.
ಸುದೀಪ್ ಟ್ವೀಟ್ ಮಾಡುತ್ತಿದ್ದಂತೆ ಗಾಂಧಿನಗರದಲ್ಲಿ ತರಹೇವಾರಿ ರೀತಿಯಲ್ಲಿ ಚರ್ಚೆಯಾಗುತ್ತಿದೆ. ಇಂದು ಫಿಲ್ಮ್ ಚೇಂಬರ್ ನಲ್ಲಿ ಧ್ವಜಾರೋಹಣ ನೆರವೇರಿಸಿದ ಸುದೀಪ್ ನಂತರ ಟ್ವೀಟ್ ಬಗ್ಗೆ ಪ್ರಕ್ರಿಯೆ ನೀಡಿದ್ದಾರೆ.

"ಒಂದು ಟ್ವೀಟ್ ಇಷ್ಟು ಚರ್ಚೆಯಾಗುತ್ತಿದೆ ಅಂದ್ರೆ.."
"ನನ್ನದೊಂದು ಟ್ವೀಟ್ ಈ ಮಟ್ಟಕ್ಕೆ ಚರ್ಚೆಯಾಗುತ್ತಿದೆ ಅಂದ್ರೆ ನಾನು ಬೆಳೆದಿದ್ದೀನಿ ಅಂತಾ ಎನಿಸುತ್ತಿದೆ. ಹಾಗೇನೆ ನಾನು ಬೆಳೆಯೋಕೆ ಇಷ್ಟು ವರ್ಷ ಬೇಕಾಯಿತಾ ಅಂತಾ ಮತ್ತೊಂಡೆದೆ ಅನಿಸುತ್ತಿದೆ" ಎಂದು ಮತ್ತೆ ಒಗಟಾಗಿ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಏನಾದರೂ ಅರ್ಥ ಮಾಡಿಕೊಳ್ಳ ಬಹುದು
ಮತ್ತೆ ಟ್ವೀಟ್ ಬಗ್ಗೆ ಮಾತನಾಡುತ್ತ "ಹೊಸದಾಗಿ ಮದುವೆ ಆದವರಿಗೆ ಚಂದ್ರ ಒಂದೊಂದು ರೀತಿ ಕಾಣಿಸುತ್ತೆ. ಏನಾದರೂ ಅರ್ಥ ಮಾಡಿಕೊಳ್ಳ ಬಹುದು. ಅವರವರ ಭಾವಕ್ಕೆ ತಕ್ಕಂತೆ" ಎಂದು ಹೇಳಿದ್ದಾರೆ. ಆದ್ರೆ ಟ್ವೀಟ್ ಮೂಲಕ ಯಾರಿಗೆ ಟಾಂಗ್ ಕೊಟ್ಟಿದ್ದಾರೆ, ಟ್ವೀಟ್ ಹಿಂದಿನ ನಿಜವಾದ ಅರ್ಥವೇನು ಎಂದು ಸ್ಪಷ್ಟಪಡಿಸಿಲ್ಲ.

ಸುದೀಪ್ ಮಾಡಿದ ಟ್ವೀಟ್
"ಗಂಡಸು ಎನಿಸಿಕೊಳ್ಳಲು ಮದ್ಯಪಾನ ಮಾಡಬೇಕಾಗಿಲ್ಲ ಮತ್ತು ಕತ್ತಲು ಆಗಲಿ ಎಂದು ಕಾಯಬೇಕಾಗಿಲ್ಲ" ಟ್ವೀಟ್ ಮಾಡಿದ್ದರು. ಅಷ್ಟೆಯಲ್ಲ ಇದರ ಜೊತೆಗೆ ಒಂದು ಫೊಟೋವನ್ನು ಶೇರ್ ಮಾಡಿ ಮತ್ತೊಂದು ಸಂದೇಶವನ್ನು ರವಾನಿಸಿದ್ದಾರೆ. "ಕೇವಲ ಏನನ್ನೋ ಸಾಬೀತು ಪಡಿಸಲು ನಾನು ಫೈಟ್ ಮಾಡುವುದಿಲ್ಲ. ನನ್ನ ಎದುರಾಳಿ ಫೈಟ್ ಮಾಡಲು ಯೋಗ್ಯನಾಗಿದ್ದಾಗ ಮಾತ್ರ ನಾನು ಫೈಟ್ ಮಾಡುತ್ತೇನೆ" ಎಂದು ಟಾಂಗ್ ಕೊಟ್ಟಿದ್ದರು. ಆದ್ರೆ ಯಾರಿಗೆ, ಯಾಕೆ ಎನ್ನುವುದು ಭಾರಿ ಚರ್ಚೆಯಾಗುತ್ತಿದೆ.

ಧ್ವಜಾರೋಹಣ ನೆರವೇರಿಸಿದ ಸುದೀಪ್
ಇಂದು 73ನೆ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಧ್ವಜಾರೋಹಣ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸುದೀಪ್ ಭಾಗಿಯಾಗಿದ್ದರು. ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿ ಇದ್ದ ಸುದೀಪ್ ಧ್ವಜಾರೋಹಣ ಮಾಡಲು ಶೂಟಿಂಗ್ ಬದಿಗಿಟ್ಟು ಬೆಂಗಳೂರಿಗೆ ಬಂದು ಧ್ವಜಾರೋಣ ಮಾಡಿ ನಂತರ ಹೊರಡಲಿದ್ದಾರೆ.


Click it and Unblock the Notifications











