ಅಪಘಾತದಲ್ಲಿ ಮೃತಪಟ್ಟ ಅಭಿಮಾನಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸುದೀಪ್
ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿ ಮತ್ತು ಆಪ್ತರಾಗಿದ್ದ ನಂದೀಶ್ ಕಳೆದ ಎರಡು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ತೀವ್ರ ನಿಗಾಘಟಕದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಂದೀಶ್ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ(ಡಿಸೆಂಬರ್ 19)ಇಹಲೋಕ ತ್ಯಜಿಸಿದ್ದಾರೆ. ಈ ಬಗ್ಗೆ ನೋವು ಹಂಚಿಕೊಂಡಿದ್ದ ಸುದೀಪ್ ಇಂದು ಮೃತ ಅಭಿಮಾನಿಯ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ಸುದೀಪ್ ಇಂದು ನಂದೀಶ್ ಮನೆಗೆ ಹೋಗುತ್ತಿದ್ದಂತೆ ನಂದೀಶ್ ತಾಯಿ ಸುದೀಪ್ ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ. ಪಕ್ಕದಲ್ಲೆ ಇಟ್ಟಿದ್ದ ಮಗನ ಫೋಟೋ ನೋಡಿ ಬಿಕ್ಕಳಿಸಿ ಅಳುತ್ತಿದ್ದರು. ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಇಡೀ ಕುಟುಂಬ ದುಃಖದಲ್ಲಿದೆ. ಕುಟುಂಬದವರಿಗೆ ಧೈರ್ಯ ಹೇಳಿದ ಸುದೀಪ್ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಸುದೀಪ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಸಮಯದಲ್ಲಿ ಇಡೀ ನಂದೀಶ್ ಕುಟುಂಬವಿದೆ. ಅಪ್ಪಟ ಅಭಿಮಾನಿಯನ್ನು ಕಳೆದುಕೊಂಡ ದುಃಖದಲ್ಲಿ ಇರುವ ಸುದೀಪ್ ಟ್ವಿಟ್ಟರ್ ನಲ್ಲಿ ನೋವನ್ನು ಹಂಚಿಕೊಂಡಿದ್ದಾರೆ.
ಸುದೀಪ್ ಅಪ್ಪಟ ಅಭಿಮಾನಿ ಮಾತ್ರವಲ್ಲದೆ ಸಹೋದರನಂತೆ ಇದ್ದರು. ನಂದೀಶ್ ನಿಧನದ ಸುದ್ದಿ ಕೇಳಿ ಸುದೀಪ್ ಟ್ವಿಟ್ಟರ್ ನಲ್ಲಿ ನೋವು ಹಂಚಿಕೊಂಡಿದ್ದಾರೆ. ಅಲ್ಲದೆ ಕಿಚ್ಚ ಟ್ವಿಟ್ಟರ್ ಡಿಪಿ ಬದಲಾಯಿಸಿ ನಂದೀಶ್ ಫೋಟೋ ಡಿಪಿಗೆ ಹಾಕಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದು ಕೊಂಡಿರುವ ಕಿಚ್ಚ "ನನ್ನ ಸಹೋದರ ಸ್ಥಾನದಲ್ಲಿದ್ದ ನಂದೀಶ್ ಅವರ ಸಾವಿನ ಸುದ್ದಿ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಆನೇಕ ವರ್ಷಗಳಿಂದ ನಮ್ಮೊಂದಿಗೆ ಇದ್ದರು. ತುಂಬ ಮಿಸ್ ಮಾಡಿಕೊಳ್ಳುತ್ತೀವಿ. ಇದು ತುಂಬಲಾರದ ನಷ್ಟ. ನಿಮ್ಮ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ಕುಟುಂಬಕ್ಕೆ ನೀಡಲಿ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











