'ಮಿಲನ' ಖ್ಯಾತಿಯ ಹಿರಿಯ ನಟ ಸುರೇಶ್ ಮಂಗಳೂರು ಇನ್ನಿಲ್ಲ
ಹಲವಾರು ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕರಾವಳಿಯ ಪ್ರತಿಭೆ ಹಿರಿಯ ನಟ ಸುರೇಶ್ ಮಂಗಳೂರು ಅವರು ಕಿಡ್ನಿ ವೈಫಲ್ಯದಿಂದ ಮಂಗಳವಾರ (ಮೇ 17) ನಮ್ಮನ್ನಗಲಿದ್ದಾರೆ.
ವಿನು ಬಳೆಂಜ ಅವರ 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯಲ್ಲಿ ಗುರುತಿಸಿಕೊಂಡ ನಟ ಸುರೇಶ್ ಮಂಗಳೂರು ಅವರು ತದನಂತರ ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ತದನಂತರ 'ತಾಜ್ ಮಹಲ್' ಚಿತ್ರದಲ್ಲಿ ನಾಯಕ ಅಜೇಯ್ ರಾವ್ ಅವರ ತಂದೆಯ ಪಾತ್ರದಲ್ಲಿ, 'ಚಾರ್ ಮಿನಾರ್' ಚಿತ್ರದಲ್ಲಿ ನಟ ಲವ್ಲಿ ಸ್ಟಾರ್ ಪ್ರೇಮ್ ತಂದೆಯಾಗಿ, 'ಮಿಲನ' ಚಿತ್ರದಲ್ಲಿ ನಟಿ ಪಾರ್ವತಿ ಮೆನನ್ ತಂದೆಯಾಗಿ, 'ಮೈಲಾರಿ' ಚಿತ್ರದಲ್ಲಿ ಶಿವಣ್ಣ ಅವರ ತಂದೆಯ ಪಾತ್ರದಲ್ಲಿ ಮಿಂಚಿ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಂಪಲ್ ಆಗಿ ನಟಿಸುವ ಇವರ ಅದ್ಭುತ ನಟನೆಗೆ ಪ್ರೇಕ್ಷಕರು ಮಾರು ಹೋಗುತ್ತಿದ್ದರು. ಇವರು ಬರೀ ಕನ್ನಡ ಚಿತ್ರಗಳಲ್ಲಿ ಮಾತ್ರವಲ್ಲದೇ, ಕೆಲವು ತುಳು ಸಿನಿಮಾಗಳಲ್ಲಿ ಹಾಗೂ ತೆಲುಗು ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಇಂತಹ ಮನೋಜ್ಞ ನಟನನ್ನು ಕಳೆದುಕೊಂಡ ನಮ್ಮ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.


Click it and Unblock the Notifications











