'ಪೆದ್ದಿ' ಚಿತ್ರದಲ್ಲಿ ಶಿವಣ್ಣನ ಜೊತೆ ಮತ್ತೊಬ್ಬ ಕನ್ನಡ ನಟ; ಕಥೆಗೆ ಟ್ವಿಸ್ಟ್ ಕೊಡುವ ಪಾತ್ರದಲ್ಲಿ ನಟನೆ
ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ಜೂನ್ 4ರಂದು ತೆರೆಗೆ ಬರ್ತಿದೆ. ಕನ್ನಡ ನಟ ಶಿವರಾಜ್ಕುಮಾರ್ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಈಗಾಗಲೇ ಈ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸೇರಿ 5 ಭಾಷೆಗಳಲ್ಲಿ 'ಪೆದ್ದಿ' ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡ ನಟ ತಾರಕ್ ಪೊನ್ನಪ್ಪ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿರುವುದು ವಿಶೇಷ. ಈ ಹಿಂದೆ 'ಪುಷ್ಪ'-2 ಚಿತ್ರದಲ್ಲಿ ಅಲ್ಲು ಅರ್ಜುನ್ ಎದುರು ನೆಗೆಟಿವ್ ಪಾತ್ರದಲ್ಲಿ ಅಬ್ಬರಿಸಿದ್ದ ತಾರಕ್, ಈಗ ರಾಮ್ಚರಣ್ ಎದುರು ಮಿಂಚಿದ್ದಾರೆ. ಕನ್ನಡದಲ್ಲಿ ಶಿವಣ್ಣನ ಜೊತೆ ನಟಿಸೋ ಅವಕಾಶ ಸಿಗದೇ ಇದ್ದರೂ ತೆಲುಗು ಚಿತ್ರದಲ್ಲಿ ಇವರಿಬ್ಬರು ತೆರೆಹಂಚಿಕೊಳ್ಳುವಂತಾಗಿದೆ.

'ಪೆದ್ದಿ' ಚಿತ್ರದಲ್ಲಿ ನಟಿಸಿರುವ ಬಗ್ಗೆ ತಾರಕ್ ಪೊನ್ನಪ್ಪ ಬಹಳ ಖುಷಿಯಾಗಿದ್ದಾರೆ. ಫಿಲ್ಮಿಬೀಟ್ ಕನ್ನಡ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. "ಬಹಳ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದೀನಿ. ತೆರೆಮೇಲೆ ಹೇಗೆ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕು. 'ಪುಷ್ಪ'-2 ಚಿತ್ರದಲ್ಲಿ ನನ್ನ ನಟನೆ ನೋಡಿ ಈ ಚಿತ್ರಕ್ಕೆ ಅವಕಾಶ ಕೊಟ್ಟರು" ಎಂದು ತಾರಕ್ ಹೇಳಿದ್ದಾರೆ.
'ಪುಷ್ಪ'-2 ಚಿತ್ರಕ್ಕೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದರು. ಅವರ ಶಿಷ್ಯ ಬುಚ್ಚಿಬಾಬು 'ಪೆದ್ದಿ' ನಿರ್ದೇಶಕರು. ಹಾಗಾಗಿ 'ಪುಷ್ಪ'-2 ಸೆಟ್ನಲ್ಲಿ ನನ್ನನ್ನು ನೋಡಿದ್ರು. ಬಳಿಕ ಕರೆಸಿ, ತುಂಬಾ ಚೆನ್ನಾಗಿ ನಟಿಸಿದ್ದೀರಿ, ಈ ಪಾತ್ರಕ್ಕೆ ಬಹಳ ಡಿಫ್ರೆಂಟ್ ಶೇಡ್ ಇದೆ. ನೀವು ಮಾಡಿದ್ರೆ ಚೆನ್ನಾಗಿರುತ್ತೆ ಅಂದ್ರು. ಹೀಗೆ 'ಪೆದ್ದಿ' ಚಿತ್ರದ ಭಾಗವಾದೆ. 'ಕುಸ್ತಿ' ಎಪಿಸೋಡ್ನಲ್ಲಿ ನನ್ನ ಪಾತ್ರ ಇರುತ್ತದೆ ಎಂದು ತಾರಕ್ ಪೊನ್ನಪ್ಪ ವಿವರಿಸಿದ್ದಾರೆ.

'ಪೆದ್ದಿ' ಚಿತ್ರದಲ್ಲಿ ದೊಡ್ಡ ಟ್ವಿಸ್ಟ್ ಇದೆ ಎಂದು ಚಿತ್ರತಂಡ ಹೇಳ್ತಾ ಬರ್ತಿದೆ. ಆ ಟ್ವಿಸ್ಟ್ ನನ್ನ ಪಾತ್ರದಿಂದಲೇ ಆಗುತ್ತದೆ ಎನ್ನಬಹುದು. ಅದು ಏನು ಎನ್ನುವುದು ತೆರೆಮೇಲೆ ನೋಡಿದಾಗ ಗೊತ್ತಾಗುತ್ತದೆ. 'ಪುಷ್ಪ'-2 ಬಳಿಕ ಸಾಕಷ್ಟು ಅವಕಾಶಗಳು ಬರ್ತಿವೆ. ಆದರೆ ಅಳೆದು ತೂಗಿ ಆಯ್ಕೆ ಮಾಡಿಕೊಳ್ತಿದ್ದೀನಿ. ರಶ್ಮಿಕಾ ಮಂದಣ್ಣ ನಟನೆಯ 'ಮೈಸಾ' ಚಿತ್ರದಲ್ಲಿ ನಟಿಸುತ್ತಿದ್ದೀನಿ ಎಂದಿದ್ದಾರೆ.
ರಶ್ಮಿಕಾ, ನಾನು ಸೇರಿದಂತೆ ಸಾಕಷ್ಟು ಕನ್ನಡ ಪ್ರತಿಭೆಗಳು 'ಮೈಸಾ' ಚಿತ್ರದಲ್ಲಿ ಕೆಲಸ ಮಾಡ್ತಿದ್ದೀವಿ. ತಮಿಳನ 'ಗಟ್ಟಾ ಕುಸ್ತಿ'-2 ಚಿತ್ರದಲ್ಲಿ ಕೂಡ ನಾನು ನಟಿಸಿದ್ದೀನಿ ಎಂದು ತಾರಕ್ ಮಾಹಿತಿ ನೀಡಿದ್ದಾರೆ. 'ಪೆದ್ದಿ' ಚಿತ್ರೀಕರಣದ ವೇಳೆ ಶಿವಣ್ಣನ ಜೊತೆ ಕನ್ನಡದಲ್ಲೇ ಮಾತನಾಡುತ್ತಿದ್ದೆ. ನನ್ನ ನಟನ ನೋಡಿ ಅವರು ಮೆಚ್ಚಿಕೊಂಡಿದ್ದರು. ಮುಂದೆ ಅವಕಾಶ ಸಿಕ್ಕರೆ ಕನ್ನಡದಲ್ಲಿ ಒಟ್ಟಿಗೆ ನಟಿಸೋಣ ಎಂದು ಶಿವಣ್ಣ ಅಂದ್ರು. 'ಪೆದ್ದಿ' ಸಿನಿಮಾ ಬಗ್ಗೆ ಬಹಳ ನಿರೀಕ್ಷೆಯಿದೆ ಎಂದು ತಾರಕ್ ಪೊನ್ನಪ್ಪ ಹೇಳಿದ್ದಾರೆ.
'ಕೆಜಿಎಫ್' ಸರಣಿ ಸಿನಿಮಾಗಳಲ್ಲಿ ಆ್ಯಂಡ್ರೂ ಸಹಾಯಕ ದಯಾ ಪಾತ್ರದಲ್ಲಿ ತಾರಕ್ ನಟಿಸಿದ್ದರು. 'ಯುವರತ್ನ', 'ಗಿಲ್ಕಿ', '6 ಟು 6' ಅವರು ಕನ್ನಡದಲ್ಲಿ ನಟಿಸಿರುವ ಸಿನಿಮಾಗಳು. ತೆಲುಗಿನ 'ದೇವರ', 'ಸಿಎಸ್ಐ ಸನಾತನ' ಎಂಬ ಸಿನಿಮಾಗಳಲ್ಲಿ ಕೂಡ ಮಿಂಚಿದ್ದಾರೆ. 'ಪೆದ್ದಿ' ಚಿತ್ರದಲ್ಲಿ ಕುಸ್ತಿ ಸನ್ನಿವೇಶಗಳು ಸಾಕಷ್ಟು ಇದೆ. ಕುಸ್ತಿ ಪೈಲ್ವಾನ್ ಆಗಿ 'ಪೆದ್ದಿ'ರಾಜು ರಾಮ್ಚರಣ್ ಎದುರು ತಾರಕ್ ಕಾದಾಡಿದ್ದಾರೆ. ಟ್ರೈಲರ್ನ ಸಣ್ಣ ಝಲಕ್ನಲ್ಲಿ ಅವರನ್ನು ನೋಡಬಹುದು.
ಶಿವಣ್ಣ ಕುಸ್ತಿ ಉಸ್ತಾದ್ ಗೌರ್ನಾಯ್ಡು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬಹಳ ಮುಖ್ಯವಾದ ಪಾತ್ರ ಇದು ಎನ್ನಲಾಗ್ತಿದೆ. ನಾಯಕಿಯಾಗಿ ಜಾನ್ವಿ ಕಪೂರ್ ನಟಿಸಿದ್ದು ಜಗಪತಿ ಬಾಬು ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.


Click it and Unblock the Notifications