'ಕೆಜಿಎಫ್' ಮತ್ತು ಶಂಕರ್ ನಾಗ್: ಅದ್ಬುತ ಚಿತ್ರಕರ್ಮಿ ಬಗ್ಗೆ ಪ್ರಶಾಂತ್ ನೀಲ್ ಟ್ವೀಟ್
ಇಂದು ನಟ, ನಿರ್ದೇಶಕ ಶಂಕರ್ ನಾಗ್ ಹುಟ್ಟುಹಬ್ಬ. ಅವರಿಗೆ... ಇವರಿಗೆ.. ಎನ್ನದೆ ಶಂಕರ್ ನಾಗ್ ಎಲ್ಲರಿಗೂ ಸ್ಫೂರ್ತಿ ನೀಡುವ ವ್ಯಕ್ತಿ. ಕೆಲಸದ ಮೇಲಿನ ಅವರ ಶ್ರದ್ಧೆ, ಸಮಯ ಪ್ರಜ್ಞೆ ಅದ್ಭುತ.
ಶಂಕರ್ ನಾಗ್ ಸ್ಫೂರ್ತಿ ಪಡೆದು ಅನೇಕರು ಚಿತ್ರರಂಗಕ್ಕೆ ಬಂದಿದ್ದಾರೆ. ಕೆಲವರಿಗೆ ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಇನ್ನು ಕೆಲವರು ಅವರ ಜೊತೆಗೆ ಕೆಲಸ ಮಾಡದೆ ಇದ್ದರೂ, ಅವರ ಕೆಲಸ ಶೈಲಿಯಿಂದ ಕಲಿತಿದ್ದಾರೆ.
ನಟ, ನಿರ್ದೇಶಕ ಉಪೇಂದ್ರ, 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್, ಸಂತೋಷ್ ಆನಂದ್ ರಾಮ್, ರಘುರಾಮ್, ನಟ ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ ಸೇರಿದಂತೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಶಂಕರ್ ನಾಗ್ ರನ್ನು ನೆನೆದಿದ್ದಾರೆ. ಕನ್ನಡ ಚಿತ್ರರಂಗ ಕಂಡ ಅದ್ಭುತ ಚಿತ್ರಕರ್ಮಿಗೆ ನಮನ ಸಲ್ಲಿಸಿದ್ದಾರೆ.
ಇದು ನಮ್ಮ ಭಾಗ್ಯ- ಪ್ರಶಾಂತ್ ನೀಲ್
''ನಿಮ್ಮ ಹುಟ್ಟುಹಬ್ಬಕ್ಕೆ 'ಕೆಜಿಎಫ್' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದು, ನಮ್ಮ ಭಾಗ್ಯ. ನೀವು ನಮ್ಮನ್ನು ಅಂದು ಮಾರ್ಗದರ್ಶನ ಮಾಡಿದ್ದೇವೆ ಎಂದು ನಂಬಿದ್ದೇನೆ. ನಾನು ನಿಮಗೆ ಗೌರವ ತಂದುಕೊಟ್ಟಿದ್ದೇವೆ ಹಾಗೂ ನೀವು ಬಿಟ್ಟು ಹೋದ ಪರಂಪರೆಯನ್ನು ಎತ್ತರವಾಗಿ ನಿಲ್ಲುವಂತೆ ಮಾಡಿದ್ದೇವೆ ಎನ್ನುವುದು ನಮ್ಮ ಹೆಮ್ಮೆ.''- ಪ್ರಶಾಂತ್ ನೀಲ್, ನಿರ್ದೇಶಕ
ಸ್ಪೂರ್ತಿಯ ಚಿಲುಮೆ- ಉಪೇಂದ್ರ
''ಸ್ಪೂರ್ತಿಯ ಚಿಲುಮೆ ಶಂಕ್ರಣ್ಣ ನಿಮ್ಮ ಉತ್ಸಾಹ, ಶಕ್ತಿ, ಹುರುಪು, ಪಾದರಸದಂತಹ ವ್ಯಕ್ತಿತ್ವ,ದೂರದ್ರಷ್ಟಿ, ಸಕಾರಾತ್ಮಕ ನಡವಳಿಕೆ, ಕನಸು ಎಲ್ಲವೂ ಎಂದಿಗೂ ನಮಗೆ ಆದರ್ಶದಾಯಕ''- ಉಪೇಂದ್ರ, ನಟ, ನಿರ್ದೇಶಕ
ಜಗ ಮೆಚ್ಚಿದ ಮಗ- ರಘು ರಾಮ್
''ಬೆಳ್ಳಿ ತೆರೆಗೆ ಮುದ್ದಾದ ನಾಯಕ, ತರ್ಕ ಬದ್ದ ನಿರ್ದೇಶಕ. ಅಭಿಮಾನಿಗಳಿಗೆ ಜೀವಕ್ಕೆ ಜೀವ. ತ್ರಿಚಕ್ರ ಸಾರಥಿಗಳಿಗೆ (ಆಟೋ ಚಾಲಕರಿಗೆ) ಆ ಜೀವ ಪರ್ಯಂತ ಒಬ್ಬನೇ ‘ಆಟೋ ರಾಜ'. ಕನ್ನಡ ತಾಯಿಯ ಜಗ ಮೆಚ್ಚಿದ ಮಗನಿಗೆ ಹುಟ್ಟು ಹಬ್ಬದ ಶುಭಾಶಯಗಳು''- ರಘುರಾಮ್, ನಿರ್ದೇಶಕ
The legend- ಧ್ರುವ ಸರ್ಜಾ
''ನಮ್ಮ ಕನ್ನಡ ಚಿತ್ರರಂಗದ ಶ್ರೇಷ್ಠ ನಟ, ನಿರ್ದೇಶಕ, ಹಾಗೂ ರಾಷ್ಟ್ರಪ್ರೇಮಿ ಮತ್ತು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿರುವ ನಮ್ಮ The legend ಶಂಕರ್ ನಾಗ್ ಸರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..ಜೈ ಶಂಕ್ರಣ್ಣ..''- ಧ್ರುವ ಸರ್ಜಾ, ನಟ
'ಯುವರತ್ನ' ಶುಭಾಶಯ
ನಟ ಪುನೀತ್ ರಾಜ್ ಕುಮಾರ್ 'ವಿ ಮಿಸ್ ಯೂ ಶಂಕರ್ ನಾಗ್ ಸರ್' ಎಂದು ಟ್ವೀಟ್ ಮಾಡಿದ್ದಾರೆ. 'ಯುವರತ್ನ' ಸಿನಿಮಾದ ನಿರ್ದೇಶಕ ಸಂತೋಷ್ ಆನಂದ್ ರಾಮ್ ''ನಮಗೆ ದೊಡ್ಡ ಕನಸು ಕಾಣುವಂತೆ ಸ್ಫೂರ್ತಿ ನೀಡಿದ ನಿಜವಾದ ವ್ಯಕ್ತಿ'' ಎಂದು ಹೇಳಿದ್ದಾರೆ. ಈ ರೀತಿ ಕನ್ನಡ ಚಿತ್ರರಂಗ ಶಂಕರ್ ನಾಗ್ ರಿಗೆ ನಮನ ಸಲ್ಲಿಸಿದೆ.


Click it and Unblock the Notifications











