ಆ ವ್ಯಕ್ತಿ ಎಲ್ಲೆಲ್ಲೋ ಮುಟ್ಟುತ್ತಿದ್ದ.. 'ಲಂಕೇಶ್ ಪತ್ರಿಕೆ' ಬಳಿಕ ಅದ್ಕೆ ನಾನು ನಟನೆ ಬಿಟ್ಟಿದ್ದೆ; ಅನುಪಮಾ
ರಾಜ್ಯಪ್ರಶಸ್ತಿ ವಿಜೇತ ನಟಿ ಅನುಪಮಾ ಗೌಡ ಕಿರುತೆರೆಯಲ್ಲಿ ಕೂಡ ಜನಪ್ರಿಯತೆ ಗಳಿಸಿದ್ದಾರೆ. ತಂದೆ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. ಆರಂಭದಲ್ಲಿ ಸಹ ಕಲಾವಿದೆಯಾಗಿ ಅನುಪಮಾ ಚಿತ್ರರಂಗಕ್ಕೆ ಬಂದಿದ್ದರು. ದರ್ಶನ್ ನಟನೆಯ 'ಲಂಕೇಶ್ ಪತ್ರಿಕೆ' ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದರು. ಬಳಿಕ ನಟಿಸುವುದು ನಿಲ್ಲಿಸಿದ್ದರು.
ಚಿಕ್ಕವಯಸ್ಸಿನಲ್ಲೇ ಹೆಣ್ಣು ಮಕ್ಕಳು ಲೈಂಗಿಕ ಕಿರುಕುಳ ಅನುಭವಿಸಿರುವ ಸಾಕಷ್ಟು ಉದಾಹರಣೆಗಳಿವೆ. ಸಾಕಷ್ಟು ನಟಿಯರು ಕೂಡ ತಮಗೆ ಇಂತಾದೊಂದು ಕಹಿ ಅನುಭವ ಆಗಿರುವ ಬಗ್ಗೆ ಮಾತನಾಡಿದ್ದಾರೆ. ನಟಿ ಅನುಪಮಾ ಗೌಡ ತಾವು ಇದೇ ರೀತಿ ಕಿರುಕುಳ ಎದುರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಆ ದಿನಗಳಲ್ಲಿ ಎಲ್ಲಿಯೂ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಅನುಪಮಾ ಗೌಡ ಜೀವನದಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದ ನಂಟು ಬೆಳೆದಿದ್ದು ಹೇಗೆ ಎನ್ನುವುದನ್ನು ಕೂಡ ವಿವರಿಸಿದ್ದಾರೆ. ಮೊದಲಿಗೆ ಲಂಕೇಶ್ ಪತ್ರಿಕೆ ಚಿತ್ರದಲ್ಲಿ ನಟಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಚಿಕ್ಕಂದಿನಲ್ಲೇ ನಾನು ಮನೆ ಕೆಲಸಕ್ಕೆ ಹೋಗುತ್ತಿದ್ದೆ. ನಮ್ಮ ಅಮ್ಮನಿಗೆ ಜ್ಯೂನಿಯರ್ ಆರ್ಟಿಸ್ಟ್ ಒಬ್ಬರು ಪರಿಚಯ ಇದ್ದರು. ಆಕೆ ಬಂದು ನಮ್ಮ ಅಮ್ಮನ ಬಳಿ ಕೇಳಿ ನನ್ನನ್ನು ಸಿನಿಮಾಗಳಲ್ಲಿ ನಟಿಸೋಕೆ ಕರೆದುಕೊಂಡು ಹೋಗಿದ್ದರು.
ಸಿನಿಮಾಗಳಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ನಟಿಸೋಕೆ ದಿನಕ್ಕೆ 100 ರೂಪಾಯಿ ಕೊಡುತ್ತಿದ್ದರು. ಆಗ ನಾನು 7 ನೇ ತರಗತಿಯಲ್ಲಿದ್ದೆ. ಕೆಲ ಸಿನಿಮಾ, ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದೆ. 'ಲಂಕೇಶ್ ಪತ್ರಿಕೆ' ಚಿತ್ರದ ಕ್ಲೈಮ್ಯಾಕ್ಸ್ನ ಸಣ್ಣ ದೃಶ್ಯದಲ್ಲಿ ನಟಿಸಿದ್ದೆ. ವಿಶೇಷ ಚೇತನ ಹುಡುಗಿಯ ಪಾತ್ರ. ದರ್ಶನ್ ಸರ್ ಜೊತೆ ತೆರೆ ಹಂಚಿಕೊಂಡೆ. ಕ್ಲೈಮ್ಯಾಕ್ಸ್ನಲ್ಲಿ ನನ್ನ ಪಾತ್ರದಿಂದ ಚಿತ್ರಕ್ಕೆ ತಿರುವು ಸಿಗುತ್ತದೆ. ಅಂತಹ ಪಾತ್ರ ಎಂದು ಅನುಪಮಾ ಗೌಡ ನೆನಪಿಸಿಕೊಂಡಿದ್ದಾರೆ.

ನಾನು ಜ್ಯೂನಿಯರ್ ಆರ್ಟಿಸ್ಟ್ ಆಗಿ ನಾನು ಗುರ್ತಿಸುವಂತೆ ಕಾಣಿಸಿಕೊಂಡಿದ್ದು ಅದೇ ಚಿತ್ರದಲ್ಲಿ. ಮುಂದೆ ಅದೇ ಕೆಲಸ ಮುಂದುವರೆಸಬೇಕು ಎಂದುಕೊಂಡೆ. ಒಬ್ಬ ಆಕ್ಟರ್ ಇದ್ದರು. ಅವರು ಈಗ ಇಂಡಸ್ಟ್ರಿಯಲ್ಲಿ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಅವರು ಚಿತ್ರಕ್ಕೆ ಕಲಾವಿದರನ್ನು ಕರೆದುಕೊಂಡು ಹೋಗುತ್ತಿದ್ದರು. ಅವರು ನಮ್ಮ ಮನೆಗೆ ಬರ್ತಿದ್ದರು. ಒಮ್ಮೆ ಅಪ್ಪ, ಅಮ್ಮ ಯಾರು ಇಲ್ಲದೇ ಇರುವಾಗ ಮನೆಗೆ ಬಂದಿದ್ದರು ಎಂದು ಅನುಪಮಾ ಆ ವಿಚಾರ ಬಹಿರಂಗಪಡಿಸಿದ್ದಾರೆ.
ಆ ವ್ಯಕ್ತಿ ನನ್ನನ್ನು ಮನೆಯ ತೆರೇಸ್ ಮೇಲೆ ಕರೆದುಕೊಂಡು ಹೋದರು. ಮಾತನಾಡುತ್ತಲೇ, ನನ್ನ ಮೈ ಮುಟ್ಟಲು ಆರಂಭಿಸಿದರು. ನನಗೆ ಅದು ಏನು ಎನ್ನುವುದು ಗೊತ್ತಾಗುತ್ತಿರಲಿಲ್ಲ. ಅದರ ಬಗ್ಗೆ ನನಗೆ ಏನು ಗೊತ್ತಿರಲಿಲ್ಲ. ಮದುವೆ ಆದರೆ ಮಕ್ಕಳಾಗುತ್ತದೆ ಎಂದುಕೊಂಡಿದ್ದೆ. ಅದು ಬಿಟ್ಟು ಆಗ ಇದೆಲ್ಲ ಗೊತ್ತಿರಲಿಲ್ಲ. ಅದು ಹಿಂಸೆ ಎನಿಸುತ್ತಿತ್ತು, ಬಿಟ್ಟರೆ ಏನು ಎನ್ನುವುದು ಅರ್ಥವಾಗುತ್ತಿರಲಿಲ್ಲ, ನನಗೆ ಭಯವಾಗಿ ಓಡಿಬಂದು ಮನೆ ಬಾಗಿಲು ಲಾಕ್ ಮಾಡಿಕೊಂಡಿದ್ದೆ ಎಂದು ಅನುಪಮಾ ನೋವು ತೋಡಿಕೊಂಡಿದ್ದಾರೆ.
ಆ ಘಟನೆ ಬಳಿಕ ನಾನು ಸಿನಿಮಾಗಳಲ್ಲಿ ನಟಿಸೋಕೆ ಹೋಗಲ್ಲ ಎಂದು ಅಮ್ಮನಿಗೆ ಹೇಳಿದೆ. ಜ್ಯೂನಿಯರ್ ಆರ್ಟಿಸ್ಟ್ ಕೆಲಸವೇ ಬೇಡ ಎಂದುಬಿಟ್ಟೆ. ಬಳಿಕ ಅಮ್ಮನ ಜೊತೆ ಗಾರ್ಮೆಂಟ್ ಕೆಲಸಕ್ಕೆ ಹೋದೆ. ಅವತ್ತು ಏನಾಯಿತು ಎಂದು ಯಾರಿಗೂ ಹೇಳಬೇಕು ಎನಿಸಲಿಲ್ಲ. ಮುಂದೆ ಮತ್ತೆ ಶಾಲೆಗೆ ಹೋದೆ. ಪಿಯುಸಿವರೆಗೆ ಓದಿದೆ. ಪಿಯುಸಿಯಲ್ಲಿ ಫೇಲ್ ಆಗಿದ್ದೆ. ಅಲ್ಲಿಗೆ ನಮ್ಮ ಓದು ಮುಗಿಯಿತು ಎಂದು ಅನುಪಮಾ ಗೌಡ ವಿವರಿಸಿದ್ದಾರೆ.


Click it and Unblock the Notifications











