ಕ್ರಿಕೆಟರ್ ಶರತ್ ಜೊತೆ ಸಪ್ತಪದಿ ತುಳಿದ ಅರ್ಚನಾ ಕೊಟ್ಟಿಗೆ, ಮದುವೆಯಲ್ಲಿ ಐಪಿಎಲ್ ಸ್ಟಾರ್ಗಳ ದಂಡು..!
ಕ್ರಿಕೆಟ್ ಮತ್ತು ಸಿನಿಮಾ ಎರಡಕ್ಕೂ ಮೊದಲಿಂದ ಗಂಡ - ಹೆಂಡ್ತಿಯ ಸಂಬಂಧ. ಇದಕ್ಕೆ ಕೈಗನ್ನಡಿ ಎನ್ನುವಂತೆ ಮೊಹಮ್ಮದ್ ಅಜರುದ್ದೀನ್ ಅವರಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ, ಅಜಯ್ ಜಡೇಜಾ ಅವರಿಂದ ಹಿಡಿದು ಕೆ.ಎಲ್.ರಾಹುಲ್ವರೆಗೆ ಅನೇಕರು ನಾಯಕಿಯರ ಬೆಡಗು-ಭಿನ್ನಾಣಕ್ಕೆ ಮನ ಸೋತಿದ್ದಾರೆ. ಕೆಲವರು ಪ್ರೀತಿಯಲ್ಲಿ ಬಿದ್ದು ಎದ್ದರೆ, ಇನ್ನೂ ಕೆಲವರು ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಸುಖ ಸಂಸಾರವನ್ನು ನಡೆಸುತ್ತಿದ್ದಾರೆ.
ಈ ಸಾಲಿಗೆ ಈಗ ಕನ್ನಡದ ಚೆಲುವೆ ಅರ್ಚನಾ ಕೊಟ್ಟಿಗೆ ಕೂಡ ಸೇರಿಕೊಂಡಿದ್ದಾರೆ. ಹೌದು, ಅರಣ್ಯಕಾಂಡ, ವಾಸು ನಾನ್ ಪಕ್ಕಾ ಕಮರ್ಷಿಯಲ್, ಡಿಯರ್ ಸತ್ಯಾ, ಯೆಲ್ಲೋ ಗ್ಯಾಂಗ್ಸ್, ಹೊಂದಿಸಿ ಬರೆಯಿರಿ, ಹೀಗೆ ಹಲವು ಚಿತ್ರಗಳ ಮೂಲಕ ಅನೇಕ ಕನ್ನಡ ಚಿತ್ರಪ್ರೇಮಿಗಳ ಹೃದಯವನ್ನು ಗೆದ್ದ ಅರ್ಚನಾ ಕೊಟ್ಟಿಗೆ ಕರ್ನಾಟಕದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸಮನ್ ಬಿಆರ್ ಶರತ್ ಜೊತೆ ಸಪ್ತಪದಿಯನ್ನು ತುಳಿದಿದ್ದಾರೆ. ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ.

ಇನ್ನು, ಬೆಂಗಳೂರಿನಲ್ಲಿ ಗುರುವಾರ { ಏಪ್ರಿಲ್ 24 } ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಪಂದ್ಯ ನಡೆಯಲಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿಯೇ ಇರುವ ದೇವದತ್ ಪಡಿಕ್ಕಲ್ ಈ ಮದುವೆ ಸಮಾರಂಭಕ್ಕೆ ಬಂದು ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಗುಜರಾತ್ ಟೈಟನ್ಸ್ ಪರ ಈ ಬಾರಿ ಐಪಿಎಲ್ ಆಡುತ್ತಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣ ಮತ್ತು ಪಂಜಾಬ್ ಪರ ಆಡುತ್ತಿರುವ ವೈಶಾಖ್ ವಿಜಯ್ ಕುಮಾರ್, ಆರ್ಸಿಬಿಯ ಮತ್ತೊಬ್ಬ ಆಟಗಾರ ಮನೋಜ್ ಬಂಡಾಗೆ ಕೂಡ ಬಿಡುವು ಮಾಡಿಕೊಂಡು ಬಂದು ಬಿ.ಆರ್.ಶರತ್ ಮತ್ತು ಅರ್ಚನಾಗೆ ಅಭಿನಂದನೆ ಸಲ್ಲಿಸಿದ್ದಾರೆ. ಇವರಲ್ಲದೇ ಇನ್ನು ಹಲವು ರಣಜಿ ಆಟಗಾರರು ಕೂಡ ಮದುವೆಗೆ ಆಗಮಿಸಿ ಶುಭ ಹಾರೈಸಿದ್ದಾರೆ.
ಇನ್ನು ನಿನ್ನೆ ನಡೆದ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವಾರು ತಾರೆಯರು ಭಾಗಿಯಾಗಿದ್ದರು. ಸಪ್ತಮಿ ಗೌಡ, ಅಮೃತಾ ಐಯ್ಯಂಗಾರ್, ಸಾನ್ಯಾ ಐಯ್ಯರ್, ಆಶಿಕಾ ರಂಗನಾಥ್, ಹಿತಾ ಚಂದ್ರಶೇಖರ್, ಕಿರಣ್ ಶ್ರೀನಿವಾಸ್, ಪ್ರವೀಣ್ ಗೌಡ, ಹೀಗೆ ಹಲವರು ಬಂದು ನವ ಜೋಡಿಗೆ ಶುಭ ಹಾರೈಸಿದರು. ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಕೂಡ ಆರತಕ್ಷತೆ ಕಾರ್ಯಕ್ರಮಕ್ಕೆ ನಿನ್ನೆ ಬಂದಿದ್ದರು.
ಇನ್ನುಳಿದಂತೆ ಬಿ.ಆರ್.ಶರತ್ ವೃತ್ತಿಯಲ್ಲಿ ಕ್ರಿಕೆಟರ್. ಕರ್ನಾಟಕದ ರಣಜಿ ತಂಡದಲ್ಲಿ ಮಿಂಚಿರುವ ಶರತ್ ಐಪಿಎಲ್ನಲ್ಲಿ ಕೂಡ ಆಡಿದ್ದಾರೆ. ಗುಜರಾತ್ ಟೈಟನ್ಸ್ ತಂಡದ ಪರವಾಗಿ ಕಣಕ್ಕಿಳಿದಿದ್ದಾರೆ. ಕಳೆದ ವರ್ಷ ಜಾರ್ಖಂಡ್ನ ರಾಬಿನ್ ಮಿಂಜ್ ಗಾಯದ ಕಾರಣದಿಂದ ಹೊರ ಬಿದ್ದಾಗ ಬಿಆರ್ ಶರತ್ ಅವರಿಗೆ ಗುಜರಾತ್ ಟೈಟನ್ಸ್ ಕಡೆಯಿಂದ ಬುಲಾವ್ ಬಂದಿತ್ತು.
ಇನ್ನು ರಣಜಿಯಲ್ಲಿ 20 ಪಂದ್ಯಗಳಲ್ಲಿ 616 ರನ್ ಬಾರಿಸಿರುವ ಶರತ್ ಒಂದು ಶತಕವನ್ನು ಕೂಡ ಸಿಡಿಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿ ಗುರುತಿಸಿಕೊಂಡಿರುವ ಇವರು T 20ಯಲ್ಲಿ ಇಲ್ಲಿಯವರೆಗೆ 29 ಪಂದ್ಯಗಳನ್ನು ಆಡಿದ್ದಾರೆ. ಒಂದು ಅರ್ಧ ಶತಕವನ್ನೊಳಗೊಂಡಂತೆ 330 ರನ್ಗಳನ್ನು ಗಳಿಸಿದ್ದಾರೆ. ಇನ್ನು ಬಿಜಾಪುರ್ ಬುಲ್ಸ್, ಮಂಗಳೂರ್ ಡ್ರ್ಯಾಗನ್ಸ್, ಶಿವಮೊಗ್ಗ ಸ್ಟ್ರೈಕರ್ಸ್ ತಂಡಗಳ ಪರವಾಗಿ ಆಡಿದ ಅನುಭವ ಇವರಿಗಿದೆ.
ಅಂದ್ಹಾಗೇ ಅರ್ಚನಾ ಮತ್ತು ಶರತ್ ಅವರದ್ದು ಅರೆಂಜ್ ಮ್ಯಾರೇಜ್ ಅಲ್ಲ ಬದಲಿಗೆ ಲವ್ ಮ್ಯಾರೇಜ್. ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ಸ್ನೇಹಿತರಾಗಿದ್ದರು. ವಿಶೇಷ ಅಂದರೆ ಶರತ್ ಕಾಲೇಜ್ನಲ್ಲಿ ಅರ್ಚನಾ ಅವರ ಸೀನಿಯರ್ ಆಗಿದ್ದರು. ಹೆಚ್ಚು ಕಡಿಮೆ 8 ವರ್ಷಗಳಿಂದ ಜೊತೆಯಲ್ಲಿದ್ದ ಇಬ್ಬರು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದಾರೆ. ಸುಖ ದುಖಗಳಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಇದೀಗ ಮದುವೆಯ ಬಂಧನಕ್ಕೊಳಗಾಗಿದ್ದಾರೆ.ಇಬ್ಬರ ಜೀವನ ಸುಂದರ ಕ್ಷಣಗಳಿಂದ ತುಂಬಿರಲಿ, ಈ ನವ ಜೋಡಿಗೆ ನಿಮ್ಮ ಶುಭಾಶಯ ಕೂಡ ಇರಲಿ.


Click it and Unblock the Notifications











