Me Too.. "ಪಾತ್ರಕ್ಕಾಗಿ ಪಲ್ಲಂಗ.. ನನಗೂ ಆ ಬೇಡಿಕೆ ಇಟ್ಟಿದ್ದರು" ಅದಕ್ಕೆ ಇಂಡಸ್ಟ್ರಿ ಬಿಟ್ಟೆ: ಬಾಂಬ್ ಸಿಡಿಸಿದ ಆಶಿತಾ
ಒಂದು ಕಾಲದಲ್ಲಿ ಮೀಟು ಅಭಿಯಾನ ದೇಶಾದ್ಯಂತ ಬಿರುಗಾಳಿ ಎಬ್ಬಿಸಿತ್ತು. ಬಾಲಿವುಡ್, ಕಾಲಿವುಡ್, ಟಾಲಿವುಡ್ ನಟಿಮಣಿಯರು ಚಿತ್ರರಂಗದಲ್ಲಿ ತಮಗಾದ ಮೀಟು ಅನುಭವವನ್ನು ಸಮಾಜದ ಮುಂದೆ ತೆರೆದಿಟ್ಟಿದ್ದರು. ಇದೀಗ ಕನ್ನಡದ ಪ್ರತಿಭಾನ್ವಿತ ನಟಿ ಆಶಿತಾ ಕೂಡ ಚಿತ್ರರಂಗದ ಕರಾಳಮುಖದ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದ ಹೊಲಸು ಸಂಸ್ಕೃತಿಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
'ರೋಡ್ ರೋಮಿಯೋ', 'ಗ್ರೀನ್ ಸಿಗ್ನಲ್', 'ಬಾ ಬಾರೋ ರಸಿಕ', 'ಮೈ ಗ್ರೀಟಿಂಗ್ಸ್', 'ತವರಿನ ಸಿರಿ', 'ಆಕಾಶ್' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಆಶಿತಾ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು. ಇವತ್ತಿಗೂ ಆಶಿತಾರನ್ನು ಕಂಡರೆ ಜನ ಗುರ್ತು ಹಿಡಿದು ಮಾತನಾಡಿಸುತ್ತಾರೆ. ಆದರೆ 'ರೋಡ್ ರೋಮಿಯೋ' ಸಿನಿಮಾ ನಂತರ ಆಶಿತಾ ಚಿತ್ರರಂಗದಿಂದ ದಿಢೀರ್ ದೂರಾಗಿದ್ದರು. ಅಭಿಮಾನಿಗಳು ಸಾಕಷ್ಟು ಬಾರಿ ನೀವು ಯಾಕೆ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ನಿಮ್ಮನ್ನು ಮತ್ತೆ ತೆರೆಮೇಲೆ ನೋಡಲು ಇಷ್ಟಪಡುತ್ತೇವೆ ಎಂದು ಹೇಳುತ್ತಿದ್ದರು. ಆದರೆ ತಾವು ಯಾಕೆ ಚಿತ್ರರಂಗದಿಂದ ಏಕಾಏಕಿ ದೂರಾಗಿದ್ದು, ಎನ್ನುವುದನ್ನು ಇದೀಗ ಆಶಿತಾ ಬಿಚ್ಚಿಟ್ಟಿದ್ದಾರೆ. ಚಿತ್ರರಂಗದ ಆ ಕೆಟ್ಟ ಸಂಸ್ಕೃತಿಗೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.
ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಆಶಿತಾಗೆ ಯಾವುದೇ ಸಮಸ್ಯೆ ಆಗಲಿಲ್ಲವಂತೆ. ಆದರೆ ನಿಧಾನವಾಗಿ ಕೆಲವರು ಕೆಟ್ಟದಾಗಿ ನಡೆದುಕೊಳ್ಳಲು ಆರಂಭಿಸಿದರು. ಏನೇನೋ ಬೇಡಿಕೆ ಇಟ್ಟರು. ಅದು ಇಷ್ಟವಿಲ್ಲದೇ ನಾನು ಇಂಡಸ್ಟ್ರಿ ಬಿಟ್ಟೆ ಎಂದು ಆಕೆ ವಿವರಿಸಿದ್ದಾರೆ. ನಿರ್ದೇಶಕ ರಘುರಾಮ್ ಅವರ 'ನೂರೊಂದು ನೆನಪು' ಯೂಟ್ಯೂಬ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

'ಮೊಗ್ಗಿನ ಮೊನಸು' ಚಿತ್ರದಲ್ಲಿ ನಟಿಸಬೇಕಿತ್ತು
"ನನಗೆ ಒಳ್ಳೆ ಸಿನಿಮಾಗಳನ್ನು ಮಾಡಬೇಕು ಅನ್ನುವ ಆಸೆ. ಒಳ್ಳೆ ಅವಕಾಶಗಳಿಗಾಗಿ ಹುಡುಕಾಟ ನಡೆಸುತ್ತಿದ್ದೀನಿ. ಆಯಾ ಸಂದರ್ಭದಲ್ಲಿ ಯಾವುದು ಒಳ್ಳೆ ಸಿನಿಮಾ ಬರುತ್ತೋ ಅದರಲ್ಲಿ ನಟಿಸಬೇಕು ಎಂದಿದ್ದೆ. ಆದರೆ ಅಂತಹ ಅವಕಾಶ ಸಿಗಲಿಲ್ಲ. ಜೊತೆಗೆ ನಾನು ಆಗ ಓದುತ್ತಿದ್ದೆ. 'ಮೊಗ್ಗಿನ ಮೊನಸು' ಚಿತ್ರದ ಅವಕಾಶ ಬಂತು. ಆದರೆ ಆ ಸಮಯದಲ್ಲಿ ಎಕ್ಸಾಂ ಇತ್ತು. ಎಷ್ಟೋ ಸಿನಿಮಾಗಳನ್ನು ನಾನು ಮಾಡಲು ಸಾಧ್ಯವಾಗಲಿಲ್ಲ. ಶಶಾಂಕ್ ನನಗೆ 'ಮೊಗ್ಗಿನ ಮನಸು' ಆಫರ್ ಮಾಡಿದಾಗ ಅವರು 'ಬಾ ಬಾರೋ ರಸಿಕ' ಚಿತ್ರಕ್ಕೆ ಲಿರಿಕ್ಸ್ ರೈಟರ್ ಆಗಿದ್ದರು. ಆಗಲೇ ಅವರು ಹೇಳಿದ್ದರು. ನಾನು ನಿರ್ದೇಶನ ಮಾಡುವ ಚಿತ್ರದಲ್ಲಿ ನಟಿಸಬೇಕು ಅಂತ. ಅವರು ಹೇಳಿದಂತೆ ಸಿನಿಮಾ ಮಾಡುವಾಗ ಕೇಳಿದರು. ನಾನು ನಟಿಸಲು ಸಾಧ್ಯವಾಗಲಿಲ್ಲ.

ನಾನು ಬಹಿರಂಗವಾಗಿಯೇ ಹೇಳುತ್ತೇನೆ
"ನನಗೆ ಆ ಸಮಯದಲ್ಲೇ ಚಿತ್ರರಂಗದಲ್ಲಿ ಸ್ವಲ್ಪ ಸವಾಲುಗಳು ಎದುರಾಯ್ತು. ಇದನ್ನು ಬಹಿರಂಗವಾಗಿ ಹೇಳ್ತೀನಿ ನಾನು. 1998ರಲ್ಲಿ ಚಿತ್ರರಂಗಕ್ಕೆ ಬಂದಾಗ ಸಮಸ್ಯೆ ಬರಲಿಲ್ಲ. ಆ ನಂತರ ಸಿನಿಮಾ ಸ್ವಲ್ಪ ಕಮರ್ಷಿಯಲ್ ಆಗಲು ಶುರುವಾಯಿತು. 2006-07ರ ಸಮಯದಲ್ಲಿ ಯಾರ್ಯಾರೋ ಚಿತ್ರರಂಗಕ್ಕೆ ಬಂದರು. ಚಿತ್ರರಂಗದವರು ಬಿಟ್ಟು ರಿಯಲ್ ಎಸ್ಟೇಟ್ನವರೆಲ್ಲಾ ಬರಲು ಶುರು ಮಾಡಿದ್ದರು. ಆ ಸಮಯದಲ್ಲಿ ಬೇರೆ ತರಹದ ಬೇಡಿಕೆಗಳು ಶುರುವಾಯಿತು. ಈ ಬಗ್ಗೆ ನಾನು ಬಹಿರಂಗವಾಗಿಯೇ ಹೇಳುತ್ತೇನೆ. ಏನೇನೋ ಬೇಡಿಕೆ ಶುರು ಆಯಿತು. ಸಮಾನ್ಯವಾಗಿ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಇಂತಹ ಸಮಸ್ಯೆ ಎದುರಾಗುತ್ತದೆ. ಆದರೆ ನನಗೆ ಆರಂಭದಲ್ಲಿ ಸಮಸ್ಯೆ ಎದುರಾಗಲಿಲ್ಲ.

"ನಾನು ಕ್ಲೀನ್ ಅಂಡ್ ನೀಟ್"
"ನಾನು ಪೀಕ್ನಲ್ಲಿ ಇದ್ದಾಗ, ಜನ ನನ್ನನ್ನು ಗುರ್ತಿಸಲು ಶುರು ಮಾಡಿದಾಗ ಸವಾಲುಗಳು ಶುರುವಾಯಿತು. ಬಹಳ ಜನಕ್ಕೆ ಇದು ಗೊತ್ತಿಲ್ಲ. ಎಷ್ಟೋ ಜನ ಹೇಳ್ತಾರೆ ನೀವು ಇದಕ್ಕೆ ಸಿನಿಮಾ ಮಾಡಿಲ್ಲ, ಅದಕ್ಕೆ ಮಾಡಿಲ್ಲ. ಅವಕಾಶಗಳನ್ನು ಕಳೆದುಕೊಂಡ್ರಿ ಅಂತ. ಆದರೆ ನಂಬಿ. ಇವತ್ತಿಗೂ ಒಳ್ಳೆ ಅವಕಾಶ ಸಿಕ್ಕರೆ ನಟಿಸೋಕೆ ನಾನು ಸಿದ್ಧ. ಆದರೆ ಈ ಸವಾಲುಗಳನ್ನು ನನ್ನಿಂದ ಫೇಸ್ ಮಾಡಲು ಸಾಧ್ಯವಾಗಲಿಲ್ಲ. ಅನ್ಹೆಲ್ತಿ ಡಿಮ್ಯಾಂಡ್ಸ್ನ ನಾನು ಈಗಲೂ ಫುಲ್ ಫಿಲ್ ಮಾಡಲ್ಲ. ಯಾವಾಗಲೂ ಮಾಡಲ್ಲ. ನನಗೆ ಇವತ್ತಿಗೂ ರಿಗ್ರೆಟ್ಸ್ ಇಲ್ಲ. ಅವಕಾಶಕ್ಕಾಗಿ ನಾನು ಆ ರೀತಿ ಮಾಡಿಲ್ಲ ಅನ್ನುವ ಸಮಾಧಾನ ಇದೆ. ನಾನು ಕ್ಲೀನ್, ನೀಟ್.

ನನಗೂ ಮೀಟು ಅನುಭವ ಆಗಿದೆ: ಆಶಿತಾ
ಇವತ್ತಿಗೂ ಜನ ನನ್ನನ್ನು ಅಶಿತಾ ಎಂದು ಗುರ್ತಿಸುತ್ತಾರೆ. ಅಷ್ಟು ಸಾಧನೆ ಸಾಕು ನನಗೆ. ನಾನು ಸಿನಿಮಾದಿಂದ ದೂರ ಹೋಗಲು ಇದೇ ಕಾರಣ ಅಂತ ಹೇಳಲು ಇಷ್ಪಪಡುತ್ತೇನೆ. ಯಾಕಂದರೆ ದೊಡ್ಡ ದೊಡ್ಡ ಸಿನಿಮಾ ಅವಕಾಶಗಳು ನನಗೆ ಬಂದು, ಈ ಕಾರಣಕ್ಕೆ ನಾನು ಮಾಡಲಿಲ್ಲ. ಖಂಡಿತ ನನಗೂ ಮೀಟು ಅನುಭವ ಆಗಿದೆ. ಆ ನಿರ್ದೇಶಕರ ಹೆಸರು ಹೇಳಲ್ಲ. ಈಗಷ್ಟೇ ಅವರ ಬಗ್ಗೆ ಮಾತನಾಡಿದ್ವಿ. ಆ ನಿರ್ದೇಶಕರು ಕೂಡ ನನ್ನ ಜೊತೆ ಅದೇ ರೀತಿ ನಡೆದುಕೊಂಡರು. ಅವರು ಭಯಸಿದಷ್ಟು ನಾನು ಸಲುಗೆಯಿಂದ ಅವರ ಜೊತೆ ಇರಲಿಲ್ಲ. ಚಿತ್ರರಂಗದಲ್ಲಿ ನಗು ನಗುತ್ತಾ ಮಾತನಾಡಬೇಕು, ತುಂಬಾ ಸಲುಗೆ ಇಂದ ಇರಬೇಕಿತ್ತು. ಆದರೆ ನಾನು ಆ ರೀತಿ ಇರುತ್ತಿರಲಿಲ್ಲ. ಯಾಕಂದರೆ ಅದರ ಅವಶ್ಯಕತೆ ಇರಲಿಲ್ಲ. ಕಾರಣ ನನಗೆ ನಟಿಸುವ ಪ್ರತಿಭೆ ಇತ್ತು.

ಖಂಡಿತ ನನಗೆ ವಿಷಾದ ಇಲ್ಲ
"ನಾನು ಆ ರೀತಿ ಇರುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಸೆಟ್ನಲ್ಲಿ ಸಾಕಷ್ಟು ಕಷ್ಟ ಕೊಟ್ಟಿದ್ದಾರೆ. ಒಳ್ಳೆ ಶಾಟ್ ಮಾಡಿದ್ದರು. ಇದು ಸರಿ ಇಲ್ಲ ಎಂದು ಕಟ್ ಮಾಡಿದ್ದಾರೆ. ಸರಿಯಿಲ್ಲ ಎಂದು ಒಂದಲ್ಲ 10 ಸಲ ಮಾಡಿಸಿದ್ದಾರೆ. ನಾನು ಸಂಪೂರ್ಣವಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡ ಮೇಲೆ ಈ ಅನುಭವ ಆಗಿದೆ. ಹೊಸಬರಿಗೆ ಆರಂಭದಲ್ಲಿ ಕಷ್ಟ ಆಗುತ್ತೆ ಎನ್ನುತ್ತಾರೆ. ಆದರೆ ನನಗೆ ಆ ನಂತರ ಕಷ್ಟ ಆಯ್ತು. ಚಿತ್ರರಂಗದಲ್ಲಿ ಎಲ್ಲರೂ ಹೀಗಲ್ಲ. ಕೆಲವರು ಮಾತ್ರ ಈ ರೀತಿ ಇಂಡಸ್ಟ್ರಿಯಲ್ಲಿ ಇದ್ದಾರೆ. ಮೀಟೂ ವಿಚಾರದಿಂದಾಗಿ ಸಿನಿಮಾ ಅವಕಾಶಗಳು ಕಡಿಮೆಯಾಯಿತು. ಇದಕ್ಕೆ ಖಂಡಿತ ವಿಷಾದವಿಲ್ಲ" ಎಂದು ಅಶಿತಾ ಹೇಳಿದ್ದಾರೆ.


Click it and Unblock the Notifications











