ವಿಷ್ಣು ಸ್ಮಾರಕ ನಿರ್ಮಾಣಕ್ಕೆ ದಿನಾಂಕ ನಿಗದಿ: ನಾಲ್ಕೇ ದಿನಗಳಲ್ಲಿ ಸ್ಮಾರಕಕ್ಕೆ ಅಡಿಪಾಯ
ಕನ್ನಡ ಚಿತ್ರರಂಗದ ಲೆಜೆಂಡ್, ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಯಾವಾಗ ಎನ್ನುವುದು ವಿಷ್ಣು ಅಭಿಮಾನಿಗಳ ಪ್ರಶ್ನೆ. ಸುಮಾರು 10 ವರ್ಷಗಳಿಂದ ಗೊಂದಲದ ಗೂಡಾಗಿರುವ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯ ನಾಲ್ಕೇ ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಇಂದು ಬೆಳಗ್ಗೆ ಬಾರತಿ ವಿಷ್ಣುವರ್ಧನ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಸ್ಮಾರಕ ನಿರ್ಮಾಣ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಭಾರತಿ ಅವರ ಮನವಿಗೆ ಸ್ಪಂದಿಸಿದ ಸಿಎಂ ನಾಲ್ಕೇ ದಿನದಲ್ಲಿ ಅಡಿಪಾಯ ಹಾಕುವ ಭರವಸೆಯನ್ನು ನೀಡಿದ್ದಾರೆ. ಅಗತ್ಯವಾದ ಭೂಮಿ ಮತ್ತು ಆರ್ಥಿಕ ನೆರವು ಸೇರಿದಂತೆ ಸರ್ಕಾರದ ಕಡೆಯಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಬಿ ಎಸ್ ವೈ ಹೇಳಿದ್ದಾರಂತೆ.
ಅಲ್ಲದೆ ಈಗಾಗಲೆ ಸಿಎಂ ಸ್ಮಾರಕ ನಿರ್ಮಾಣಕಾರ್ಯಕ್ಕೆ ಎದುರಾಗಿರುವ ತೊಡಕುಗಳು, ಜಮೀನು ಹಸ್ತಾಂತರ, ಹಣಕಾಸಿನ ನೆರವು ಸೇರಿದಂತೆ ಸ್ಮಾರಕ ಕಾರ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡಿದ್ದಾರಂತೆ.

ಇದೇ ತಿಂಗಳು 30ಕ್ಕೆ ಡಾ.ವಿಷ್ಣುವರ್ಧನ್ ಅವರ ಪುಣ್ಯ ಸ್ಮರಣೆ. ಅದೇ ದಿನ ಸ್ಮಾರಕ ನಿರ್ಮಾಣಕ್ಕೆ ಚಾಲನೆ ಸಿಗಲಿದೆ. ಸಿಎಂ ಭೇಟಿಯಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ನಟಿ ಭಾರತಿ ವಿಷ್ಣುವರ್ಧನ್ "ಅಭಿಮಾನಿಗಳ ಬಹು ದಿನಗಳ ಬೇಡಿಕೆಯಂತೆ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಸಮ್ಮತಿಸಿದೆ. ಈಗಾಗಲೆ ಕೆಲಸಗಳು ನಡೆಯುತ್ತಿವೆ. 30ನೇ ತಾರೀಖು ಪುಣ್ಯತಿಥಿಯ ದಿನ ಅಡಿಪಾಯ ಹಾಕಲಿದ್ದಾರೆ. ತಕ್ಷಣ ಶುರುಮಾಡುವುದಾಗಿ ಸಿಎಂ ಹೇಳಿದ್ದಾರೆ. ಅಡಿಪಾಯ ಕಾರ್ಯಕ್ಕೆ ಸಿಎಂ ಬರುವುದಿಲ್ಲ. ಆದರೆ ಅಂದು ಮುಹೂರ್ತ ನಡೆಯುತ್ತೆ" ಎಂದು ಹೇಳಿದ್ದಾರೆ.


Click it and Unblock the Notifications











