ಮಿನುಗುತಾರೆ ಕಲ್ಪನಾ ಪ್ರೇತಾತ್ಮ! ವದಂತಿಯೋ..ವಾಸ್ತವವೋ?
ಅದು ಮೇ 12, 1979.....ಕನ್ನಡ ಚಿತ್ರರಂಗದಲ್ಲಿ ಪ್ರಕಾಶಮಾನವಾಗಿ ಮಿನುಗಿದ ತಾರೆ ಕಲ್ಪನಾ ಮರೆಯಾದ ದಿನ. ಆತ್ಮಹತ್ಯೆ ಮಾಡಿಕೊಂಡು ಮಿನುಗುತಾರೆ ಕಲ್ಪನಾ ಬಾರದ ಲೋಕಕ್ಕೆ ಪಯಣ ಮಾಡಿದ ದುರಂತ ದಿನ.
ಮಿನುಗುತಾರೆ ಕಲ್ಪನಾ ಇಹಲೋಕ ತ್ಯಜಿಸಿ 36 ವರ್ಷಗಳು ಕಳೆದಿವೆ. ಆದರೂ, ನಟಿ ಕಲ್ಪನಾ ಆತ್ಮಕ್ಕೆ ಮುಕ್ತಿ ಸಿಕ್ಕಿಲ್ವಾ? ಹೀಗೊಂದು ಅನುಮಾನ ಮೂಡಲು ಕಾರಣ ಗೋಟೂರು ಐಬಿಯಲ್ಲಿ ಸದ್ಯ ಹಬ್ಬಿರುವ ವದಂತಿ.
ಅಮಾವಾಸ್ಯೆ-ಹುಣ್ಣಿಮೆ ಬಂತೂಂದ್ರೆ ನಟಿ ಕಲ್ಪನಾ ಸಾವನ್ನಪ್ಪಿದ ಗೋಟೂರು ಐಬಿಯಲ್ಲಿ ಪ್ರೇತಾತ್ಮ ಸುಳಿದಾಡುತ್ತಂತೆ. ಕಲ್ಪನಾ ಧ್ವನಿಯನ್ನ ಅಲ್ಲಿನ ಸ್ಥಳೀಯರು ಕೇಳಿ ಬೆಚ್ಚಿಬಿದ್ದಿದ್ದಾರಂತೆ. ಗೆಜ್ಜೆ ಸಪ್ಪಳ ಕೇಳಿ ಸ್ಥಳೀಯ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರಂತೆ. ಮುಂದೆ ಓದಿ.....

36 ವರ್ಷಗಳಲ್ಲಿ ಇದೇ ಮೊದಲು?
ಕಲ್ಪನಾ ಪ್ರೇತಾತ್ಮ ಇನ್ನೂ ಗೋಟೂರು ಐಬಿಯಲ್ಲಿ ಸುಳಿದಾಡುತ್ತಿದೆ ಅನ್ನೋ ಸುದ್ದಿ ಇದೇ ಮೊದಲ ಬಾರಿ ಬ್ರೇಕಿಂಗ್ ನ್ಯೂಸ್ ಆಗಿಲ್ಲ. ಹಲವಾರು ವರ್ಷಗಳಿಂದ ಇಂತಹ ವದಂತಿ ಗೋಟೂರು ಸುತ್ತ ಮುತ್ತ ಹರಿದಾಡುತ್ತಿದೆ.

ಹೆದರಿಕೆ ಯಾಕೆ?
ನಟಿ ಕಲ್ಪನಾ ಆತ್ಮಹತ್ಯೆ ಮಾಡಿಕೊಂಡ ಗೋಟೂರು ಐಬಿಗೆ ಇಂದಿಗೂ ಜನರು ಭೇಟಿ ನೀಡುವುದು ಕಡಿಮೆ. ಒಂದ್ವೇಳೆ ಭೇಟಿ ಕೊಟ್ಟರೂ, ರಾತ್ರಿ ಹೊತ್ತು ಯಾರೂ ಉಳಿದುಕೊಳ್ಳುವುದಿಲ್ಲ. ಅದಕ್ಕೆ ಕಾರಣ ಕಲ್ಪನಾ ಪ್ರೇತಾತ್ಮ ಎನ್ನುತ್ತಾರೆ ಸ್ಥಳೀಯ ಗ್ರಾಮಸ್ಥರು.

ತೊಂದರೆ ಏನು?
ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನದಂದು ಪ್ರೇತಾತ್ಮ ಸುಳಿದಾಡಿದಂತೆ, ಗೆಜ್ಜೆ ಸದ್ದು ಕೇಳಿದಂತೆ, ಕಲ್ಪನಾ ಕೂಗಿದಂತೆ ಗ್ರಾಮಸ್ಥರಿಗೆ ಭಾಸವಾಗುತ್ತಂತೆ.

ಗರ್ಭಿಣಿ-ಮಕ್ಕಳು ಓಡಾಡೋಲ್ಲ!
ಹಿರಿಯ ಗ್ರಾಮಸ್ಥರ ಕಟ್ಟಪ್ಪಣೆಯಂತೆ ಗೋಟೂರು ಐಬಿ ಸುತ್ತ-ಮುತ್ತ ಗರ್ಭಿಣಿ ಮತ್ತು ಮಕ್ಕಳು ಓಡಾಡುವುದಿಲ್ಲ.

ಅಂದು ಏನಾಗಿತ್ತು?
ವರದಿಗಳ ಪ್ರಕಾರ, ಮೇ 12, 1979 ರಂದು ಕಲ್ಪನಾ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಗೋಟೂರು ನಿರೀಕ್ಷಣಾ ಮಂದಿರ (ಐಬಿ)ಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಅಲ್ಲಿಗೆ ಹೋಗಿದ್ದೇಕೆ?
ಗುಡಿಗೇರಿ ಬಸವರಾಜ್ ರವರ ನಾಟಕ ಕಂಪನಿಯಲ್ಲಿ ನಟಿಸುತ್ತಿದ್ದ ಕಲ್ಪನಾ ಗೋಟೂರು ನಿರೀಕ್ಷಣಾ ಮಂದಿರದಲ್ಲಿ ತಂಗಿದ್ದರು.

ಕಲಹ ಆತ್ಮಹತ್ಯೆಗೆ ಕಾರಣ
ವರದಿಗಳ ಪ್ರಕಾರ, ನಾಟಕದಲ್ಲಿ ಡೈಲಾಗ್ ತಪ್ಪಾಗಿ ಹೇಳಿ ಅವಮಾನ ಎದುರಿಸಿದ ಕಲ್ಪನಾ ಮತ್ತು ನಾಟಕದ ಕಂಪನಿ ಓನರ್ ಗುಡಿಗೇರಿ ಬಸವರಾಜ್ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಐಬಿಗೆ ತೆರಳಿದ್ದ ಕಲ್ಪನಾ ಆತ್ಮಹತ್ಯೆ ಮಾಡಿಕೊಂಡರು.

'ಅಭಿನೇತ್ರಿ' ಚಿತ್ರೀಕರಣ ನಡೆದದ್ದು ಇಲ್ಲೇ!
ಕಲ್ಪನಾ ಸಾವಿಗೆ ಶರಣಾದ ಗೋಟೂರು ಐಬಿಯಲ್ಲೇ ಪೂಜಾ ಗಾಂಧಿ ಅಭಿನಯದ 'ಅಭಿನೇತ್ರಿ' ಸಿನಿಮಾದ ಶೂಟಿಂಗ್ ನಡೆದಿರುವುದು. ಕ್ಲೈಮ್ಯಾಕ್ಸ್ ನಲ್ಲಿ ಬರುವ ಬಹುತೇಕ ಚಿತ್ರೀಕರಣ ಕಲ್ಪನಾ ಇದ್ದರು ಎನ್ನಲಾದ ರೂಮ್ ನಲ್ಲೇ ಮಾಡಲಾಗಿದೆ.

ಪೂಜಾ ಗಾಂಧಿ ಅನುಭವ?
ಕಲ್ಪನಾ ಜೀವನಚರಿತ್ರೆ ಎನ್ನಲಾದ 'ಅಭಿನೇತ್ರಿ' ಚಿತ್ರದಲ್ಲಿ ನಟಿಸಿ, ಕಲ್ಪನಾ ಆತ್ಮಹತ್ಯೆ ಮಾಡಿಕೊಂಡ ಗೋಟೂರು ಐಬಿಯಲ್ಲೇ ಚಿತ್ರೀಕರಣದಲ್ಲಿ ಪಾಲ್ಗೊಂಡ ನಟಿ ಪೂಜಾ ಗಾಂಧಿಗೆ ಪ್ರೇತಾತ್ಮದಂತಹ ವಿಚಿತ್ರ ಅನುಭವವಾದ ಸುದ್ದಿ ವರದಿ ಆಗಿಲ್ಲ.

ಇದೆಲ್ಲಾ ಬರೀ ವದಂತಿ!
ಇದ್ದಿಕ್ಕಿದ್ದಂತೆ ಕಲ್ಪನಾ ಪ್ರೇತಾತ್ಮ ಸುದ್ದಿ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿರುವುದರಿಂದ ಗೋಟೂರು ಐಬಿ ಅಧಿಕಾರಿಗಳು ಸ್ಪಷ್ಟಣೆ ನೀಡಿದ್ದಾರೆ. 'ಇದೆಲ್ಲಾ ವದಂತಿ. ಪ್ರೇತಾತ್ಮ ಎಲ್ಲಾ ಸುಳ್ಳು. ಇದಕ್ಕೆ ಯಾರೂ ಕಿವಿ ಕೊಡಬಾರದು' ಅಂತ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

ಹೆದರಿಕೆ ಇದೆ!
ದೆವ್ವ, ಪ್ರೇತಾತ್ಮ ಇದೆಯೋ ಇಲ್ವೋ ಗೊತ್ತಿಲ್ಲ. ಆದ್ರೆ, ಅಲ್ಲಿನ ಜನರು ಮಾತ್ರ ಇಂದಿಗೂ ಗೋಟೂರು ಐಬಿ ಸುತ್ತ-ಮುತ್ತ ಓಡಾಡಲು ಭಯ ಪಡುತ್ತಿರುವುದಂತೂ ಸತ್ಯ.


Click it and Unblock the Notifications











