ಮದ್ಯ, ಮಾಂಸ ನೈವೇದ್ಯ ಇಟ್ಟು ಖ್ಯಾತ ಜ್ಯೋತಿಷಿಯಿಂದ ನಿಶ್ವಿಕಾ ನಾಯ್ಡು ಪೂಜೆ; ವೀಡಿಯೋ ವೈರಲ್
ದೇವರನ್ನು, ಜ್ಯೋತಿಷಿಗಳನ್ನು, ಮಂತ್ರವಾದಿಗಳನ್ನು ಸಿನಿಮಾ ತಾರೆಯರು, ರಾಜಕಾರಣಿಗಳು ಹೆಚ್ಚು ನಂಬುತ್ತಾರೆ. ಹಣ ವ್ಯವಹಾರ ನಡೆಯುವ ಜಾಗದಲ್ಲಿ ಇಂತಹ ನಂಬಿಕೆಗಳು ಬಹಳ ಇರುತ್ತವೆ. ಸಂಖ್ಯಾಶಾಸ್ತ್ರ, ಜೋತಿಷ್ಯ ನಂಬಿ ಪೂಜೆಗಳನ್ನು ಮಾಡಿಸುವುದು, ಪರಿಹಾರ ಮಾರ್ಗೋಪಾಯಗಳನ್ನು ಹುಡುಕುತ್ತಿರುತ್ತಾರೆ.
ಕನ್ನಡ ಸಿನಿಮಾ ನಟಿ, ನಟಿಯರು ಪರಭಾಷಾ ಸಿನಿಮಾಗಳಲ್ಲಿ ಕೂಡ ಹೆಚ್ಚು ಹೆಚ್ಚು ನಟಿಸುತ್ತಿದ್ದಾರೆ. ಕನ್ನಡದಲ್ಲಿ ಸಕ್ಸಸ್ ಸಿಗುತ್ತಿದ್ದಂತೆ ಬೇರೆ ಭಾಷೆಗಳಿಂದ ಅವಕಾಶಗಳು ಬರಲು ಆರಂಭಿಸುತ್ತವೆ. ಅಳೆದು ತೂಗಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ರಶ್ಮಿಕಾ ಮಂದಣ್ಣ ಬಿಟ್ಟರೆ ಪರಭಾಷೆಗಳಲ್ಲಿ ಇತ್ತೀಚೆಗೆ ಕನ್ನಡ ನಟಿಯರು ಅಷ್ಟಾಗಿ ಸದ್ದು ಮಾಡಲಿಲ್ಲ. ಟಾಲಿವುಡ್ನಲ್ಲಿ ಶ್ರೀಲೀಲಾ ದಿಢೀರ್ ಕ್ರೇಜ್ ಸೃಷ್ಟಿಸಿಕೊಂಡಿದ್ದ ಶ್ರೀಲೀಲಾ ಇದೀಗ ಸೈಲೆಂಟ್ ಆಗಿಬಿಟ್ಟಿದ್ದಾರೆ.

ಇದೀಗ ಮತ್ತೊಬ್ಬ ನಟಿ ನಿಶ್ವಿಕಾ ನಾಯ್ಡು ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದಾರೆ. ತೆಲುಗು ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ಅದಕ್ಕೂ ಮುನ್ನ ಖ್ಯಾತ ಸೆಲೆಬ್ರೆಡಿ ಜ್ಯೋತಿಷಿ ವೇಣುಸ್ವಾಮಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ವಿಶೇಷ ಪೂಜೆ ಸಹ ಮಾಡಿಸಿದ್ದಾರೆ ಎಂದು ಟಾಲಿವುಡ್ನಲ್ಲಿ ಗುಲ್ಲಾಗಿದೆ. ಸಾಕಷ್ಟು ಸಿನಿಮಾ ತಾರೆಯರು ವೇಣುಸ್ವಾಮಿಯನ್ನು ನಂಬುತ್ತಾರೆ. ಯಶಸ್ಸಿಗಾಗಿ ತಾರಾದೇವಿ ಪೂಜೆ ರೀತಿಯ ಹಲವು ಪೂಜೆಗಳನ್ನು ಮಾಡಿಸುತ್ತಾರೆ.
ಸಿನಿಮಾ ತಾರೆಯರ ಬಗ್ಗೆ ಭವಿಷ್ಯ ಹೇಳಿ ಕ್ರೇಜ್ ಸೃಷ್ಟಿಸಿಕೊಂಡವರು ವೇಣುಸ್ವಾಮಿ. ಸಮಂತಾ- ನಾಗಚೈತನ್ಯಾ ಡಿವೋರ್ಸ್ ಪಡೆಯುತ್ತಾರೆ ಎಂದು ಮೊದ್ಲೆ ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ಅದು ಸತ್ಯವಾಗಿ ಆತನ ಮಾತುಗಳನ್ನು ಕೆಲವರು ನಂಬಲು ಆರಂಭಿಸಿದರು. ಬಳಿಕ ಸಾಕಷ್ಟು ತಾರೆಯರ ಬಗ್ಗೆ ಇದೇ ರೀತಿ ಭವಿಷ್ಯ ಹೇಳಲು ಆರಂಭಿಸಿದರು. ಇದೇ ಕಾರಣಕ್ಕೆ ಕೆಲವೊಮ್ಮೆ ಟ್ರೋಲ್ಗೆ ಗುರಿಯಾಗಿದ್ದು ಇದೆ. ತಾವು ಹೇಳಿದ ಭವಿಷ್ಯ ಸುಳ್ಳಾದಾಗ ಅದನ್ನು ಸಮರ್ಥಿಸಿಕೊಂಡಿದ್ದು ಇದೆ. ಇತ್ತೀಚೆಗೆ ಆಂಧ್ರ ಚುನಾವಣೆ ಫಲಿತಾಂಶ ಬಗ್ಗೆ ವೇಣುಸ್ವಾಮಿ ಭವಿಷ್ಯ ಸುಳ್ಳಾಗಿತ್ತು. ಬಳಿಕ ಈ ಬಗ್ಗೆ ಕ್ಷಮೆ ಕೇಳಿ ಇನ್ನು ಮುಂದೆ ಯಾವುದೇ ಮಾಧ್ಯಮಗಳ ಮುಂದೆ ತಾರೆಯರು, ರಾಜಕೀಯ ನಾಯಕರ ಬಗ್ಗೆ ಭವಿಷ್ಯ ಹೇಳಲ್ಲ ಎಂದು ಘೋಷಿಸಿದ್ದರು.

ಆಂಧ್ರ ಚುನಾವಣೆಯಲ್ಲಿ ಮತ್ತೆ ವೈಎಸ್ಆರ್ ಕಾಂಗ್ರೆಸ್ ಪಕ್ಷ ಗೆದ್ದು ಸರ್ಕಾರ ರಚಿಸುತ್ತದೆ. ಚಂದ್ರಬಾಬು ನಾಯ್ಡು ಮತ್ತೆ ಸಿಎಂ ಆಗುವುದು ಕಷ್ಟ. ಪವನ್ ಕಲ್ಯಾಣ್ ಗೆಲ್ಲುವುದು ಕಷ್ಟ ಎಂದು ವೇಣುಸ್ವಾಮಿ ಹೇಳಿದ್ದರು. ಆದರೆ ಫಲಿತಾಂಶ ಬಂದಾಗ ಎಲ್ಲಾ ಸುಳ್ಳಾಗಿತ್ತು. ಚಂದ್ರಬಾಬು ನಾಯ್ಡು ಮತ್ತೆ ಆಂಧ್ರ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಪವನ್ ಕಲ್ಯಾಣ್ ಡಿಸಿಎಂ ಆಗಿದ್ದಾರೆ. ಹಾಗಾಗಿ ವೇಣುಸ್ವಾಮಿ ವೀಡಿಯೋ ಮಾಡಿ ತಮ್ಮ ಭವಿಷ್ಯ ಸುಳ್ಳಾಯಿತು ಎಂದಿದ್ದರು. ಇದೀಗ ನಟಿ ನಿಶ್ವಿಕಾ ನಾಯ್ಡು ಹೋಗಿ ವೇಣುಸ್ವಾಮಿ ಭೇಟಿ ಮಾಡಿ ಪೂಜೆ ಮಾಡಿಸಿ ಆಶೀರ್ವಾದ ಪಡೆದಿದ್ದಾರೆ.
ರಶ್ಮಿಕಾ ಮಂದಣ್ಣ ಮಾತ್ರವಲ್ಲ ನಿಧಿ ಅಗರ್ವಾಲ್, ಡಿಂಪಲ್ ಹಯಾತಿ ಕೂಡ ವೇಣುಸ್ವಾಮಿ ಬಳಿ ರಾಜಶ್ಯಾಮಲ ಪೂಜೆ ಮಾಡಿಸಿದ್ದರು. ಆಂಧ್ರದ ಮಾಜಿ ಸಿಎಂ ಜಗನ್, ನಟ, ಶಾಸಕ ಬಾಲಕೃಷ್ಣ ಕೂಡ ಇಂತಹ ಪೂಜೆ ಮಾಡಿಸಿದ್ದಾರೆ ಎಂದು ವೇಣುಸ್ವಾಮಿ ಹೇಳಿಕೊಂಡಿದ್ದಾರೆ. ಕರ್ನಾಟಕದ ಮಾಜಿ ಸಚಿವ ಹೆಚ್. ಡಿ ರೇವಣ್ಣ ವರ್ಷದ ಹಿಂದೆ ಇದೇ ರೀತಿಯ ವಿಶೇಷ ಪೂಜೆ ಮಾಡಿಸಿದ್ದು ಸುದ್ದಿ ಆಗಿತ್ತು. ಇದೀಗ ನಿಶ್ವಿನಾ ನಾಯ್ಡು ತಮ್ಮ ಸಿನಿಕರಿಯರ್ ಯಶಸ್ಸಿಗಾಗಿ ಇದೇ ಮಾದರಿಯ ಪೂಜೆ ಮಾಡಿಸಿದ್ದಾರೆ, ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗುತ್ತಿದೆ. ವೇಣು ಸ್ವಾಮಿ ಮದ್ಯ, ಮಾಂಸ ನೈವೇದ್ಯವಾಗಿ ಇಟ್ಟು ಈ ವಾಮಾಚಾರ ಪದ್ಧತಿಯಲ್ಲಿ ಪೂಜೆ ಮಾಡಿಸುತ್ತಾರೆ. ಸದ್ಯ ನಿಶ್ವಿಕಾ ಸಹ ಪೂಜೆ ವೇಳೆ ಮದ್ಯ, ಮಾಂಸ ನೈವೇದ್ಯ ಇಟ್ಟಿರುವುದು ನೋಡಬಹುದು.
ಕನ್ನಡದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಿಶ್ವಿಕಾ ನಟಿಸಿದ್ದಾರೆ. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಕ್ಕಿಲ್ಲ. ಇತ್ತೀಚೆಗೆ 'ಕರಟಕ ದಮನಕ' ಚಿತ್ರದಲ್ಲಿ ಪ್ರಭುದೇವಾಗೆ ಜೋಡಿಯಾಗಿದ್ದರು. ಸಿನಿಮಾ ದೊಡ್ಡದಾಗಿ ಹಿಟ್ ಆಗದಿದ್ದರೂ 'ಹಿತ್ತಲಕ ಕರಿಬ್ಯಾಡ' ಸಾಂಗ್ ಮಾತ್ರ ಸೂಪರ್ ಹಿಟ್ ಆಗಿತ್ತು. ಪ್ರಭುದೇವಾ ಜೊತೆ ಬಿಂದಾಸ್ ಆಗಿ ಕುಣಿದು ರಂಗೇರಿಸಿದ್ದರು. ಇನ್ನು ಕಿರುತೆರೆಯ 'ಮಹಾನಟಿ' ರಿಯಾಲಿಟಿ ಶೋ ತೀರ್ಪುಗಾರರಾಗಿ ಕೂಡ ನಿಶ್ವಿಕಾ ಮಿಂಚುತ್ತಿದ್ದಾರೆ. ಇದೆಲ್ಲದರ ನಡುವೆ ಇದೀಗ ಟಾಲಿವುಡ್ ಪ್ರವೇಶಿಸುತ್ತಿದ್ದಾರೆ.


Click it and Unblock the Notifications









