''ರಾಜನನ್ನು ರಾಜನಂತೆಯೇ ನೋಡಲು ನನಗೆ ಇಷ್ಟ'', ದಚ್ಚು ನೋಡಿ ರಚ್ಚು ಕಣ್ಣೀರು..!
ದರ್ಶನ್ ಸದ್ಯಕ್ಕೆ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಯಾವತ್ತು ಹೊರ ಬರುತ್ತಾರೆ ಎನ್ನುವುದು ಆ ಕೃಷ್ಣ ಪರಮಾತ್ಮನೆ ಬಲ್ಲ. ಆದರೇನಂತೆ, ನಾವು ಆ ಕೃಷ್ಣನ ಜನ್ಮಸ್ಥಾನಕ್ಕೆ ತೆರಳಿ ದರ್ಶನ್ ದರ್ಶನವನ್ನು ಪಡೆಯುತ್ತೇವೆ ಎಂದು ಕನ್ನಡ ಚಿತ್ರರಂಗದ ಅನೇಕರು ಪರಪ್ಪನ ಅಗ್ರಹಾರದತ್ತ ಪರೇಡ್ ನಡೆಸಿದ್ಧಾರೆ. ಈ ಸಾಲಿಗೆ ಈಗ ರಚಿತಾ ರಾಮ್ ಕೂಡ ಸೇರಿಕೊಂಡಿದ್ದಾರೆ.
ಹೌದು, ನಿನ್ನೆ-ಮೊನ್ನೆ ಬಂದವರೆಲ್ಲ ಬಾಸು ಇಲ್ಲದೆ ನಮ್ಮ ತ್ರಾಸ್ ಆಗ್ತಿದೆ ಎಂದು, ಒಬ್ಬರಾದ ಮೇಲೆ ಒಬ್ಬರು ಪರಪ್ಪನ ಅಗ್ರಹಾರಕ್ಕೆ ತೆರೆಳಿ ಅಡ್ಡಡ್ಡ ಬಿದ್ದು ಬರುತ್ತಿದ್ದಾರೆ. ಇನ್ನೂ ಕೆಲವರು
ತಮ್ಮಿಂದ ಸಹಾಯ ಪಡೆದು ಕಷ್ಟಕಾಲದಲ್ಲಿ ನೋಡಲು ಬರಲಿಲ್ಲ ಎಂದು ದರ್ಶನ್ ಅಂದುಕೊಂಡರೆ ಎಂಬ ಭಯದಲ್ಲಿ ದರ್ಶನ ಪಡೆದು ಬರುತ್ತಿದ್ದಾರೆ. ಮತ್ತೂ ಕೆಲವರು ದರ್ಶನ್ ಹೊರ ಬಂದ ಮೇಲೆ ಯಾರೆಲ್ಲ ಬಂದಿಲ್ಲ ಅವರ ಹೆಸರನ್ನೆಲ್ಲ ಪಟ್ಟಿ ಮಾಡಿಕೊಂಡು ತಿನ್ನುವ ಅನ್ನಕ್ಕೆ ಕಲ್ಲು ಹಾಕಿದರೆ ಏನು ಗತಿ ಎಂದು ಹೆದರಿಕೊಂಡು ಕೂಡ ಹೋಗಿ ಬರುವುದನ್ನು ಮಾಡುತ್ತಿದ್ದಾರೆ. ಹೀಗಿರುವಾಗ ಕಿರುತೆರೆಯಲ್ಲಿ ಸದ್ದು ಮಾಡುತ್ತಲೇ ಒಮ್ಮಿಂದೊಮ್ಮೆಲೇ ದರ್ಶನ್ ಗೆ ನಾಯಕಿಯಾದ ರಚಿತಾ ರಾಮ್ ಹೇಗೆ ತಾನೇ ಸುಮ್ಮನೆ ಕೂರಲು ಸಾಧ್ಯ..?

ಇನ್ನೂ ದರ್ಶನ್ ಜೈಲಿಗೆ ತೆರಳಿ ಎರಡು ತಿಂಗಳಾಗಿವೆ. ಈ ಎರಡು ತಿಂಗಳಿನಲ್ಲಿ ಅನೇಕ ವಿದ್ಯಮಾನಗಳು ನಡೆದಿವೆ. ರಚಿತಾ ರಾಮ್ ಅಭಿನಯದ ಸಂಜು ವೆಡ್ಸ್ ಗೀತಾ ಚಿತ್ರದ ಚಿತ್ರೀಕರಣ ಕೂಡ ಮುಗಿದಿದೆ. ಆದರೆ, ದರ್ಶನ್ ಗೆ ಮಾತ್ರ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಬಹುಷಃ ಹೀಗಾಗಿಯೇ ಏನೋ ಇನ್ನೂ ಕಾಯುವುದರಲ್ಲಿ ಅರ್ಥ ಇಲ್ಲವೆಂದು ತೀರ್ಮಾನಕ್ಕೆ ಬಂದಂತೆ ಇರುವ ರಚಿತಾ ರಾಮ್ ಸೀದಾ ಜೈಲಿಗೆ ತೆರಳಿ ತಮ್ಮ ಗುರುವಿನ ದರ್ಶನವನ್ನು ಪಡೆದು ಪುನೀತರಾಗಿದ್ಧಾರೆ.
ಅಂದ್ಹಾಗೇ ರಚಿತಾ ರಾಮ್ ಇವತ್ತು ದರ್ಶನ್ ದರ್ಶನಕ್ಕೆ ಬರುವ ಮುನ್ನ, ಪೂರ್ಣಪ್ರಜ್ಞ ಲೇಔಟ್ ಉತ್ತರಹಳ್ಳಿ ಕೆಂಗೇರಿ ರೋಡ್ ಬಳಿ ಇರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿದ್ದರು.
ರಾಯರ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು. ಅಲ್ಲಿಂದ ನೇರವಾಗಿ ಮೂರು ಬ್ಯಾಗ್ ಸಮೇತ ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ ರಚಿತಾ ರಾಮ್.

ಇನ್ನೂ ಖುದ್ದು ರಚಿತಾ ರಾಮ್ ಹಿಂದೆ ಹೇಳಿದಂತೆ ದರ್ಶನ್ ಅವರ ಪಾಲಿಗೆ ಗುರು. ಸಹಜವಾಗಿ ಗುರುಸ್ಥಾನದಲ್ಲಿರುವ ವ್ಯಕ್ತಿಯನ್ನು ಯಾರು ಹೀಗೆ ಕಂಬಿ ಹಿಂದೆ ನೋಡಲು ಇಷ್ಟಪಡಲ್ಲ. ರಚಿತಾ ರಾಮ್ ಅವರಿಗೆ ಕೂಡ ಇಷ್ಟ ಇರಲಿಲ್ಲ. ಯಾಕೆಂದರೆ ರಾಜನನ್ನು ರಾಜನಂತೆಯೇ ನೋಡುವ ಆಸೆ ಇವರದ್ದು. ಹೀಗಾಗಿಯೇ ಇಲ್ಲಿಯವರೆಗೆ ಜೈಲಿಗೆ ಬಾರದ ರಚಿತಾ ಇಂದು ಮಾಧ್ಯಮದವರ ಮುಂದೆ ತಮ್ಮ ಮನದ ನೋವನ್ನು ಹಂಚಿಕೊಂಡಿದ್ದಾರೆ.
ದರ್ಶನ್ ಅವರನ್ನು ನೋಡಿ ನಾನು ಭಾವುಕಳಾದೆ ಆಗ ಅವರೇ ನನ್ನನ್ನೂ ಸಮಾಧಾನ ಮಾಡಿದರು ಅಂದಿದ್ಧಾರೆ. ನಾವು ಕಾಯುತ್ತಿದ್ದೇವೆ ಬೇಗ ಬನ್ನಿ ಎಂದು ಹೇಳಿದೆ ಅದಕ್ಕೆ ಅವರು ಕಾನೂನಿನ ಮೇಲೆ ನನಗೆ ನಂಬಿಕೆ ಇದೆ ಆದಷ್ಟು ಬೇಗ ನಾನು ಹೊರ ಬರ್ತಿನಿ ಎಂದಿದ್ದಾರೆ ಎಂದು ರಚಿತಾ ರಾಮ್ ಹೇಳಿದ್ದಾರೆ. ನಾನು ಅವರ ಅಭಿಮಾನಿಗಳಂತೆ ಅವರ ಅಭಿಮಾನಿ, ನನ್ನ ಮೇಲೆ ನನ್ನ ಕುಟುಂಬದ ಮೇಲೆ ಅವರ ಋಣ ಇದೆ, ಅವತ್ತು ಬುಲ್ ಬುಲ್ ಚಿತ್ರಕ್ಕೆ ದರ್ಶನ್ ಸರ್ ನನ್ನ ಆಯ್ಕೆ ಮಾಡದೇ ಇದ್ದಿದ್ದರೆ ನಾನು ಇವತ್ತು ಬಿಂದ್ಯಾ ರಾಮ್ ನಿಂದ ರಚಿತಾ ರಾಮ್ ಆಗುತ್ತಿರಲಿಲ್ಲವೇನೋ, ಇಷ್ಟು ಎತ್ತರಕ್ಕೆ ಬೆಳೆಯುತ್ತಿರಲಿಲ್ಲವೇನೋ ಎಂದು ಹೇಳಿದ್ದಾರೆ ರಚಿತಾ ರಾಮ್.

ಉಳಿದಂತೆ ತನ್ನ ಖಾಸಗಿ ಬದುಕನ್ನು ಗಲೀಜು ಮಾಡಿಕೊಂಡು, ಜನಪ್ರಿಯತೆಯ ಅಮಲಿನಲ್ಲಿ ದರ್ಶನ್ ಪರಪ್ಪನ ಅಗ್ರಹಾರದ ಪಾಲಾದ ದರ್ಶನ್ ನ್ಯಾಯಾಂಗ ಬಂಧನವನ್ನು ಆಗಸ್ಟ್ 28ರವರೆಗೆ ವಿಸ್ತರಿಸಲಾಗಿದೆ. ಕಳೆದ ವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ನೀಡಿದೆ.


Click it and Unblock the Notifications











