ದೊಡ್ಡವರೆಲ್ಲ ಜಾಣರಲ್ಲ, ಕಮಲ್ ಹಾಸನ್ ವಿರುದ್ಧ ಕಿಡಿ ಕಾರಿದ ರಚಿತಾ ರಾಮ್..!
ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇನ್ನು ಮಾತು ಕೆಲವೊಮ್ಮೆ ಪವಾಡವನ್ನು ಮಾಡಬಹುದು. ಬದುಕಿನಲ್ಲಿ ನಿರಾಶೆಯಾದವರಿಗೆ ಭರವಸೆಯನ್ನು ನೀಡಬಹುದು. ಬದುಕಿನ ಜಂಜಾಟದಲ್ಲಿ ನರಳುವವರಿಗೆ ಹೊಸ ಜೀವನವನ್ನು ಕೂಡ ನೀಡಬಲ್ಲದು.
ಆದರೆ ಈಗೀಗ ಈ ಮಾತು ಮನೆಯನ್ನು ಕೆಡಿಸುತ್ತಿದೆ. ಮನಸನ್ನು ಕೂಡ ಕೆಡಿಸುತ್ತಿದೆ. ಇದಕ್ಕೆ ಕಮಲ್ ಹಾಸನ್ ಸದ್ಯದ ಉದಾಹರಣೆ. ಹೌದು, ಸಕಲ ಕಲಾ ವಲ್ಲಭ, ವಿಶ್ವರೂಪಿ, ಉಳಗನಾಯಗನ್ ಮುಂತಾದ ಬಿರುದುಗಳನ್ನು ಪಡೆದಿರುವವರು ಕಮಲ ಹಾಸನ್. ಅತ್ಯದ್ಭುತ ಅನ್ನಿಸುವ ಸಿನಿಮಾಗಳನ್ನು ನೀಡಿ ಭಾರತೀಯ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟಕ್ಕೆ ಕರೆದೊಯ್ದವರಲ್ಲಿ ಇವರು ಕೂಡ ಒಬ್ಬರು.

ಇಂಥಾ ಕಮಲ್ ಹಾಸನ್ ಸುಮ್ಮನೆ ಇರಲಾರದೇ ಇರುವೆ ಬಿಟ್ಟುಕೊಂಡಿದ್ದಾರೆ. ಕನ್ನಡದ ಹುಟ್ಟಿಗೆ ತಮಿಳು ಕಾರಣ ಎಂದು ಹೇಳುವ ಮೂಲಕ ಕನ್ನಡಿಗರನ್ನು ಕೆರಳಿಸಿದ್ದಾರೆ. ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಮಲ್ ಹಾಸನ್ ಕ್ಷಮೆ ಕೇಳಬೇಕೆಂದು ಕನ್ನಡಿಗರೆಲ್ಲ ಒಕ್ಕೂರಲಿನಿಂದ ಆಗ್ರಹಿಸುತ್ತಿದ್ದಾರೆ. ಕನ್ನಡದ ಅನೇಕ ಕಲಾವಿದರು ಕೂಡ ಕ್ಷಮೆ ಕೇಳಿ ಕಮಲ್ ಎನ್ನುತ್ತಿದ್ದಾರೆ.
ಆದರೆ, ಕಮಲ್ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಬದಲಿಗೆ ನಾನು ತಪ್ಪು ಮಾಡಿಲ್ಲ, ನಾನು ಹೆದರಲ್ಲ, ಬೆದರಲ್ಲ, ಕ್ಷಮೆ ಯಾವುದೇ ಕಾರಣಕ್ಕೂ ಕೇಳುವುದಿಲ್ಲ ಎಂದು ಮೊಂಡ ವಾದವನ್ನು ಮಾಡುತ್ತಿದ್ದಾರೆ. ಇದರ ನಡುವೆ ಇದೀಗ ಕಮಲ್ ಹಾಸನ್ ವಿರುದ್ಧ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಕಿಡಿ ಕಾರಿದ್ದಾರೆ. ದೊಡ್ಡವರೆಲ್ಲ ಜಾಣರಲ್ಲ ಹಾಡಿನ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ರಚಿತಾ ರಾಮ್, ಕುವೆಂಪು ಅವರ ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು.. ಹಾಡಿನ ಮೂಲಕ ಮಾತು ಆರಂಭಿಸಿದ್ದಾರೆ. ಮುಂದುವರೆದು ''ನಾನು ಯಾಕೆ ಈ ಹಾಡು ಹೇಳುತ್ತಿದ್ದೇನೆ ಎಂಬುದು ನಿಮ್ಮೆಲ್ಲರಿಗೂ ಗೊತ್ತಾಗಿದೆ. ಕನ್ನಡ, ಕರ್ನಾಟಕ ಅಂತ ಬಂದರೆ ಪ್ರತಿಯೊಬ್ಬ ಕನ್ನಡಿಗನಿಗೂ ಇದು ಒಂದು ಎಮೋಷನ್'' ಎಂದಿದ್ದಾರೆ.
''ನಮ್ಮ ಕನ್ನಡ ಭಾಷೆಯ ಬಗ್ಗೆ ಯಾರಾದರೂ ಟೀಕೆ ಮಾಡುತ್ತಿದ್ದಾರೆ ಎಂದರೆ ನಾವು ಸುಮ್ಮನೆ ಕೂರೋಕೆ ಆಗಲ್ಲ. ನಾವು ಕನ್ನಡದವರು ಎಷ್ಟು ವಿಶಾಲ ಹೃದಯದವರು ಎಂದರೆ ಎಲ್ಲ ಭಾಷೆಯ ಸಿನಿಮಾ ನೋಡುತ್ತೇವೆ, ಪ್ರತಿ ಭಾಷೆಯ ಸಿನಿಮಾ ಹಾಡುಗಳನ್ನು ಕೇಳುತ್ತೇವೆ. ಕಲಾವಿದರಿಗೆ ಬೆಂಬಲ ಕೊಡುತ್ತೇವೆ. ಆದರೆ ನಮ್ಮ ಭಾಷೆ ಬಗ್ಗೆ ಯಾರಾದರೂ ಮಾತನಾಡುತ್ತಿದ್ದಾರೆ ಎಂದಾಗ ನಾವು ಯಾಕೆ ಧ್ವನಿ ಎತ್ತಬಾರದು'' ಎಂಬ ಪ್ರಶ್ನೆಯನ್ನು ರಚಿತಾ ರಾಮ್ ಕೇಳಿದ್ದಾರೆ.
''ನಾವು ಯಾವ ಭಾಷೆಯ ಕುರಿತು ಕೆಟ್ಟದಾಗಿ ಮಾತನಾಡುತ್ತಿಲ್ಲ. ನಾವು ಎಲ್ಲ ಭಾಷೆಯನ್ನೂ ಗೌರವಿಸುತ್ತಾ ಬಂದಿದ್ದೇವೆ, ಆದರೆ ಕನ್ನಡದ ಬಗ್ಗೆ ಯಾರಾದರೂ ಕೆಟ್ಟದಾಗಿ ಮಾತನಾಡಿದರೆ ನಾವು ಎದ್ದು ನಿಲ್ಲಬೇಕು. ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ ಎಂಬ ಕನ್ನಡದ ಹಾಡು ಕೂಡ ನನಗೆ ನೆನಪಿಗೆ ಬರುತ್ತಿದೆ. ಚಿಕ್ಕವರು ತಪ್ಪು ಮಾಡಿದರೆ ಕ್ಷಮೆ ಕೇಳುವ ತನಕ ಬಿಡಲ್ಲ. ಆದರೆ ದೊಡ್ಡವರು ತಪ್ಪು ಮಾಡಿದರೆ ? ತಪ್ಪು ಮಾಡಿದ ಬಳಿಕ ಕ್ಷಮೆ ಕೇಳುವುದರಲ್ಲಿ ತಪ್ಪೇನು'' ಎಂದು ರಚಿತಾ ರಾಮ್ ಕೇಳಿದ್ದಾರೆ.
ಇನ್ನು ''ಕನ್ನಡವನ್ನು ಸರಿಯಾಗಿ ಮಾತನಾಡದೇ ಇರುವವರಿಗೆ ಹೀಗಲ್ಲ ಹಾಗೆ ಅಂತ ನಾವು ಹೇಳುತ್ತೇವೆ, ಕಲಿಸುತ್ತೇವೆ. ಆದರೆ ಕನ್ನಡ ಭಾಷೆಯ ಬಗ್ಗೆಯೇ ತಪ್ಪಾಗಿ ಮಾತನಾಡುವವರಿಗೆ ಏನಂತ ಹೇಳೋಣ..? ನಾವೆಲ್ಲ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಿಸುತ್ತೇವೆ. ಈಗ ಪ್ರತಿಯೊಬ್ಬ ಕನ್ನಡಿಗರು ನಮ್ಮ ಭಾಷೆ ಮೇಲೆ ಇರುವ ಪ್ರೀತಿ, ಗೌರವವನ್ನು ತಿಳಿಸುವ ಸಮಯ ಬಂದಿದೆ ಎಂದು ರಚಿತಾ ರಾಮ್ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











