Ramya reaction: ಸುಳ್ಳು ಸುದ್ದಿ ಬಳಿಕ ರಮ್ಯಾ ಪ್ರತಿಕ್ರಿಯೆ, ವಿದೇಶದಲ್ಲಿನ ಫೋಟೋ ಹಂಚಿಕೊಂಡ ನಟಿ
ಪ್ರತಿನಿತ್ಯದಂತೆ ನಡೆಯುತ್ತಿದ್ದ ಕೆಲಸಗಳು ಒಂದು ಕ್ಷಣ ನಿಂತ ಹಾಗೆ... ಒಮ್ಮೆಲೇ ಯಾವುದೋ ಆಸಾಧ್ಯವಾದ ನೋವು ಎದೆಯಲ್ಲಿ..ಕಣ್ಣಲ್ಲಿ ಕಂಬನಿ ತುಂಬಿದ ಕೋಟ್ಯಾಂತರ ಕಣ್ಣುಗಳು... ಒಂದು ಹದಿನೈದು ನಿಮಿಷ ಉಸಿರು ನಿಂತಂತೆ ಆಗಿದ್ದು ಕರುನಾಡಿನ ಜನರಿಗೆ. ನಿಜ.. ಇದಕ್ಕೆ ಕಾರಣ ಮೋಹಕ ತಾರೆ ನಟಿ ರಮ್ಯಾ ಅವರ ಕುರಿತು ಹರಡಿದ ಒಂದು ಕೆಟ್ಟ ಸುಳ್ಳು ಸುದ್ದಿ.
ಸುದ್ದಿ ಫೇಕ್ ಎಂದು ತಿಳಿಯುವವರೆಗೂ ಕರುನಾಡು ಸ್ತಬ್ಧವಾದಂತಾಗಿತ್ತು. ಈಗ ನಟಿ ರಮ್ಯಾ ಖುದ್ದು ಒಂದು ಸ್ಟೇಟಸ್ ಹಾಕುವ ಮೂಲಕ ಎಲ್ಲಾ ವಿಷಯಗಳಿಗೂ ತೆರೆ ಎಳೆದಿದ್ದಾರೆ. ವಿದೇಶ ಪ್ರವಾಸದಲ್ಲಿರುವ ದಿವ್ಯ ಸ್ಪಂದನಾ ಒಂದು ಕಿಟಕಿಯ ಫೋಟೋ ಹಂಚಿಕೊಂಡಿದ್ದಾರೆ.

ಸ್ಟೇಟಸ್ ಹಂಚಿಕೊಂಡ ನಟಿ ರಮ್ಯಾ
ಸಾವಿನ ಸುಳ್ಳು ಸುದ್ದಿಗಳಿಗೆ ಮಾತಿನ ಮೂಲಕ ಪ್ರತಿಕ್ರಿಯೆ ಕೊಡದ ನಟಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಕಿಟಕಿಯ ಚಿತ್ರ ಇದಾಗಿದ್ದು, ಇದರ ಮೂಲಕ ಸುಂದರ ಪ್ರಕೃತಿ ಕಾಣುತ್ತಿದೆ. ಗಿಡ, ಬೆಟ್ಟ, ಸರೋವರಗಳ ಚಿತ್ರ ಹಂಚಿಕೊಂಡು ಮಾತಾಡದೇ ಮೌನದಲ್ಲೇ ಉತ್ತರ ನೀಡಿದ್ದಾರೆ.
ಅದೇನೇ ಇದ್ದರೂ, ಒಂದು ಕ್ಷಣ ಜನರನ್ನು ಆತಂಕಕ್ಕೆ ನೂಕ್ಕಿದ್ದ ವಿಷಯ ಸರಾಗವಾಗಿ ಬಗೆಹರಿದಿದೆ. ನಟಿ ರಮ್ಯಾ ಆರೋಗ್ಯವಾಗಿದ್ದು. ಪ್ರಸ್ತುತ ಜಿನೀವಾದಲ್ಲಿ ಪ್ರವಾಸ ಏಂಜಾಯ್ ಮಾಡುತ್ತಿದ್ದಾರೆ. ಈ ಬಗ್ಗೆ ಪತ್ರಕರ್ತೆ ಚಿತ್ರಾ ಸುಬ್ರಮಣ್ಯಂ ಅವರು ಜಿನೀವಾದಲ್ಲಿ ರಮ್ಯಾ ಅವರ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.
ಕೆಲವು ಮಾಧ್ಯಮಗಳು ಮತ್ತು ಟ್ವಿಟರ್ ಹ್ಯಾಂಡಲ್ಗಳಲ್ಲಿ ಆರಂಭದಲ್ಲಿ ದಿವ್ಯಾ ಸ್ಪಂದನಾ ಅವರ ಸಾವಿನ ಬಗ್ಗೆ ವದಂತಿ ಹರಡಿದ್ದವು. ತಕ್ಷಣ ಮೋಹಲ ತಾರೆಯ ಆಪ್ತ ಸ್ನೇಹಿತರು ಮತ್ತು ಪತ್ರಕರ್ತರು ಸುಳ್ಳು ಮಾಹಿತಿ ಎಂದು ಟ್ವಿಟರ್ನಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಸುಳ್ಳು ಸುದ್ದಿ ಹರಡಿದ್ದು ಹೇಗೆ?
ತಮಿಳು ಪಿಆರ್ಓ ಒಬ್ಬರು ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ ಹೊಂದಿದ್ದ ಹಳೆಯ ಸುದ್ದಿಯನ್ನು ತಡವಾಗಿ ನೋಡಿ ಸ್ಪಂದನಾ ಅವರನ್ನೇ ದಿವ್ಯಾ ಸ್ಪಂದನಾ ಎಂದು ತಿಳಿದುಕೊಂಡಿದ್ದಾರೆ. ಇದೇ ಕನ್ಫ್ಯೂಸ್ನಲ್ಲಿ ಟ್ವೀಟ್ ಮಾಡಿದ್ದಾರೆ. ಈಗ ಪಿಆರ್ಓ ಆ ಟ್ವೀಟ್ ಅಳಿಸಿ ಹಾಕಿದ್ದು, ಎಲ್ಲವೂ ಸುಗಮವಾಗಿದೆ." ಎಂದು ರಮ್ಯಾ ಗೆಳತಿ ಸುನೈನಾ ಸುರೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮೋಹಕ ತಾರೆ ರಮ್ಯಾ
ದಿವ್ಯಾ ಸ್ಪಂದನಾ/ ರಮ್ಯಾ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಪ್ರಸಿದ್ಧ ನಟಿ. ಪುನೀತ್ ರಾಜ್ಕುಮಾರ್ ಅವರ 2003 ರ ಅಭಿ ಚಿತ್ರದ ಮೂಲಕ ರಮ್ಯಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2004 ರ ಕುತ್ತು ಚಿತ್ರದ ಮೂಲಕ ತಮಿಳು ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದಾರೆ. ಆಕಾಶ್, ಗೌರಮ್ಮ, ಅಮೃತಧಾರೆ, ಅರಸು, ಪೊಲ್ಲಾಧವನ್, ಮುಸ್ಸಂಜೆಮಾತು, ಸಂಜು ವೆಡ್ಸ್ ಗೀತಾ, ಆರ್ಯ, ದತ್ತ, ಲಕ್ಕಿ, ಇತ್ತೀಚಿನ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರದ್ದು.
ಗೌತಮ್ ವಾಸುದೇವ್ ಮೆನನ್ ಅವರ ವಾರಣಂ ಆಯಿರಂನಲ್ಲಿನ ಅಭಿನಯಕ್ಕಾಗಿ ರಮ್ಯಾ ತಮಿಳಿನಲ್ಲಿ ಹೆಚ್ಚು ಪ್ರಸಿದ್ಧರಾದರು. ಸದ್ಯ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಕೂಡ ಕನ್ನಡದ ನಟಿಯರಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿ ರಮ್ಯಾ. ರಾಜಕಾರಣಿಯಾಗಿಯೂ ಮಂಡ್ಯ ಸಂಸದೆಯಾಗಿ ಜನರಿಗೆ ಪರಿಚಿತರಾಗಿದ್ದಾರೆ.


Click it and Unblock the Notifications











