ಧರ್ಮಸ್ಥಳ ಕೇಸ್ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ; ಸೂಕ್ತ ತನಿಖೆಗೆ ಆಗ್ರಹ
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು ಹಾಗೂ ಶವಗಳನ್ನ ಹೂತು ಹಾಕಲಾಗಿದೆ ಎನ್ನುವ ಪ್ರಕರಣ ಇದೀಗ ಭಾರೀ ಚರ್ಚೆ ಹುಟ್ಟು ಹಾಕಿದೆ. ಇದೆಲ್ಲದರ ನಡುವೆ 22 ವರ್ಷಗಳ ಹಿಂದೆ ತಮ್ಮ ಮಗಳು ನಿಗೂಢವಾಗಿ ಕಾಣೆಯಾಗಿದ್ದಾಳೆ ಎಂದು 60 ವರ್ಷದ ಮಹಿಳೆ ಸುಜಾತ ಎಂಬುವವರು ದೂರು ನೀಡಿರುವುದು ಸಂಚಲನ ಸೃಷ್ಟಿಸಿದೆ.
ಸದ್ಯ ಧರ್ಮಸ್ಥಳ ಕೇಸ್ ಬಗ್ಗೆ ಕನ್ನಡ ಸಿನಿಮಾ ತಾರೆಯರು ಒಬ್ಬೊಬ್ಬರಾಗಿ ಮಾತನಾಡಲು ಆರಂಭಿಸಿದ್ದಾರೆ. ಬಹುಭಾಷಾ ನಟಿ ಪ್ರಕಾಶ್ ರಾಜ್ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ. ನಟಿ ರಮ್ಯಾ ಪ್ರತಿಕ್ರಿಯಿಸಿ ಸುಜಾತ ಅವರ ಆರೋಪ ಪ್ರಕರಣದ ಸತ್ಯ ಗೊತ್ತಾಗಬೇಕು ಎಂದು ಕೇಳಿದ್ದಾರೆ. ನಟ, ಬಿಗ್ಬಾಸ್ ಸ್ಪರ್ಧಿ ರಾಕೇಶ್ ಅಡಿಗ ಕೂಡ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ಧರ್ಮಸ್ಥಳದಲ್ಲಿ ಸಾಕಷ್ಟು ವರ್ಷಗಳಿಂದ ಹಲವು ಅಪರಾಧ ಕೃತ್ಯಗಳು ನಡೆದಿದೆ. ನನಗೆ ಬೆದರಿಕೆ ಒಡ್ಡಿ ಶವಗಳನ್ನು ಹೂತು ಹಾಕಿಸಿದ್ದಾರೆ. ನನಗೆ ಈಗ ಪಾಪ ಪ್ರಜ್ಞೆ ಕಾಡುತ್ತಿದೆ. ನನಗೆ ನನ್ನ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಿದರೆ ನಾನು ಆ ಶವಗಳನ್ನು ಹೂತಿರುವ ಜಾಗವನ್ನು ತೋರಿಸುತ್ತೇನೆ ಎಂದು ದೂರುದಾರ ವ್ಯಕ್ತಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಸುಜಾತ ಎಂಬ ಮಹಿಳೆ ತಮ್ಮ ಮಗಳ ಕಳೇಬರ ಸಿಗಬಹುದು. ಸಿಕ್ಕರೆ ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ ನಡೆಸುತ್ತೇನೆ ಎಂದು ಸುಜಾತ ಹೇಳುತ್ತಿದ್ದಾರೆ. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಅವರು ಮನವಿ ಸಲ್ಲಿಸಿದ್ದಾರೆ.
22 ವರ್ಷಗಳ ಹಿಂದೆ ನನ್ನ ಮಗಳು ಸ್ನೇಹಿತೆಯರ ಜೊತೆ ಧರ್ಮಸ್ಥಳಕ್ಕೆ ಬಂದಿದ್ದಳು. ಬಳಿಕ ನಾಪತ್ತೆ ಆಗಿದ್ದಳು. ನಾನು ಈ ಸಂಬಂಧ ದೂರು ದಾಖಲಿಸಲು ಹೋದಾಗ ಬೆಳ್ತಂಗಡಿ ಪೊಲೀಸರು ಸ್ವೀಕರಿಸಲಿಲ್ಲ. ಬಳಿಕ ನಾಲ್ವರು ಬಂದು ನಿನ್ನ ಮಗಳನ್ನು ತೋರಿಸುತ್ತೇವೆ ಬಾ ಎಂದು ಕರೆದುಕೊಂಡು ಹೋಗಿದ್ದರು. ರೂಮಿನಲ್ಲಿ ಕೂಡಿ ಹಾಕಿ ಥಳಿಸಿದ್ದರು. ಬಳಿಕ ನಾನು ಕೋಮಾಗೆ ಹೋಗಿದ್ದೆ. ನಂತರ ಬಂದು ಮಗಳಿಗಾಗಿ ಹುಡುಕಾಟ ನಡೆಸಿ ಸುಮ್ಮನಾಗಿದ್ದೆ ಎಂದಿದ್ದಾರೆ.

ಸುಜಾತಾ ಮಾಧ್ಯಮಗಳ ಜೊತೆ ಮಾತನಾಡಿರುವ ವೀಡಿಯೋವನ್ನು ನಟಿ ರಮ್ಯಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. "ಈ ಘಟನೆ ಬಗ್ಗೆ ತಿಳಿದು ಆಘಾತವಾಯಿತು. ಪಾರದರ್ಶಕ ತನಿಖೆ ನಡೆಯಲಿ. ಸತ್ಯ ಏನು ಎನ್ನುವುದು ಗೊತ್ತಾಗಬೇಕು" ಎಂದು ರಮ್ಯಾ ಬರೆದುಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ "ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ವರದಿ ಆಧರಿಸಿ ಅಗತ್ಯಬಿದ್ದರೆ ಎಸ್ಐಟಿ ರಚಿಸಲು ನಿರ್ಧರಿಸುತ್ತೇವೆ" ಎಂದಿದ್ದಾರೆ. ಸಿದ್ದರಾಮಯ್ಯ ಟ್ವೀಟ್ಗೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರಾಜ್ "ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯರವರೆ. ನಿಮ್ಮ ಮಾತಿನ ಮೇಲೆ ಭರವಸೆಯಿದೆ... ಆದರೆ ಈ ದಾರುಣ ಹಂತಕರನ್ನು ..ಅವರನ್ನು ಕಾಪಾಡುತ್ತಿರುವ ಹೀನ ರಾಕ್ಷಸರನ್ನುನಂಬುವ ಹಾಗಿಲ್ಲ...ದಯವಿಟ್ಟು ತನಿಖೆ ವಿಳಂಬವಾಗಿ... ಸಾಕ್ಷಾಧಾರಗಳು ನಾಶವಾಗದಂತೆ... ತುರ್ತು ಕ್ರಮ ತೆಗುದುಕೊಳ್ಳಿ. SIT ರಚಿಸಿ ಮತ್ತು ಈ ವರೆಗೆ ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಿ" ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











