'ಧುರಂಧರ್- 2' ನೋಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿ 2 ಪುಟ ರಿವ್ಯೂ ಬರೆದ ನಟಿ ರಮ್ಯಾ
ಆದಿತ್ಯಧರ್ ನಿರ್ದೇಶನದ ಸ್ಪೈ ಆಕ್ಷನ್ ಥ್ರಿಲ್ಲರ್ 'ಧುರಂಧರ್- 2' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ ಅದ್ಭು ರೆಸ್ಪಾನ್ಸ್ ಸಿಕ್ತಿದೆ. ತಾರೆಯರು ಕೂಡ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಒಂದು ವರ್ಗದ ಪ್ರೇಕ್ಷಕರು ಮಾತ್ರ ಸಿನಿಮಾ ನೋಡಿ ಬೇಸರಗೊಂಡಿದ್ದಾರೆ. ಟೀಕಿಸುತ್ತಿದ್ದಾರೆ. ಒಂದೊಂದು ಪ್ರೊಪಗಾಂಡಾ ಸಿನಿಮಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮಾಜಿ ಸಂಸಸದೆ, ನಟಿ ರಮ್ಯಾ ಸದ್ಯ ಸಿನಿಮಾ ನೋಡಿ ಸುದೀರ್ಘವಾಗಿ ಪೋಸ್ಟ್ ಮಾಡಿದ್ದಾರೆ.
"ಈಗಷ್ಟೆ 'ಧುರಂಧರ್- 2' ಸಿನಿಮಾ ನೋಡಿದೆ. ವಾವ್.. ಪ್ರಾಮಿಸ್ಸಿಂಗ್ ಆಗಿ ಇದ್ದದ್ದನ್ನು ಹೇಗೆ ಸಂಪೂರ್ಣ ಬೇಸರ ಮೂಡುವಂತೆ ಮಾಡಬಹುದು ಎನ್ನುವುದಕ್ಕೆ ಇದು ಮಾಸ್ಟರ್ಕ್ಲಾಸ್" ಎಂದು ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ. ಇದು ಅಂತ್ಯವಿಲ್ಲದ ಅಧ್ಯಾಯಗಳನ್ನು ಹೊಂದಿರುವ ತುಂಬಾ ನೀರಸ ವಿಷಯದ ಪಠ್ಯಪುಸ್ತಕವನ್ನು ಓದಿದ ಅನುಭವ ನೀಡುತ್ತದೆ. ಒಂದು ಹಂತಕ್ಕೆ ನಿಮ್ಮ ಮೆದುಳು ಕೈಕೊಟ್ಟು, ಮುಂದೆ ನಡೆಯುತ್ತಿರುವ ಈ ದುರಂತ ನೋಡಿ ನಗೋಕೆ ಶುರುಮಾಡುತ್ತದೆ" ಎಂದಿದ್ದಾರೆ.

"ನೀವು ನಿಜವಾಗಿಯೂ ಈ ಸಿನಿಮಾ ನೋಡಲು ಬಯಸಿದರೆ, ದಯವಿಟ್ಟು ಥಿಯೇಟರ್ನಲ್ಲಿ ನಿಮ್ಮ ಸಮಯ ಮತ್ತು ಹಣವನ್ನು ವ್ಯರ್ಥ ಮಾಡಬೇಡಿ" ಎಂದು ರಮ್ಯಾ ವ್ಯಂಗ್ಯವಾಡಿದ್ದಾರೆ. "ವಿರಾಮ ಹಾಕಿ, ನಿಮ್ಮ ಫೋನ್ ಅನ್ನು ಸ್ಕ್ರಾಲ್ ಮಾಡಿ ಮತ್ತು ನಿಮ್ಮ ಜೀವನದ ನಿರ್ಧಾರಗಳನ್ನು ಪ್ರಶ್ನಿಸಿ" ಎಂಬ ರೀತಿಯ ಸಿನಿಮಾ ಇದು ಎಂದು ತಿಳಿಸಿದ್ದಾರೆ. ಓಟಿಟಿಯಲ್ಲಿ ನೋಡವುದು ಉತ್ತಮ.. ಕೊನೆ ಪಕ್ಷ ಬೇಡ ಅಂದರೆ ನಿಲ್ಲಿಸಬಹುದು ಎಂದು ಕಾಮೆಂಟ್ ಮಾಡಿದ್ದಾರೆ.
ಡೈರೆಕ್ಷನ್, ಡೈಲಾಗ್ಸ್, ಎಡಿಟಿಂಗ್, ಬ್ಯಾಕ್ಗ್ರೌಂಡ್ ಸ್ಕೋರ್, ಆಕ್ಟಿಂಗ್-ಎಲ್ಲವೂ ಕಳಪೆಯಾಗಿದೆ. ಮಾರ್ಚ್ 19 ರಿಲೀಸ್ ಡೆಡ್ಲೈನ್ ಇದೆ ಅಂತ ಯಾರು ಯಾರೂ ಹೇಳ್ಲಿಲ್ಲ ಅನ್ನಿಸುತ್ತೆ. ಅಥವಾ ಹೇಳಿದ್ರೂ, "ಹೌದು ಎಲ್ಲಾ ಪರ್ಫೆಕ್ಟ್ ಆಗಿದೆ, ರಿಲೀಸ್ ಮಾಡಿ" ಅಂತ ಹೇಳಿದ್ದಾರೆ ಅನ್ಸತ್ತೆ" ಎಂದಿರುವ ರಮ್ಯಾ 'ಧುರಂಧರ್' ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಆ ಸಿನಿಮಾ ನೋಡುವಾಗ ಜನ ಕೂಗುತ್ತಿದ್ದರು, ಚಪ್ಪಾಳೆ ಹೊಡೆಯುತ್ತಿದ್ದರು, ಎಂಜಾಯ್ ಮಾಡುತ್ತಿದ್ದರು. ಎನರ್ಜಿ ಇತ್ತು, ಎಂಗೇಜ್ಮೆಂಟ್ ಇತ್ತು. ಆದರೆ ಇದರಲ್ಲಿ-ಆಡಿಯನ್ಸ್ ಸಂಪೂರ್ಣ ನಿರಾಶೆಗೊಂಡಿದ್ದರು. ಥಿಯೇಟರ್ನಲ್ಲೇ ಆ ನಿರಾಸೆಯ ವಾತಾವರಣ ಎದ್ದು ಕಾಣುತ್ತಿತ್ತು" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಧುರಂಧರ್' ಸರಣಿ ಸಿನಿಮಾಗಳಲ್ಲಿ ರಣ್ವೀರ್ ಸಿಂಗ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಡೀ ಸಿನಿಮಾ ಒಬ್ಬರೇ ಹೊತ್ತು ಸಾಗಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಕೂಡ ರಮ್ಯಾ ಅಣಕವಾಡಿದ್ದಾರೆ. "ರಣ್ವೀರ್ ಸಿಂಗ್ ಸಿನಿಮಾ ಹೊತ್ತು ಸಾಗಿದ್ದಾರೆ ಎಂದು ಎಲ್ಲರೂ ಹೇಳ್ತಿದ್ದಾರೆ. ಏನು ಹೊತ್ತುಕೊಂಡಿದ್ದಾರೆ? ನಾನು ನೋಡಿದ್ದು ಅವರ ಕೂದಲು ಮಾತ್ರ.. ಮೊದಲ ಭಾಗದಲ್ಲಿ ಅವರ ಕೂದಲಿಗೆ ವ್ಯಕ್ತಿತ್ವ ಇತ್ತು, ಪ್ರೆಸೆನ್ಸ್ ಇತ್ತು. ಆದರೆ ಸೀಕ್ವೆಲ್ನಲ್ಲಿ ಅದೇ ಅಡ್ಡಿಯಾಗಿದೆ. ಅತ್ಯುತ್ತಮ ಪೋಷಕ ನಟ ಎಂದು ನಾಮಿನೇಟ್ ಮಾಡಬಹುದು" ಎಂದು ಕುಹಕವಾಡಿದ್ದಾರೆ.
ಚಿತ್ರದಲ್ಲಿರುವ ವೈಲೆನ್ಸ್ ಬಗ್ಗೆ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. ಕೆಲವರು ತುಂಬಾ ಅತಿಯಾಯಿತು ಎಂದು ಮೂಗು ಮುರಿಯುತ್ತಿದ್ದಾರೆ. ಇನ್ನು ಕೆಲವರು 'ಅನಿಮಲ್', 'ಮಾರ್ಕೊ' ಚಿತ್ರಗಳಲ್ಲಿದ್ದ ಅರ್ಥವಿಲ್ಲದ ವೈಲೆನ್ಸ್ಗಿಂತ 'ಧುರಂಧರ್' ಚಿತ್ರದ ವೈಲೆನ್ಸ್ ದೃಶ್ಯಗಳಿಗೆ ಒಂದು ಅರ್ಥವಿದೆ ಎಂದು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಕೂಡ ರಮ್ಯಾ ಕಾಮೆಂಟ್ ಮಾಡಿದ್ದಾರೆ. "ವೈಲೆನ್ಸ್ ಅತಿಯಾಗಿದೆ..!!! ಇದು ಸಿನಿಮಾ ಅಲ್ಲ-ಯಾವುದೇ ವಸ್ತುವನ್ನು ಹೇಗೆ ಕ್ರಿಯೇಟಿವ್ ಆಗಿ ಆಯುಧವನ್ನಾಗಿಸಬಹುದು ಅನ್ನೋದಕ್ಕೆ ಒಂದು ದೃಶ್ಯ ಕೈಪಿಡಿ. ಸಿರಿಂಜ್? ಸ್ಪ್ಯಾನರ್? ಚಾಕು, ಸ್ಪೈಕ್ ಬಾಲ್, ರೀಪರ್, ಚೈನ್, ಗನ್, ಬಾಂಬ್, ಶಟರ್ ಸಿಕ್ಕಿದ್ದನೆಲ್ಲಾ ಆಯುಧವಾಗಿ ಬಳಸಿದ್ದಾರೆ" ಎಂದು ತಿಳಿಸಿದ್ದಾರೆ.
"ಮುಂದಿನ ದೃಶ್ಯವನ್ನು ಇನ್ನಷ್ಟು ಹಿಂಸಾತ್ಮಕ/ಹಾಸ್ಯಾಸ್ಪದವಾಗಿ ಹೇಗೆ ಮಾಡಬಹುದು?" ಎಂದು ನಿರ್ದೇಶಕರು ತಮಗೆ ತಾವೇ ಸವಾಲು ಹಾಕಿಕೊಂಡಂತಿದೆ. ಹೋಗ್ತಾ ಹೋಗ್ತಾ ಅಚ್ಚರಿ ಮೂಡಿಸಲ್ಲ ಬದಲಿಗೆ ಬೇಸರ ಮೂಡಿಸುವತ್ತದೆ. ಎರಡೂ ಕಾಲುಗಳನ್ನು ಕತ್ತರಿಸಿ ಅವನ ಮುಂಡದ ಮೇಲೆ ಸೀಮೆಎಣ್ಣೆ ಸುರಿದರೂ, ಆ ವ್ಯಕ್ತಿ ಡೈಲಾಗ್ ಹೊಡೆಯುತ್ತಿರುತ್ತಾನೆ. ಮೆಡಿಕಲ್ ಸೈನ್ಸ್ಗೆ ಜಿಂದಾಬಾದ್.. ಆಸ್ಕರ್ ಬೇಡ, ನೋಬೆಲ್ ಪ್ರಶಸ್ತಿ ಕೊಡಬೇಕು" ಎಂದು ನಟಿ ರಮ್ಯಾ ತಮಾಷೆ ಮಾಡಿದ್ದಾರೆ.
ಒಟ್ಟಾರೆ 'ಧುರಂಧರ್- 2' ದೊಡ್ಡ ಡಿಸಪಾಯಿಂಟ್ಮೆಂಟ್.. ನಿದ್ದೆ ತರಿಸುತ್ತೆ ಅಥವಾ ಕಾಮಿಡಿ ಅನಿಸುತ್ತೆ.. ಪಾರ್ಟ್- 1 ನಿಮಗೆ ಉತ್ಸಾಹ ತಂದಿದ್ದರೆ, ಪಾರ್ಟ್-2 ಯಾಕೆ ಬೇಕಿತ್ತು? ಅನ್ನಿಸುತ್ತೆ. ರಣವೀರ್ ನೀವು ಇದಕ್ಕೆ ಅರ್ಹರಲ್ಲ.. ಆದಿತ್ಯಧರ್ ಜಿಂಗೋಇಜಂ ಮತ್ತು ಪ್ರೊಪಗಾಂಡಾ ಈಗ ಹಳೆದಾಯ್ತು.. ಇದನ್ನು ಬಿಟ್ಟು ಮುಂದೆ ಹೋಗಿ ಎಂದು ರಮ್ಯಾ ಬರೆದುಕೊಂಡಿದ್ದಾರೆ.


Click it and Unblock the Notifications











