'ಹಣ ನೀಡಿ ಹಿಂಸೆ ನೀಡಿದ್ದಾರೆ' : ನಟನ ಮೇಲೆ ವಿಜಯಲಕ್ಷ್ಮಿ ಆರೋಪ!
'ಸೂರ್ಯವಂಶ', 'ನಾಗಮಂಡಲ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ವಿಜಯಲಕ್ಷ್ಮಿ ಸದ್ಯ ಆಸ್ಪತ್ರೆಯಲ್ಲಿ ಇದ್ದಾರೆ. ಕೆಲ ದಿನಗಳ ಹಿಂದೆ ಅನಾರೋಗ್ಯ ಕಾರಣದಿಂದ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಇರುವ ವಿಜಯಲಕ್ಷ್ಮಿ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ವಿಡಿಯೊ ಮಾಡಿ ಆಗಾಗ ಮಾಹಿತಿ ನೀಡುತ್ತಿದ್ದರು. ಆದರೆ, ಈ ಬಾರಿ ವಿಡಿಯೋ ಮೂಲಕ ತಮಗೆ ಆದ ಹಿಂಸೆಯನ್ನು ಹೇಳಿಕೊಂಡಿದ್ದಾರೆ. ನಟ ರವಿ ಪ್ರಕಾಶ್ ನನಗೆ ಕಿರುಕುಳ ನೀಡಿದ್ದಾರೆ ಎಂದು ವಿಜಯಲಕ್ಷ್ಮಿ ಗಂಭೀರ ಆರೋಪ ಮಾಡಿದ್ದಾರೆ.
ನಟ ರವಿಪ್ರಕಾಶ್ ವಿರುದ್ಧ ಈಗಾಗಲೇ ಪೊಲೀಸ್ ಇಲಾಖೆ ಮೊರೆ ಹೋಗಿರುವ ಅವರು ಘಟನೆಯ ಬಗ್ಗೆ ವಿವರ ನೀಡಿದ್ದಾರೆ. ಮುಂದೆ ಓದಿ...

1 ಲಕ್ಷ ಹಣ ನೀಡಿದ್ದ ರವಿ ಪ್ರಕಾಶ್
ನಟಿ ವಿಜಯಲಕ್ಷ್ಮಿ ಆಸ್ಪತ್ರೆ ಸೇರಿದ್ದ ವೇಳೆ ಸಾಕಷ್ಟು ಕಲಾವಿದರು ಅವರ ಸಹಾಯಕ್ಕೆ ಬಂದರು. ನಟ ಸುದೀಪ್, ಸಂಚಾರಿ ವಿಜಯ್ ಸೇರಿದಂತೆ ಸಾಕಷ್ಟು ನಟರು ಅವರ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದರು. ಅದೇ ರೀತಿ ನಟ ರವಿ ಪ್ರಕಾಶ್ ಕೂಡ 1 ಲಕ್ಷ ನೀಡಿದ್ದ. ಆದರೆ, ಹಣ ನೀಡಿದ್ದೇನೆ ಎನ್ನುವುದನ್ನು ಬೇರೆ ರೀತಿ ಬಳಸಿಕೊಳ್ಳಲು ಶುರು ಮಾಡಿದನಂತೆ ಎಂದು ವಿಜಯಲಕ್ಷ್ಮಿ ತಿಳಿಸಿದ್ದಾರೆ.

ರವಿ ಪ್ರಕಾಶ್ ಮೇಲೆ ಕಿರುಕುಳ ಆರೋಪ
ವಿಜಯಲಕ್ಷ್ಮಿಗೆ ಒಂದು ಲಕ್ಷ ಹಣಕಾಸು ನೆರವು ನೀಡಿದ ರವಿ ಪ್ರಕಾಶ್ ಪದೇ ಪದೇ ಫೋನ್ ಮಾಡಿ ಹಿಂಸೆ ನೀಡುತ್ತಿದ್ದನಂತೆ. ಆಸ್ಪತ್ರೆಗೆ ಬಂದು ವಿಜಯಲಕ್ಷ್ಮಿ ಅವರ ಅಕ್ಕನನ್ನು ಬೈದು, ನಿಂದನೆ ಮಾಡಿದ್ದನಂತೆ. ಇದರಿಂದ ತನ್ನ ಚಿಕಿತ್ಸೆಗೆ ತೊಂದರೆ ಆಗುತ್ತಿದೆ ಎಂದು ವಿಜಯಲಕ್ಷ್ಮಿ ತಮ್ಮ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ.

ಪೊಲೀಸರಿಗೆ ತಿಳಿಸಿದ ವಿಜಯಲಕ್ಷ್ಮಿ
ಘಟನೆಯ ಬಗ್ಗೆ ವಿಜಯಲಕ್ಷ್ಮಿ ಈಗಾಗಲೇ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರಂತೆ. ಮಲ್ಯ ಆಸ್ಪತ್ರೆಯಲ್ಲಿ ಇದ್ದ ವೇಳೆ ಹಣಕಾಸಿನ ನೆರವು ನೀಡಿದ್ದ ರವಿ ಪ್ರಕಾಶ್, ಜಯದೇವ ಆಸ್ಪತ್ರೆಗೆ ಬಂದ ರಾದ್ಧಾಂತ ಮಾಡಿದ್ದಾರಂತೆ. ಸದ್ಯ, ವಿಜಯಲಕ್ಷ್ಮಿ ಬನ್ನೇರುಘಟ್ಟದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾರು ಈ ರವಿಪ್ರಕಾಶ್ ?
ರವಿ ಪ್ರಕಾಶ್ ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದು, ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಮೇಘವೇ ಮೇಘವೇ', 'ರಮ್ಯಾ ಚೈತ್ರ ಕಾಲ' ಹಾಗೂ 'ಡೈರೆಕ್ಟರ್ ಸ್ಪೆಷಲ್' ಸಿನಿಮಾಗಳಲ್ಲಿ ರವಿ ಪ್ರಕಾಶ್ ಕಾಣಿಸಿಕೊಂಡಿದ್ದಾರೆ. ವಿಜಯಲಕ್ಷ್ಮಿಗೆ ಮಾನಸಿಕ ಹಿಂಸೆ ನೀಡಿರುವ ಆರೋಪವನ್ನು ರವಿ ಪ್ರಕಾಶ್ ಎದುರಿಸುತ್ತಿದ್ದಾರೆ.


Click it and Unblock the Notifications











