'ಶಬರಿಮಲೆಗೆ ಮಹಿಳೆಯರು ಹೋಗಬಹುದು' : ಸುಪ್ರೀಂ ತೀರ್ಪಿನ ಬಗ್ಗೆ ಕನ್ನಡ ನಟಿಯರ ಪ್ರತಿಕ್ರಿಯೆ
ಹುಡುಗರ ರೀತಿ ಹುಡುಗಿಯರಿಗೂ ಬೆಟ್ಟ ಏರಿ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯುವ ಆಸೆ ಇತ್ತು. ಆ ಆಸೆಗೆ ಈಗ ಜೀವ ಬಂದಿದೆ. ಇಂದು ಸುಪ್ರೀಂ ಕೋರ್ಟ್ ಮತ್ತೊಂದು ಮಹತ್ವದ ತೀರ್ಪು ನೀಡಿದೆ.
''ಮಹಿಳೆಯರು ಕೂಡ ಶಬರಿಮಲೆಗೆ ಹೋಗಬಹುದು, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಬಹುದು, ಒಬ್ಬ ಮಹಿಳೆಯ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಯಾರು ಕಿತ್ತುಕೊಳ್ಳಬಾರದು'' ಎಂದು ಸುಪ್ರೀಂ ಕೋರ್ಟ್ ಮಹಾ ತೀರ್ಪು ನೀಡಿದೆ.
ಈ ತೀರ್ಪಿನ ಬಗ್ಗೆ ಈಗ ಕನ್ನಡದ ಕೆಲವು ನಟಿಯರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ನಟಿ ಅನುಷಾ ರಂಗನಾಥ್, ನಿಶ್ಚಿಕಾ ನಾಯ್ಡು, ಪಲ್ಲಿವಿ ರಾಜು, ಆರ್ ನೇತ್ರ, ಸಂಜನಾ ಸೇರಿದಂತೆ ಅನೇಕರು ಫಿಲ್ಮಿಭೀಟ್ ಕನ್ನಡದ ಜೊತೆಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ: ಸುಪ್ರೀಂ ತೀರ್ಪಿನ ಮುಖ್ಯಾಂಶ, ಚಿತ್ರ ಮಾಹಿತಿ
ಅಂದಹಾಗೆ, ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕನ್ನಡ ನಟಿಯರ ಮುಕ್ತ ಮಾತುಗಳು ಮುಂದಿದೆ ಓದಿ..

ದೇವರಿಗೆ ಹುಡುಗರು, ಹುಡುಗಿಯರು ಎಂಬ ಭೇದ ಇರುವುದಿಲ್ಲ
''ಶಬರಿಮಲೆಗೆ ನಾವೂ ಯಾಕೆ ಹೋಗಬಾರದು ಅಂತ ಯಾವಾಗಲೂ ಅನಿಸುತ್ತಿತ್ತು. ಇದೊಂದು ಒಳ್ಳೆಯ ನಿರ್ಧಾರ. ದೇವರಿಗೆ ಹುಡುಗರು, ಹುಡುಗಿಯರು ಎಂಬ ಭೇದ ಇರುವುದಿಲ್ಲ. ಹಿಂದಿನಿಂದ ಇದ್ದ ಪದ್ಧತಿಯಲ್ಲಿಯೂ ಒಂದು ಅರ್ಥ ಇತ್ತು. ಆದರೆ, ಭಾವನಾತ್ಮಕವಾಗಿ ಹೆಣ್ಣು ಮಕ್ಕಳಿಗೆ ದೇವರು ಹತ್ತಿರ ಆಗಿರುತ್ತಾನೆ. ತಿರುಪತಿ, ಧರ್ಮಸ್ಥಳಕ್ಕೆ ಹೋದ ಹಾಗೆ ಇನ್ನು ಮುಂದೆ ನಾವು ಅಯ್ಯಪ್ಪ ಸ್ವಾಮಿಯ ದರ್ಶನ ಕೂಡ ಪಡೆಯಬಹುದು.'' - ಅನುಷಾ ರಂಗನಾಥ್, ನಟಿ

ಆಧುನಿಕತೆಗಿಂತ ಇಲ್ಲಿ ಮನುಷ್ಯತ್ವ ಮುಖ್ಯ
''ಇದನ್ನು ನಾನು ಸ್ವಾಗತಿಸುತ್ತೇನೆ. ದೇವರ ಮುಂದೆ ಎಲ್ಲ ಮಕ್ಕಳು ಸಮಾನ ಎಂದು ಹೇಳುತ್ತಾರೆ. ಈ ವಿಚಾರದಲ್ಲಿ ಅದು ಯಾಕೆ ಆಗಿರಲಿಲ್ಲ. ಕೆಲವರಿಗೆ ಆಧುನಿಕತೆಯಿಂದ ಈ ಪದ್ಧತಿ ಬದಲಾಗಿದೆ ಎನಿಸಿರಬಹುದು. ಆದರೆ, ಇಲ್ಲಿ ಆಧುನಿಕತೆಗಿಂತ ಮನುಷ್ಯತ್ವ ಎನ್ನುವುದು ಮುಖ್ಯ. ಎಲ್ಲರಿಗೂ ದೇವರ ದರ್ಶನ ಮಾಡುವ ಸ್ವಾತಂತ್ಯ ಇದೆ. ಋತುಮತಿಯಾದಾಗ ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೋಗಬಾರದು ಎನ್ನುವ ವಿಚಾರವನ್ನು ಅವರವರ ನಿರ್ಧಾರಕ್ಕೆ ಬಿಡಬೇಕು.'' - ಆರ್ ಜೆ ನೇತ್ರ, ನಟಿ, ರೇಡಿಯೋ ಜಾಕಿ

ಹುಡುಗ, ಹುಡುಗಿ ಎನ್ನುವ ಕಾರಣಕ್ಕೆ ತಡೆಯುವುದು ತಪ್ಪು
''ಈ ತೀರ್ಪಿನಿಂದ ತುಂಬ ಖುಷಿ ಆಗಿದೆ. ನಾವು ನಂಬುವ ದೇವರನ್ನು ಮನೆಯಲ್ಲಿ ಪೂಜಿಸುವುದು ಒಂದೇ, ದೇವಸ್ಥಾನದಲ್ಲಿ ಪೂಜಿಸುವುದು ಒಂದೇ. ದೇವಸ್ಥಾನದ ಮೇಲೆ ನಂಬಿಕೆ ಇಟ್ಟುಕೊಂಡಿದ್ದವರನ್ನು ಅವರ ಜಾತಿಯಿಂದ ಅಥವಾ ಹುಡುಗ, ಹುಡುಗಿ ಎನ್ನುವ ಕಾರಣಕ್ಕೆ ತಡೆಯುವುದು ತಪ್ಪು ಅನಿಸುತ್ತದೆ. ತೀರ್ಪುನಿಂದ ಸಂತಸ ಆಗಿದೆ. ನಾನು ಕೂಡ ಶಬರಿಮಲೆಗೆ ಹೋಗುತ್ತೇನೆ.'' - ನಿಶ್ಚಿಕಾ ನಾಯ್ಡು, ನಟಿ

ಎಲ್ಲವನ್ನು ಮೂಡನಂಬಿಕೆ ಎನ್ನುವುದಕ್ಕೆ ಆಗಲ್ಲ
''ಇಷ್ಟು ವರ್ಷದಿಂದ ಎಲ್ಲರೂ ಪಾಲಿಸಿತ್ತಿರುವ ಪದ್ಧತಿಯನ್ನು ಬಿಡುವುದು ನನಗೆ ವೈಯಕ್ತಿಕವಾಗಿ ತಪ್ಪು ಎಂದು ಅನಿಸುತ್ತದೆ. ಹಳೆಯ ಪದ್ಧತಿ ಮತ್ತು ಸಂಸ್ಕೃತಿಯಲ್ಲಿ ಇರುವ ಎಲ್ಲ ಅಂಶಗಳನ್ನು ಮೂಡನಂಬಿಕೆ ಎಂದು ಹೇಳಲು ಆಗುವುದಿಲ್ಲ. ಎಲ್ಲದಕ್ಕೂ ಒಂದು ಕಾರಣ ಇರುತ್ತದೆ. ಋತುಮತಿಯಾದಾಗ ಹುಡುಗಿಯರು ಅಷ್ಟು ದೂರ ಬೆಟ್ಟ ಹತ್ತುವುದಕ್ಕೆ ಕಷ್ಟ ಎನ್ನುವ ಕಾರಣಕ್ಕೆ ಈ ಪದ್ಧತಿ ಶುರು ಆಗಿರಬಹುದು. ಇದೊಂದೆ ಕಾರಣಕ್ಕೆ ಈ ಪದ್ಧತಿ ಇದ್ದರೆ ಈಗ ಬದಲಾಯಿಸಿದ್ದು ಸರಿ.'' - ಪಲ್ಲವಿ ರಾಜು, ನಟಿ

ಕುಟುಂಬದ ಜೊತೆಗೆ ಶಬರಿಮಲೆಗೆ ಹೋಗುತ್ತೇನೆ
''ನಾನು ಚಿಕ್ಕ ವಯಸ್ಸಿನಲ್ಲಿ ಇರುವಾಗ ಯಾರೂ ನನ್ನನ್ನು ಶಬರಿಮಲೆಗೆ ಕರೆದುಕೊಂಡು ಹೋಗಿರಲಿಲ್ಲ. ನಾನು ಧರ್ಮಸ್ಥಳ, ತಿರುಪತಿ, ಶಿರಡಿ ಹೀಗೆ ಎಲ್ಲ ಕಡೆ ತೆರಳಿದ್ದೇನೆ. ಆದರೆ, ನಮಗೆ ಶಬರಿಮಲೆಗೆ ಹೋಗಲು ಅವಕಾಶ ಇರಲಿಲ್ಲ. ಈಗ ತೀರ್ಪು ಬಂದ ಬಳಿಕ ನಾನು ಖಂಡಿತ ನನ್ನ ಕುಟುಂಬ ಜೊತೆಗೆ ಶಬರಿಮಲೆಗೆ ಹೋಗುತ್ತೇನೆ.'' - ಸಂಜನಾ, ನಟಿ

ಇದು ಭಾರತದ ಮಹಿಳೆಯರ ಸಬಲೀಕರಣ
ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ನಟಿ ರಾಗಿಣಿ ''ಭಕ್ತಿ ಎನ್ನುವುದು ತಾರತಮ್ಯ ಮಾಡುವ ಅಂಶವಲ್ಲ. ಎಲ್ಲ ವಯಸ್ಸಿನ ಹೆಣ್ಣು ಮಕ್ಕಳು ಕೂಡ ಇನ್ನು ಮುಂದೆ ಶಬರಿಮಲೆಗೆ ಹೋಗಬಹುದಾಗಿದೆ. ಇದು ಕೇವಲ ಗೆಲುವಲ್ಲ, ಇಡೀ ಭಾರತೀಯ ಮಹಿಳೆಯರ ಸಬಲೀಕರಣ'' - ರಾಗಿಣಿ ದ್ವಿವೇದಿ, ನಟಿ


Click it and Unblock the Notifications











