ಆಂಕರ್ ಅನುಶ್ರೀ ಮದುವೆ ಮುಹೂರ್ತ ಫಿಕ್ಸ್; ಇಲ್ಲಿದೆ ನೋಡಿ ಆಮಂತ್ರಣ ಪತ್ರಿಕೆ
ಕನ್ನಡ ನಿರೂಪಕಿ, ನಟಿ ಅನುಶ್ರೀ ಮದುವೆಗೆ ದಿನಗಣನೆ ಶುರುವಾಗಿದೆ. ಮುಂದಿನ ವಾರವೇ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಆದರೆ ಈ ಬಗ್ಗೆ ಆಕೆ ಈವರೆಗೆ ಪ್ರತಿಕ್ರಿಯಿಸಿಲ್ಲ. ಇದೀಗ ಅನುಶ್ರೀ ಹಾಗೂ ರೋಷನ್ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದೆ. ಬಹಳ ಸಿಂಪಲ್ ಆಗಿರುವ ಇನ್ವಿಟೇಷನ್ ಅಷ್ಟೇ ವಿಶೇಷವಾಗಿದೆ.
ಉದ್ಯಮಿ ರಾಮಮೂರ್ತಿ ಅವರ ಪುತ್ರ ರೋಷನ್ ಅವರೊಟ್ಟಿಗೆ ನಿರೂಪಕಿ ಅನುಶ್ರೀ ಹಸೆಮಣೆ ಏರುತ್ತಿದ್ದಾರೆ. ಬೆಂಗಳೂರಿನ ಹೊರವಲಯದ ರೆಸಾರ್ಟ್ನಲ್ಲಿ ಮದುವೆ ನಡೆಯಲಿದೆ. ಈಗಾಗಲೇ ಅದಕ್ಕಾಗಿ ಭರ್ಜರಿ ಸಿದ್ಧತೆ ನಡೀತಿದೆ. ಆಗಸ್ಟ್ 28ರಂದು ಅದ್ಧೂರಿ ಕಲ್ಯಾಣೋತ್ಸವ ನಡೆಯಲಿದೆ. ಬೆಳಗ್ಗೆ 10.05 ನಿಮಿಷಕ್ಕೆ ಮುಹೂರ್ತ ನಿಗದಿಯಾಗಿದೆ.

ಕನಕಪುರ ರಸ್ತೆಯ ಕಗ್ಗಲಿಪುರದ ತಿಟ್ಟಹಳ್ಳಿ ಬಳಿಯ ಸಂಭ್ರಮ ಸ್ವಾನ್ಲೈನ್ಸ್ ಸ್ಟುಡಿಯೋಸ್ ರೆಸಾರ್ಟ್ನಲ್ಲಿ ಮದುವೆ ನಡೆಯಲಿದೆ. ಸಿಂಪಲ್ ಆಗಿರುವ ಆಮಂತ್ರಣ ಪತ್ರಿಕೆಯಲ್ಲಿ ಅನುಶ್ರೀ ತಮ್ಮ ಮನದಾಳದ ಮಾತಿಗೆ ಅಕ್ಷರ ರೂಪ ಕೊಟ್ಟಿದ್ದಾರೆ. "ನೀವೆಲ್ಲಾ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿಯಾಗುವ ಹೊಸ ಮನ್ವಂತರ" ಎಂದು ಮುದ್ರಿಸಲಾಗಿದೆ. ಶೀಘ್ರದಲ್ಲೇ ಅನುಶ್ರೀ ತಮ್ಮ ಮದುವೆಯ ಶುಭಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳಲಿದ್ದಾರೆ.
ಬಹಳ ದಿನಗಳಿಂದ ಅನುಶ್ರೀ ಮದುವೆ ಬಗ್ಗೆ ಊಹಾಪೋಹ, ಅಂತೆಕಂತೆ ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ ಈ ಬಗ್ಗೆ ಆಕೆ ಪ್ರತಿಕ್ರಿಯಿಸುತ್ತಿರಲಿಲ್ಲ. 'ವಿದ್ಯಾಪತಿ' ಸಿನಿಮಾ ಬಿಡುಗಡೆ ವೇಳೆ ಇದೇ ಮದುವೆ ಆಗುವುದಾಗಿ ಹೇಳಿದ್ದರು. ಅದನ್ನು ಕೂಡ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಹೇಳಿದಂತೆಯೇ ಮದುವೆಗೆ ಅಣಿಯಾಗುತ್ತಿದ್ದಾರೆ. ಮದುವೆ ಆಗುವ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆಗೆ "ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು" ಎಂದಿದ್ದರು.

ಅನುಶ್ರೀ ಮದುವೆಗೆ ಕನ್ನಡ ಚಿತ್ರರಂಗದ ತಾರೆಯರು ಸಾಕ್ಷಿ ಆಗಲಿದ್ದಾರೆ. ಇನ್ನು ಕಿರುತೆರೆ ವಾಹಿನಿ ನಟ, ನಟಿಯರು ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಮಾಜಿ ಸ್ಪರ್ಧಿಗಳು ಕೂಡ ಅನುಶ್ರೀ ಕಲ್ಯಾಣೋತ್ಸವಕ್ಕೆ ಸಾಕ್ಷಿ ಆಗಲಿದ್ದಾರೆ. ಕಾರ್ಯಕ್ರಮವೊಂದರಲ್ಲಿ ರೋಷನ್ ಹಾಗೂ ಅನುಶ್ರೀ ಪರಿಚಯವಾಗಿತ್ತು. ಬಳಿಕ ಅದೇ ಪರಿಯಚ ಪ್ರೀತಿಗೆ ತಿರುಗಿ ಈಗ ಮದುವೆವರೆಗೂ ಬಂದು ನಿಂತಿದೆ ಎನ್ನಲಾಗ್ತಿದೆ.
'ಪುನೀತ ಪರ್ವ' ಕಾರ್ಯಕ್ರಮವನ್ನು ಅನುಶ್ರೀ ನಿರೂಪಣೆ ಮಾಡಿದ್ದರು. ಆ ಈವೆಂಟ್ ಜವಾಬ್ದಾರಿಯನ್ನು ರೋಷನ್ ವಹಿಸಿಕೊಂಡಿದ್ದರು. ಆಗ ಇಬ್ಬರ ನಡುವೆ ಶುರುವಾದ ಪರಿಚಯ ಇದೀಗ ಮದುವೆಗೆ ವೇದಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಉದ್ಯಮಿ ರೋಷನ್ ಕೊಡಗು ಮೂಲದವರು ಎನ್ನಲಾಗ್ತಿದೆ. ಆದರೆ ಈವರೆಗೆ ಅನುಶ್ರೀ ಮಾತ್ರ ಮದುವೆ ಬಗ್ಗೆ ಪ್ರತಿಕ್ರಿಯಿಸಿಲ್ಲ.
ನಟ ಶಿವರಾಜ್ಕುಮಾರ್- ಗೀತಾ ದಂಪತಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ಸಂಗೀತ ನಿರ್ದೇಶಕ ಹಂಸಲೇಖ, ಗಾಯಕರಾದ ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸೇರಿದಂತೆ ಚಿತ್ರರಂಗದ ಸಾಕಷ್ಟು ಗಣ್ಯರು ಅನುಶ್ರೀ-ರೋಷನ್ ಮದುವೆ ಸಮಾರಂಭಕ್ಕೆ ಹಾಜರಾಗುವ ಸಾಧ್ಯತೆಯಿದೆ.
ಮಂಗಳೂರು ಮೂಲದ ಅನುಶ್ರೀ ಮೊದಲಿಗೆ 'ನಮ್ಮ ಟಿವಿ' ಎಂಬ ವಾಹಿನಿಯಲ್ಲಿ ನಿರೂಪಕಿಯಾಗಿದ್ದರು. ಬಳಿಕ ಈಟಿವಿ ಕನ್ನಡ ವಾಹಿನಿಯ 'ಡಿಮ್ಯಾಂಡಪ್ಪೋ ಡಿಮ್ಯಾಂಡು' ಶೋ ನಿರೂಪಣೆ ಮಾಡಿದ್ದರು. ಬಿಗ್ಬಾಸ್ ಕನ್ನಡ ಸೀಸನ್-1 ಸ್ಪರ್ಧಿ ಕೂಡ ಆಗಿದ್ದರು. ಬಳಿಕ ಜೀ ಕನ್ನಡ ವಾಹಿನಿಯ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಾ ಬಂದರು. ಸಾಕಷ್ಟು ಖಾಸಗಿ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದಾರೆ.


Click it and Unblock the Notifications











