Don't Miss!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- News Rameshwar Cafe: ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣ: ದಾಳಿಗೆ ಸಹಾಯ ಮಾಡಿದ ವ್ಯಕ್ತಿ ಬಂಧನ- ತೀರ್ಥಹಳ್ಳಿ ಉಗ್ರನೊಂದಿಗೆ ಸಂಪರ್
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Lifestyle 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಲಾವಿದರೊಂದಿಗೆ ಕಾಫಿ ಕುಡಿದ ಹೊಸ ಸಚಿವ
ನೂತನವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಚಿವರಾಗಿರುವ ಸುನಿಲ್ ಕುಮಾರ್ ಇಂದು ವಿನೂತನವಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಜೊತೆಗೆ ಕಲಾವಿದರೊಟ್ಟಿಗೆ ಕಾಫಿ ಕುಡಿದು ಒಂದೊಳ್ಳೆ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಸಚಿವರಾಗಿ ಪದಗ್ರಹಣ ಮಾಡಿದ ಬಳಿಕ ''ನನ್ನ ಭೇಟಿಗೆ ಹಾರ, ಹೂಗುಚ್ಛ ತರಬೇಡಿ ಕನ್ನಡ ಪುಸ್ತಕ ತನ್ನಿ ಅದನ್ನು ನಾನು ಗ್ರಂಥಾಲಯಗಳಿಗೆ ನೀಡುತ್ತೇನೆ'' ಎಂದು ಹೇಳುವ ಮೂಲಕ ಗಮನ ಸೆಳೆದಿದ್ದ ಸುನಿಲ್ ಕುಮಾರ್, ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು ಸಚಿವರಿಗೆ ಹಾರ ಪೇಟ ತೊಡಿಸಿ ಅವರನ್ನು ಸ್ವಾಗತಿಸಿದರು.
ಬೆಂಗಳೂರಿನ ಜೆ.ಸಿ.ನಗರ ರಸ್ತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಭವನದ ಮೆಟ್ಟಿಲುಗಳ ಮೇಲೆ ಕುಳಿತು ಕಡತಗಳಿಗೆ ಸಹಿ ಮಾಡುವ ಮೂಲಕ ವಿನೂತನವಾಗಿ ಸುನಿಲ್ ಕುಮಾರ್ ಅವರು ಅಧಿಕಾರ ಸ್ವೀಕಾರ ಮಾಡಿದರು. ತಾಯಿ ಭುವನೇಶ್ವರಿಗೆ ಪೂಜೆ ಮಾಡಿದ ನೂತನ ಸಚಿವರು ಕನ್ನಡ ಭವನದ ಆವರಣದಲ್ಲಿ 2019- 20 ನೇ ಸಾಲಿನ ವಿವಿಧ ವಾರ್ಷಿಕ ಗೌರವ ಪ್ರಶಸ್ತಿ ಪಡೆದ ಇಬ್ಬರು ಗಣ್ಯರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.
ಆ ನಂತರ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇರುವ ಸಿರಿಗನ್ನಡ ಪುಸ್ತಕ ಮಳಿಗೆಗೆ ಭೇಟಿ ನೀಡಿ ಕೆಲವು ಕನ್ನಡ ಪುಸ್ತಕಗಳನ್ನು ಖರೀದಿಸಿದರು. ನಂತರ ಕಲಾಕ್ಷೇತ್ರದ ಆವರಣದಲ್ಲಿರುವ ಕ್ಯಾಂಟೀನ್ ಬಳಿ ಕಲಾವಿದರೊಟ್ಟಿಗೆ ಕುಳಿತು ಕಾಫಿ ಕುಡಿದು ಚರ್ಚೆ ನಡೆಸಿದರು. ಇಲಾಖೆಯ ಕುರಿತು ಅದರ ಫಲಾನುಭವಿಗಳಿಂದ ಮಾಹಿತಿ ನಡೆದುಕೊಂಡರು. ಸಲಹೆಗಳನ್ನು ಕೇಳಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸುನಿಲ್ ಕುಮಾರ್, ''ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಹಳ ದೊಡ್ಡ ಮತ್ತು ಶ್ರೀಮಂತ ಇಲಾಖೆ. ಈ ಇಲಾಖೆಯನ್ನು ಇನ್ನುಷ್ಟು ಶ್ರೀಮಂತಗೊಳಿಸುವ ಕಾರ್ಯ ಮಾಡುತ್ತೇನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪವರ್ ಬರಬೇಕು, ಪವರ್ (ಇಂಧನ) ಇಲಾಖೆಗೆ ಸಂಸ್ಕೃತಿ ಬರಬೇಕು ಹಾಗೊಂದು ಬದಲಾವಣೆ ಮಾಡ್ತೀನಿ'' ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೊತೆಗೆ ಇಂಧನ ಖಾತೆಯನ್ನೂ ಸುನಿಲ್ ಕುಮಾರ್ ವಹಿಸಿಕೊಂಡಿದ್ದಾರೆ.
''ಇಲಾಖೆಯ ಸುಧಾರಣೆ ಮಾಡುವ ಕೆಲಸ ಮಾಡುತ್ತೇನೆ. ಈ ನಿಟ್ಟಿನಲ್ಲಿ ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತೀನಿ. ಜನರು ನಿತ್ಯ ಒಂದಾದರೂ ಕನ್ನಡ ಪೇಪರ್ ಓದಬೇಕು. ವಾರಕ್ಕೆ ಒಂದು ಕನ್ನಡ ಪುಸ್ತಕ ಓದಿ, ತಿಂಗಳಿಗೆ ಒಂದು ಕನ್ನಡ ಸಿನಿಮಾ ನೋಡುವ ಕೆಲಸ ಮಾಡಲಿ. ಜನರು ಕೂಡಾ ಮನೆಯಲ್ಲಿ ಕನ್ನಡ ಮಾತಾಡುವ ಕೆಲಸ ರೂಢಿಸಿಕೊಳ್ಳಬೇಕು. ಎಲ್ಲಾ ಅಕಾಡೆಮಿಗಳನ್ನ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡ್ತೀನಿ. ಎಲ್ಲವನ್ನು ಕಾನೂನು ಮೂಲಕ ಜಾರಿಗೆ ತರಲು ಸಾಧ್ಯವಿಲ್ಲ. ಜನರು ಕೂಡಾ ಕೈಗೂಡಿಸಬೇಕು'' ಎಂದು ಸಚಿವರು ಹೇಳಿದರು.
ಸಚಿವರೊಟ್ಟಿಗೆ ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಟಿ.ಎಸ್.ನಾಗಾಭರಣ, ನಟಿ ತಾರಾ, ಮಾಳವಿಕ ಹಾಗೂ ಇನ್ನು ಕೆಲವು ಹಿರಿಯ ಕಲಾವಿದರು, ಸಾಹಿತಿಗಳು ಹಾಜರಿದ್ದು, ಇಲಾಖೆಯ ಕುರಿತಾಗಿ ಸಚಿವರೊಟ್ಟಿಗೆ ಮಾತುಕತೆ ಮಾಡಿದರು. ಇಲಾಖೆಯ ಇತರ ಅಧಿಕಾರಿಗಳು ಸಹ ಈ ಸಮಯದಲ್ಲಿ ಹಾಜರಿದ್ದರು. ಕಾರ್ಯಕ್ರಮದ ಬಗ್ಗೆ ಟ್ವಿಟ್ಟರ್ನಲ್ಲಿ ಚಿತ್ರ ಸಹಿತ ಮಾಹಿತಿ ಹಂಚಿಕೊಂಡಿರುವ ಸಚಿವರು ''ರವೀಂದ್ರ ಕಲಾ ಕ್ಷೇತ್ರದ ಮೆಟ್ಟಿಲುಗಳಲ್ಲಿ ಕೂತು ಕಡತಕ್ಕೆ ಸಹಿ ಮಾಡುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಾಬ್ದಾರಿ ಸ್ವೀಕಾರ. ಈ ಸಂದರ್ಭದಲ್ಲಿ ಪುಸ್ತಕ ಖರೀದಿಸಿ ಸಾಹಿತಿಗಳು ಹಾಗೂ ಕಲಾವಿದರೊಂದಿಗೆ ಕಾಫಿ ಸೇವನೆ ಮಾಡಿದೆ'' ಎಂದಿದ್ದಾರೆ.