ತಮಿಳುನಾಡಿನಲ್ಲಿ 'ಭೀಮ', 'ಕೃಷ್ಣಂ ಪ್ರಣಯಸಖಿ' ಹೌಸ್ಫುಲ್; ಯಾವ ಚಿತ್ರಮಂದಿರ? ಇಲ್ಲಿದೆ ಮಾಹಿತಿ
ಒಳ್ಳೆ ಸಿನಿಮಾಗಳನ್ನು ಕನ್ನಡ ಸಿನಿರಸಿಕರು ಕೈಬಿಡಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಕಳೆದ ಆರೇಳು ತಿಂಗಳಿಂದ ಕನ್ನಡ ಸಿನಿಮಾಗಳು ಪ್ರೇಕ್ಷಕರ ಬರ ಎದುರಿಸುತ್ತಿದ್ದವು. ಇದೀಗ 'ಭೀಮ' ಹಾಗೂ 'ಕೃಷ್ಣಂ ಪ್ರಣಯ ಸಖಿ' ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುತ್ತಿವೆ. ಎರಡೂ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಆಗಸ್ಟ್ 9ಕ್ಕೆ ತೆರೆಕಂಡ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ 'ಭೀಮ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಎರಡನೇ ವಾರವೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೊದಲ ವಾರವೇ ಸಿನಿಮಾ ಕಲೆಕ್ಷನ್ 15 ಕೋಟಿ ರೂ. ದಾಟಿತ್ತು. ಸೆಕೆಂಡ್ ವೀಕೆಂಡ್ ರಜೆಗಳು ಸಿನಿಮಾ ಕಲೆಕ್ಷನ್ಗೆ ಹೆಚ್ಚುವಂತೆ ಮಾಡಿದೆ.

ಇನ್ನು ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಬಂದ 'ಕೃಷ್ಣಂ ಪ್ರಣಯ ಸಖಿ' ಕೂಡ ಫ್ಯಾಮಿಲಿ ಆಡಿಯನ್ಸ್ನ ಸೆಳೆಯುತ್ತಿದೆ. ವೀಕೆಂಡ್ನಲ್ಲಿ ಸಿನಿಮಾ ಕೆಲವೆಡೆ ಹೌಸ್ಫುಲ್ ಪ್ರದರ್ಶನ ಕಂಡಿದೆ. 4 ದಿನಕ್ಕೆ 6 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಪರಭಾಷಾ ಸಿನಿಮಾಗಳ ಹಾವಳಿ ನಡುವೆಯೂ ರಾಜ್ಯದಲ್ಲಿ ಕನ್ನಡ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡುತ್ತಿವೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಗೆದ್ದು ಬೀಗಿದ್ದಾರೆ.
ಡ್ರಗ್ಸ್ ವ್ಯಸನದ ವಿರುದ್ಧ ಸಂದೇಶ ಸಾರುವ ಆಕ್ಷನ್ ಎಂಟರ್ಟೈನರ್ ಸಿನಿಮಾ 'ಭೀಮ'. ಒಂದಷ್ಟು ಹೊಸ ಪ್ರತಿಭೆಗಳನ್ನು ಸೇರಿಸಿಕೊಂಡು ದುನಿಯಾ ವಿಜಯ್ ಸಿನಿಮಾ ಮಾಡಿ ಗೆದ್ದಿದ್ದಾರೆ. ಮಾಸ್ ಪ್ರೇಕ್ಷಕರಿಗಂತೂ ಸಿನಿಮಾ ಭರ್ಜರಿ ಮನರಂಜನೆ ಉಣಬಡಿಸುತ್ತಿದೆ. ಚಿತ್ರತಂಡದ ಭರ್ಜರಿ ಪ್ರಚಾರ ಚಿತ್ರಕ್ಕೆ ವರದಾನವಾಗಿದೆ. ಕಳೆದ ವರ್ಷವೇ ಬರಬೇಕಿದ್ದ ಸಿನಿಮಾ ಕಾರಣಾಂತರಗಳಿಂದ ತಡವಾಗಿತ್ತು. ಕೊನೆಗೆ ತೆರೆಗೆ ಬಂದು ಸದ್ದು ಮಾಡ್ತಿದೆ.
ರೊಮ್ಯಾಂಟಿಕ್ ಕಾಮಿಡಿ ಎಂಟರ್ಟ್ರೈನರ್ 'ಕೃಷ್ಣಂ ಪ್ರಣಯ ಸಖಿ' ಚಿತ್ರದಲ್ಲಿ ಗಣಿ ಮ್ಯಾಜಿಕ್ ಮುಂದುವರೆದಿದೆ. ಗೋಲ್ಡನ್ ಸ್ಟಾರ್ ಜೊತೆ ಸೇರಿ ಸಾಧುಕೋಕಿಲ ಹಾಗೂ ರಂಗಾಯಣ ರಘು ಪ್ರೇಕ್ಷಕರನ್ನು ನಗಿಸುತ್ತಿದ್ದಾರೆ. 'ದಂಡುಪಾಳ್ಯ' ರೀತಿಯ ಕ್ರೈಂ ಸಿನಿಮಾ ಮಾಡಿದ್ದ ಶ್ರೀನಿವಾಸ್ ರಾಜು ಈ ಬಾರಿ ರೊಮ್ಯಾಂಟಿಕ್ ಸಿನಿಮಾ ಮಾಡಿ ಹುಬ್ಬೇರಿಸಿದ್ದಾರೆ.
ಕರ್ನಾಟಕ ಮಾತ್ರವಲ್ಲದೇ ತಮಿಳುನಾಡಿನಲ್ಲೂ 'ಭೀಮ' ಹಾಗೂ 'ಕೃಷ್ಣಂ ಪ್ರಣಯಸಖಿ' ಸಿನಿಮಾಗಳು ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಕರ್ನಾಟಕದ ಗಡಿಯ ಹೊಸೂರಿನ 'ಗ್ರ್ಯಾಂಡ್ ಸಿನಿಮಾಸ್' ಚಿತ್ರಮಂದಿರದಲ್ಲಿ ಬೇಡಿಕೆಗೆ ತಕ್ಕಂತೆ ಕನ್ನಡ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಎರಡು ಸಣ್ಣ ಸ್ಕ್ರೀನ್ ಥಿಯೇಟರ್ಗಳು ಅಲ್ಲಿವೆ. ಸದ್ಯ 'ಭೀಮ' ಹಾಗೂ 'ಕೃಷ್ಣಂ ಪ್ರಣಯಸಖಿ' ಶೋಗಳನ್ನು ಕೊಡುತ್ತಿದ್ದು ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಶೋಗಳು ಹೌಸ್ಫುಲ್ ಆಗುತ್ತಿವೆ. ಹಿಂದೆ ದರ್ಶನ್ ನಟೆಯ 'ಕಾಟೇರ' ಚಿತ್ರ ಕೂಡ ಅಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಇದೀಗ 'ಭೀಮ', 'ಕೃಷ್ಣಂ ಪ್ರಣಯಸಖಿ' ಚಿತ್ರಗಳು ಅಲ್ಲಿ ಹೌಸ್ಫುಲ್ ಆಗುತ್ತಿದೆ. ಈ ಬಗ್ಗೆ 'ಗ್ರ್ಯಾಂಡ್ ಸಿನಿಮಾಸ್' ಥಿಯೇಟರ್ನವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವಿತರಕ ಕಾರ್ತಿಕ್ ಗೌಡ ಪ್ರತಿಕ್ರಿಯಿಸಿದ್ದಾರೆ.
ಮಲ್ಟಿಪ್ಲೆಕ್ಸ್ ಮಾಲೀಕರಾದ ಭಾಸ್ಕರ್ ಮೊದಲಿನಿಂದಲೂ ಕನ್ನಡ ಸಿನಿಮಾಗಳನ್ನು ಅಲ್ಲಿ ಪ್ರದರ್ಶಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಸಣ್ಣ ಸಿನಿಮಾ ದೊಡ್ಡ ಸಿನಿಮಾ ಎಂದು ನೋಡದೇ ಕನ್ನಡ ಸಿನಿಮಾಗಳನ್ನು ನಿಯಮಿತವಾಗಿ ಅಲ್ಲಿ ರಿಲೀಸ್ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇನ್ನು 'ಘೋಸ್ಟ್', 'ಸಲಾರ್'(ಕನ್ನಡ), 'ಬ್ಯಾಚುಲರ್ ಪಾರ್ಟಿ', 'ಕಲ್ಕಿ 2898AD'(ಕನ್ನಡ) ಕೂಡ ಅಲ್ಲಿ ಪ್ರದರ್ಶನ ಕಂಡಿತ್ತು.


Click it and Unblock the Notifications











