ಪ್ರಥಮ್ ಜೊತೆ ಮತ್ತೆ ದರ್ಶನ್ ಫ್ಯಾನ್ಸ್ ಕಿರಿಕ್, ಖಡಕ್ ಎಚ್ಚರಿಕೆ ನೀಡಿದ ದೇವ್ರಂಥ ಮನುಷ್ಯ...!
ನಟ, ನಿರ್ದೇಶಕ, ಬಿಗ್ ಬಾಸ್ ವಿನ್ನರ್, ಸಾಮಾಜಿಕ ಕಾರ್ಯಕರ್ತ, ಕೆಲ ರಾಜಕಾರಣಿಗಳ ಮೊಮ್ಮಗ, ಇನ್ನೂ ಕೆಲ ರಾಜಕಾರಣಿಗಳ ತಮ್ಮನ ಮಗ ಹೀಗೆ ನಾನಾ ನಾನಾ ರೂಪದಲ್ಲಿ ಗುರುತಿಸಿಕೊಂಡವರು ಪ್ರಥಮ್.
ಇಂಥಾ ಪ್ರಥಮ್ ಕಂಡರೆ ದರ್ಶನ್ ಅಭಿಮಾನಿಗಳಿಗೆ ಎಲ್ಲಿಲ್ಲದ ಅಕ್ಕರೆ. ಪ್ರಥಮ್ ಕೂಡ ದರ್ಶನ್ ಅವರ ಅಭಿಮಾನಿಗಳ ಮೇಲೆ ವಿಶೇಷವಾದ ಒಲವು ಇದೆ. ಹೀಗಾಗಿಯೇ ಆಗಾಗ ಇಬ್ಬರ ನಡುವೆ ಕಿರಿಕ್ ಆಗುತ್ತೆ. ಸಾಮಾಜಿಕ ಜಾಲತಾಣದಲ್ಲಿ ವಾಕ್ಸಮರ ನಡೆಯುತ್ತೆ. ಇದರ ಮಂದುವರೆದ ಭಾಗವೆನ್ನುವಂತೆ ಈಗ ಪ್ರಥಮ್ ಅವರನ್ನು ನೇರಾನೇರವಾಗಿಯೇ ದರ್ಶನ್ ಅಭಿಮಾನಿಗಳು ನಿಂದಿಸಲು ಶುರು ಮಾಡಿದ್ದಾರೆ. ಹೀಗೆಂದು ಖುದ್ದು ಪ್ರಥಮ್ ಹೇಳಿದ್ದಾರೆ. ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘವಾಗಿ ಬರೆದುಕೊಂಡಿರುವ ಪ್ರಥಮ್, ಸಂಜೆ ಗ್ರಾಮಾಂತರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಆಪ್ತರೊಟ್ಟಿಗೆ ಊಟಕ್ಕೆ ಕೂತಿದ್ವಿ, ಕೆಲವರು ಫೋಟೋ ತಗೊಂಡ್ರು, ಜೈ ಡಿ ಬಾಸ್ ಅಂತ ಬಲವಂತವಾಗಿ ಕೂಗೋಕೆ ಹೇಳಿ ಗಲಾಟೆ ಕೂಗಿದ್ರು, ಒಳ್ಳೇದಾಗ್ಲಪ್ಪ ಅಂದೆ, ಅಶ್ಲೀಲ ಪದ ಬಳಸಿ ಕೈಮಿಲಾಯಿಸೋಕೆ ಬಂದ್ರು! ಅಲ್ಲಿದ್ದ 8ಜನ ಬೌನ್ಸರ್ ಆ ಗೂಂಡಗಳನ್ನ ಎಳೆದು ಹೊರಗೆ ತಳ್ಳಿದ್ರು, ಕ್ಷಮೆ ಕೇಳಿದ್ರು, ಬಿಟ್ಟಿದ್ದೀನಿ ಎಂದಿದ್ದಾರೆ.
ಇನ್ನೂ ಹೋಟೆಲ್ ನ ಎಲ್ಲಾ ಸಿಬ್ಬಂದಿ ಹಾಗೂ ಮ್ಯಾನೇಜರ್ ಮನವಿ ಮೇರೆಗೆ ನಾನು ಕಂಪ್ಲೇಂಟ್ ಕೊಡಬಾರ್ದು ಅಂತ ನಿರ್ಧರಿಸಿದೆ, ನಮ್ಮ ಪಾಡಿಗೆ ನಾವಿದ್ದೇವೆ.ನಿಮ್ಮ ಪಾಡಿಗೆ ನೀವಿರಿ. ದರ್ಶನ್ ಸರ್ ಅವ್ರ ಪಾಡಿಗೆ ಇದ್ದಾರೆ. but ಈ ಮಿನಿ ಗೂಂಡಾಗಳ ನಿಗರಾಟ ನೋಡೋಕಾಗ್ತಿಲ್ಲ, ಹೇಗಿದ್ರೂ ಹೋಟೆಲ್ ಲಿ CCtv ಇದೆ.ಇದು ಹೀಗೆ ಮುಂದುವರೆದರೆ ನಾನಂತು ಸುಮ್ಮನೆ ಕೂರಲ್ಲ ಎಂದು ಸೋಶಿಯಲ್ ಮೀಡಿಯಾ ಮೂಲಕ ಎಚ್ಚರಿಕೆಯನ್ನು ಕೂಡ ಪ್ರಥಮ್ ನೀಡಿದ್ದಾರೆ.
ಮುಂದುವರೆದು ದರ್ಶನ್ ಸರ್ ಅವ್ರ ಪಾಡಿಗೆ ಅವರಿದ್ರೂ ಈ ಮಿನಿ ಗೂಂಡಗಳು ನೆಮ್ಮದಿಯಾಗಿರೋಕೆ ಬಿಡಲ್ಲ ಅನ್ಸುತ್ತೆ, ಎಲ್ಲವೂ CCtvಲಿ record ಆಗಿದೆ ಒತ್ತಾಯದಿಂದ ಜೈ ಡಿ ಬಾಸ್ ಅನ್ನಿಸೋದು, ಅಶ್ಲೀಲ ಪದ ಬಳಸೋದು ನೋಡ್ತಾ ಇರೋಕಾಗಲ್ಲ, ನಾನು ಒಂದು ಕಂಪ್ಲೇಟ್ ಕೊಟ್ರೆ ಕಂಬಿ ಎಣಿಸಬೇಕಾಗುತ್ತದೆ. ಮುಚ್ಕೊಂಡು ಮೈಬಗ್ಗಿಸಿ ದುಡಿದು ಚೆನ್ನಾಗಿ ಬದುಕಿ ಎಂದು ಹೇಳಿರುವ ಪ್ರಥಮ್ ತಮ್ಮ ಈ ಸಾಲುಗಳನ್ನು ದರ್ಶನ್ ಅವರ 'ಎಕ್ಸ್' ಖಾತೆಗೆ ಕೂಡ ಟ್ಯಾಗ್ ಮಾಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಪ್ರಥಮ್ ಇದು ಎರಡನೇ ಬಾರಿ ಆಗ್ತಿರೋದು, ನಾನು ಒಂದು ಕಂಪ್ಲೇಟ್ ಕೊಟ್ರೆ ಜೈಲು ಕೇಸ್ ಅಂತ ಅಲಿಬೇಕಾಗುತ್ತದೆ.ಅಲ್ಲಿದ್ದ ನಾಲ್ಕು ಪುಡಿರೌಡಿಗಳ ಫ್ಯಾಮಿಲಿ ನೆನಪಿಸಿಕೊಂಡು ಸುಮ್ನಿದ್ದೀನಿ. ಕಿರುಚಾಡಿದ್ದ ವಿಡಿಯೋ ಮಿಸ್ ಬಿಹೇವ್ ಮಾಡಿದ್ದು ಎಲ್ಲವೂ ಇದೆ. ಸುಮ್ನೆ ಮುಚ್ಕೊಂಡು ಇರೋಕೆ ಏನ್ರೋ ರೋಗ ನಿಮ್ಗೆ? ಬದುಕು ಸುಂದರವಾದದ್ದು. ಹಾಳುಮಾಡ್ಕೊಬೇಡಿ ಎಂಬ ಕಿವಿ ಮಾತನ್ನೂ ಕೂಡ ಹೇಳಿದ್ದಾರೆ ಕನ್ನಡ ಚಿತ್ರರಂಗದ ದೇವ್ರಂಥ ಮನುಷ್ಯ ಪ್ರಥಮ್.
ಅಂದ್ಹಾಗೇ ದರ್ಶನ್ ಜೈಲು ಪಾಲಾದ ದಿನದಿಂದ, ಪ್ರಥಮ್ ಕುಂತರೂ ನಿಂತರೂ ದರ್ಶನ್ ಧ್ಯಾನ ಮಾಡುತ್ತಿದ್ದರು. ದರ್ಶನ್ ಅವರ ಅಸಂಖ್ಯಾತ ಅಗಣಿತ ಅಭಿಮಾನಿಗಳನ್ನು ಅಂಧಾಭಿಮಾನ ಎಂದು ಸಂಭೋದಿಸಿದ್ದರು. ಆ ನಂತರ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದ್ದರು. ಅಂಧಾಭಿಮಾನಿಗಳೇ ನಾನೆಷ್ಟು ತಿಳುವಳಿಕೆ ಹೇಳಿದ್ರೂ ಕೇಳಲಿಲ್ಲ! ಮನೆಗೆ ಪೊಲೀಸ್ ನೋಟಿಸ್ ಬಂದಮೇಲೆ ಸ್ಟೇಷನ್ಗೆ ಬಂದಾಗ ನಾವು ಪ್ರಥಮ್ ಅಭಿಮಾನಿ, ಯಾರೋ ಫೇಕ್ ಪ್ರೊಫೈಲ್ ಮಾಡಿಬಿಟ್ಟಿದ್ದಾರೆ ಅಂತ ಕಾಲಿಗೆ ಬೀಳ್ತೀರಾ ಎಂದು ವ್ಯಂಗ್ಯವಾಡಿದ್ದರು. ಈಗ ಮತ್ತೊಮ್ಮೆ ದರ್ಶನ್ ಅಭಿಮಾನಿಗಳಿಗೆ ಪ್ರಥಮ್ ಎಚ್ಚರಿಕೆಯನ್ನು ನೀಡಿದ್ದಾರೆ.


Click it and Unblock the Notifications











